Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದ ಮಹಿಳೆಗೆ ಆನ್ಲೈನ್ ಮೂಲಕ ವಂಚನೆ: 7.75 ಲಕ್ಷ ಖೋತಾ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಪತಂಜಲಿ ಚಿಕಿತ್ಸಾಲಯಕ್ಕೆ ಆರಂಭಿಸಲು ನೊಂದಾವಣಿಗಾಗಿ ಅರ್ಜಿ ಕುಂದಾಪುರದ ಮಹಿಳೆಯೊಬ್ಬರು 7.75ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಕೋಟೇಶ್ವರದ ಪ್ರಶಾಂತಿ ನಿಕೇತನದ ನಿವಾಸಿ ಅನುರಾಧ ಹೊಳ್ಳ (39) ವಂಚನೆಗೊಳಗಾದ ಮಹಿಳೆ.

ಅನುರಾಧ ಅವರು ಪತಂಜಲಿ ಚಿಕಿತ್ಸಾಲಯ ಉದ್ಯಮ ಆರಂಭಿಸಲು ಆಗಸ್ಟ್ 9 ರಂದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಇದಾದ ಎರಡು ದಿನಗಳ ನಂತರ ಅವರಿಗೊಂದು ಕರೆ ಬಂದಿದ್ದು, ಆ ಕರೆಯಲ್ಲಿ ಅವರ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಮುಂತಾದ ಪ್ರಮುಖ ದಾಖಲೆಗಳನ್ನು ಹಾಗೂ ಭಾವಚಿತ್ರದ ಪ್ರತಿಯನ್ನು ವಾಟ್ಸಪ್ ಮುಖಾಂತರ ಕಳುಹಿಸಲು ತಿಳಿಸಲಾಯಿತು. ನೊಂದಣಿಗಾಗಿ 50,000 ರೂ. ಹಣವನ್ನು ಪಾವತಿಸುವಂತೆ ತಿಳಿಸಲಾಯಿತು. ಅಗಸ್ಟ್ 23ರಂದು ಅನುರಾಧ ತಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಪಾವತಿಸಿದ್ದಾರೆ. ಸೆಪ್ಟೆಂಬರ್ 1 ರಂದು ಪುನಃ ಎರಡು ಲಕ್ಷದ ಮೂವತ್ತು ಸಾವಿರ ಹಣವನ್ನು ಕಟ್ಟಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ

ಇಷ್ಟೇ ಅಲ್ಲದೇ ಆಯುರ್ವೇದ ಉತ್ಪನ್ನಗಳನ್ನು ಖರೀದಿಸಲು 2.5 ಲಕ್ಷ ಹಣವನ್ನು ವಂಚಕರು ಕೇಳಿದ್ದು, ಅದಕ್ಕೆ 1.10 ಲಕ್ಷರೂ ಸಂದಾಯ ಮಾಡಿದ್ದರು ನಂತರ ವ್ಯಾಟ್ ಹಾಗೂ ಇತರೆ ನೆಪವೊಡ್ಡಿ ಪ್ರತ್ಯೇಕವಾಗಿ 80,000 ಹಾಗೂ 50,000ರೂ ಹಣವನ್ನು ವಂಚಕರು ಪಡೆದುಕೊಮಡಿದ್ದರು. ಇಷ್ಟಾದರೂ ಕೂಡ ಅನುರಾಧ ಅವರಿಗೆ ತಾನು ವಂಚನೆಗೊಳಗಾಗುತ್ತಿರುವೆನೆಂದು ತಿಳಿಯಲಿಲ್ಲ.

ಹೀಗೆ ಹಣವನ್ನು ಪಡೆದ ವಂಚಕರು ನಂತರದ ದಿನಗಳಲ್ಲಿ ಅನುರಾಧ ಅವರಿಗೆ ಕರೆ ಮಾಡುವುದನ್ನು ನಿಲ್ಲಿಸಿದರು. ಹಲವು ದಿನಗಳು ಕಳೆದರು ಯಾವುದೇ ಮಾಹಿತಿ ದೊರಕದಿದ್ದಾಗ ಅನುರಾಧ ಅವರಿಗೆ ಅನುಮಾನ ಬಂದು ಅದೇ ನಂಬರ್‌ಗೆ ಕರೆ ಮಾಡಿದ್ದಾರೆ. ಆದರೆ ಆ ನಂಬರ್ ಸ್ಥಗಿತಗೊಂಡಿತ್ತು. ಒಟ್ಟು ವಂಚಕರು ೭.೭೫ ಲಕ್ಷ ಹಣವನ್ನು ಆನ್ಲೈನ್ ಮೂಲಕವೇ ನಂಬಿಸಿ ಲಪಟಾಯಿಸಿದ್ದರು. ಅನುರಾಧ ಅವರು ಅವರು ಪೋಲಿಸರಿಗೆ ದೂರು ನೀಡಿದ್ದು, ತನಿಖೆ ಮುಂದುವರಿದಿದೆ.

 

Exit mobile version