Kundapra.com ಕುಂದಾಪ್ರ ಡಾಟ್ ಕಾಂ

ಡಿ.25-29: ಕುಂದಾಪುರದಲ್ಲಿ ಕುವೆಂಪು ನಾಟಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವ ಮಾನವತೆ ಸಂದೇಶ ಸಾರಿದ ಮಹಾನ್ ದಾರ್ಶನಿಕ ಕವಿ ಕುವೆಂಪು ಅವರ ಜನ್ಮ ದಿನೋತ್ಸವದ ನೆನಪಿಗಾಗಿ ಪ್ರತಿವರ್ಷ ರಂಗಕಹಳೆ ರಿ. ಮಕ್ಕಳ ರಂಗಶಾಲೆ ಆಯೋಜಿಸುತ್ತಿರುವ ’ಕುವೆಂಪು ನಾಟಕೋತ್ಸವ’ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಆಯೋಜನೆಗೊಂಡಿದ್ದು ಡಿ. 25ರ ಮಂಗಳವಾರದಿಂದ ಡಿ.29ರ ಶನಿವಾರದ ತನಕ ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜಿನ ಡಾ. ಹೆಚ್. ಶಾಂತಾರಾಮ್ ಬಯಲು ರಂಗ ಮಂಟಪದಲ್ಲಿ ಜರುಗಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ಹಾಗೂ ಭಂಡಾರ್ಕಾರ್ಸ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗುತ್ತಿರುವ 18ನೇ ಕುವೆಂಪು ನಾಟಕೋತ್ಸವದಲ್ಲಿ ಪ್ರತಿ ದಿನ ಸಂಜೆ 6 ರಿಂದ ಎರಡು ನಾಟಕಗಳು ಪ್ರದರ್ಶನಗೊಳ್ಳಲಿದೆ. ಈ ನಡುವೆ ಕುವೆಂಪು ಜನ್ಮದಿನೋತ್ಸವ, ವಿಚಾರ ಸಂಕಿರಣ, ಸಾಧಕರಿಗೆ ಗೌರವಾರ್ಪಣೆ, ಚಲನಚಿತ್ರ ಪ್ರದರ್ಶನ, ಕುವೆಂಪು ಗೀತ ಗಾಯನ ನಡೆಯಲಿದೆ.

ನಾಟಕ , ಚಲನಚಿತ್ರ ಪ್ರದರ್ಶನ:
ಡಿ.25ರಂದು ಸಿ. ಲಕ್ಷ್ಮಣ ನಿರ್ದೇಶನದ ರಂಗಕಹಳೆ ತಂಡದ ಪ್ರಸ್ತುತಿಯ ಬೊಮ್ಮನಹಳ್ಳಿಯ ಕಿಂದರಿಜೋಗಿ ನಾಟಕ, ಬಳಿಕ ಓಹಿಲೇಶ್ ಎಲ್. ನಿರ್ದೇಶನದ ಬೆಂಗಳೂರು ಗೌರಿಶಂಕರ ಸಾಂಸ್ಕೃತಿಕ ಕ್ರೀಡಾದತ್ತಿ ತಂಡ ಪ್ರಸ್ತುತಿಯ ಮೋಡಣ್ಣನ ತಮ್ಮ ನಾಟಕ, ಡಿ.26ರಂದು ಸಿ. ಲಕ್ಷ್ಮಣ ನಿದೇಶನದ ಧನಲಕ್ಷ್ಮಿ ನಾಟಕ ಮಂಡಳಿ ಪ್ರಸ್ತುತಿಯ ನನ್ನ ಗೋಪಾಲ ನಾಟಕ, ಬಳಿಕ ಡಾ. ಕೆ. ರಾಮಕೃಷ್ಣಯ್ಯ ನಿರ್ದೇಶನದ ಬೆಂಗಳೂರು ವಿಶ್ವನಿದ್ಯಾನಿಯದ ತಂಡ ಪ್ರಸ್ತುತಿಯ ಜಲಗಾರ ನಾಟಕ, ಡಿ.27ರಂದು ಟಿ.ಎಂ ಬಾಲಕೃಷ್ಣ ನಿರ್ದೇಶನ, ಬಿ.ಎಂ.ಟಿ.ಸಿ ಸಾಂಸ್ಕೃತಿಕ ಕಲಾ ಕಠೀರದ ಪ್ರಸ್ತುತಿಯ ಯಮನ ಸೋಲು ನಾಟಕ, ಬಳಿಕ ಸಿ. ಲಕ್ಷ್ಮಣ ನಿರ್ದೇಶನದ, ರಂಗಕಹಳೆ ಕ್ರೀಯೆಶನ್ಸ್ ಅವರ ರಾಜ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳ ಕನ್ನಡ ಚಲನಚಿತ್ರ ನನ್ನ ಗೋಪಾಲ ಪ್ರದರ್ಶನ, ಡಿ. 28ರಂದು ಚಂದ್ರಮೌಳೇಶ್ವರ ಕ್ರಿಯೇಷನ್ಸ್ ಬೆಂಗಳೂರು ಅವರ ಕಿರುಚಿತ್ರ ಬಾಲಕ ಕುವೆಂಪು ಪ್ರದರ್ಶನ, ಬಳಿಕ ಛಾಯಾ ಭಾರ್ಗವಿ ಎಸ್. ಎಚ್ ನಿರ್ದೇಶನದ, ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ ಪ್ರಸ್ತುತಿಯ ಶೂದ್ರತಪಸ್ವಿ ನಾಟಕ, ಡಿ.29ರಂದು ಮಾಲತೇಶ್ ಬಡಿಗೇರ ನಿರ್ದೇಶನದ ಬಹುರೂಪಿ ಬೆಂಗಳೂರು ಪ್ರಸ್ತುತಿಯ ಸ್ಮಶಾನ ಕುರುಕ್ಷೇತ್ರ ನಾಟಕ, ಬಳಿಕ ಮಂಜುನಾಥ ಎಲ್ ಬಡಿಗೇರ ಪ್ರಸ್ತುತಿಯ, ನಮ್ಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ ಪ್ರಸ್ತುತಿಯ ದಶಾನನ ಸ್ವಪ್ನಸಿದ್ಧಿ ನಾಟಕ ಪ್ರದರ್ಶನಗೊಳ್ಳಲಿದೆ.

ರಂಗಕಹಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಾರತದಾದ್ಯಂತ ನಡೆಸಿಕೊಂಡು ಬರುತ್ತಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಮಕ್ಕಳ ರಂಗಕರ್ಮಿ ದಿವಂಗತ ಸಿ. ಲಕ್ಷ್ಮಣ ಅವರು ರಂಗಕಹಳೆ ಸಂಸ್ಥೆಯನ್ನು ಹುಟ್ಟು ಹಾಕಿ ರಂಗಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದರು. ಈಗ ಅವರ ಪುತ್ರ ಓಹಿಲೇಶ್ ಲಕ್ಷ್ಮಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಪ್ರತಿ ವರ್ಷ ಬೇರೆ ಬೇರೆ ಜಿಲ್ಲೆಗಳಲ್ಲಿ ಕುವೆಂಪು ನಾಟಕೋತ್ಸವವನ್ನು ಆಯೋಜಿಸಲಾಗುತ್ತಿದೆ. ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕುವೆಂಪು ನಾಟಕೋತ್ಸವ ಆಯೋಜಿಸಿದೆ.

ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಕುವೆಂಪು ನಾಟಕೋತ್ಸವದ ಸಂಚಾಲಕ ಓಹಿಲೇಶ್ ಲಕ್ಷ್ಮಣ ಮಾಹಿತಿ ನೀಡಿದರು. ನಾಟಕೋತ್ಸವ ಸಮಿತಿ ಅಧ್ಯಕ್ಷ ಡಾ. ಹೆಚ್. ಶಾಂತಾರಾಮ್, ಪ್ರಾಂಶುಪಾಲ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ಉಪಸ್ಥಿತರಿದ್ದರು.

 

Exit mobile version