Kundapra.com ಕುಂದಾಪ್ರ ಡಾಟ್ ಕಾಂ

ಚಾಲಕನಿಲ್ಲದೆ ಚಲಿಸಿದ ಲಾರಿ : ಆವರಣ ಧ್ವಂಸ, ತಪ್ಪಿದ ಭಾರಿ ಅನಾಹುತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ನಾವುಂದ ಗ್ರಾಮದ ಕುದ್ರುಕೋಡು ಎಂಬಲ್ಲಿನ ಹೆದ್ದಾರಿ ವಿಸ್ತರಣೆ ಗುತ್ತಿಗೆದಾರ ಸಂಸ್ಥೆ ಐಆರ್‌ಬಿಯ ಚಾಲಕ ರಹಿತ ಲಾರಿ ಚಲಿಸಿದ ಪರಿಣಾಮ ಮನೆಯ ಆವರಣ ಧ್ವಂಸವಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಇಲ್ಲಿ ಸಂಸ್ಥೆಯ ಬೃಹತ್ ಜಲ್ಲಿ-ಟಾರು ಮಿಶ್ರಣ ಘಟಕ ಇದೆ. ಒಂದು ಲಾರಿಯ ಚಾಲಕ ಎಂದಿನಂತೆ ಮಿಶ್ರಣ ತುಂಬಿಸಿಕೊಂಡು ಬಂದು ಲಾರಿಯನ್ನು ವೇಬ್ರಿಜ್ ಮೇಲೆ ನಿಲ್ಲಿಸಿ ಇಳಿದುಹೋಗಿದ್ದ. ಲಾರಿ ತಂತಾನೆ ಚಲಿಸಿ, ಅಡ್ಡ ಇರುವ ರಸ್ತೆ ದಾಟಿ ಮೂಕಾಂಬಿಕಾ ದೇವಾಡಿಗ ಎಂಬವರ ನಿವೇಶನದ ಕಲ್ಲಿನ ಆವರಣಕ್ಕೆ ಬಡಿದಿದೆ. ಅದರಿಂದಾಗಿ ಆವರಣ ಕುಸಿದು ಬಿದ್ದಿದೆ.

ಈ ಅಪಘಾತ ನಡೆದ ಸ್ಥಳದ ಪಕ್ಕದಲ್ಲಿ ಒಂದು ಅಂಗಡಿ ಇದೆ. ಲಾರಿ ಚಲಿಸಿದ ವೇಳೆ ಅದರಲ್ಲಿ ಹತ್ತಾರು ಜನರಿದ್ದರು. ಅದಕ್ಕಿಂತ ಸ್ವಲ್ಪ ಸಮಯದ ಮೊದಲು ಶಾಲಾ ವಾಹನವೊಂದು ಆ ದಾರಿಯಾಗಿ ಹೋಗಿತ್ತು. ಲಾರಿ ಆ ವೇಳೆ ಚಲಿಸಿದ್ದರೆ ಅಥವಾ ಆವರಣದ ಬದಲು ಅಂಗಡಿಗೆ ನುಗ್ಗಿದ್ದರೆ ಭೀಕರ ಅಪಘಾತ ಸಂಭವಿಸುತ್ತಿತ್ತು ಎಂದು ಸ್ಥಳದಲ್ಲಿದ್ದವರು ಹೇಳಿದರು.

ಅಪಘಾತ ನಡೆಯುತ್ತಿದ್ದಂತೆ ಆತಂಕಗೊಂಡ ಪರಿಸರದ ಜನರು ಸೇರಿ ಲಾರಿ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಯೋಗೇಂದ್ರಪ್ಪ ಅವರನ್ನು ಕರೆಸಿ ಅವರ ಮೇಲೆ ಹರಿಹಾಯ್ದರು. ಆಗಿರುವ ಹಾನಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಬೈಂದೂರು ಪೊಲೀಸರಿಗೆ ಮಾಹಿತಿ ನೀಡಿದರು. ಎಚ್‌ಸಿ ಗೋಪಾಲಕೃಷ್ಣ, ಸಿಬ್ಬಂದಿ ಶ್ರೀನಿವಾಸ, ರಮೇಶ ಸ್ಥಳಕ್ಕಾಗಮಿಸಿ ಯೋಗೇಂದ್ರಪ್ಪ ಮತ್ತು ಸೇರಿದ್ದ ಜನರೊಡನೆ ಮಾತನಾಡಿದರು. ಅಂತಿಮವಾಗಿ ಘಟನೆಯ ಬಗ್ಗೆ ಠಾಣೆಗೆ ದೂರು ನೀಡಲಾಯಿತು. ಈ ವೇಳೆಸುದ್ದಿಗಾರರೊಂದಿಗೆ ಮಾತನಾಡಿದ ಮೂಕಾಂಬಿಕಾ ದೇವಾಡಿಗ ಅವರ ಮಗ ನಾಗೇಂದ್ರ ದೇವಾಡಿಗ, ನಾವುಂದ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ ದೇವಾಡಿಗ, ಹೇರೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕಕುಮಾರ ಶೆಟ್ಟಿ ಸ್ಥಳೀಯರಾದ ದಿನೇಶ ಆಚಾರ್, ಕಿಶೋರ್ ಶೆಟ್ಟಿ, ಸುಕೇಶ ಶೆಟ್ಟಿ ಈ ಸ್ಥಳದಲ್ಲಿ ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿರುವ ಜಲ್ಲಿ, ಕ್ರಶರ್ ಹುಡಿ ಹಾಗೂ ನಡೆಸುತ್ತಿರುವ ಜಲ್ಲಿ-ಟಾರು ಮಿಶ್ರಣದಿಂದ ಆಗುತ್ತಿರುವ ಪರಿಸರ ಹಾನಿ, ಜನರ ಆರೋಗ್ಯ, ಕೃಷಿ ಮತ್ತು ಕೃಷಿಭೂಮಿಗೆ ಮೇಲಾಗುತ್ತಿರುವ ದುಷ್ಪರಿಣಾಮದ ಕಾರಣ ಈ ಘಟಕವನ್ನು ಮುಚ್ಚಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ, ಪರಿಸರ ಇಲಾಖೆಯ ಅಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಸಾರ್ವಜನಿಕರು ಸೇರಿಕೊಂಡು ಎರಡು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಗುತ್ತಿಗೆದಾರ ಸಂಸ್ಥೆಯಾಗಲಿ, ಅಧಿಕಾರಿಗಳಾಗಲೀ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ದೂರಿದರು.

 

Exit mobile version