Kundapra.com ಕುಂದಾಪ್ರ ಡಾಟ್ ಕಾಂ

ಪ್ರತಿಯೊಬ್ಬರಲ್ಲೂ ಪ್ರೀತಿ ತುಂಬಿ, ನಗು ಕಾಣುವುದೇ ಸಾರ್ಥಕ ಜೀವನ: ಜೋಸೆಫ್ ರೋಡ್ರಿಗಸ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹುಟ್ಟು, ಬದುಕು ಹಾಗೂ ಸಾವಿನ ನಡುವಿನ ಜೀವನ ಆಟದಲ್ಲಿ ಜತೆಯಾಗಿದ್ದಷ್ಟು ಕಾಲ ಪರಸ್ಪರ ಸಹಕಾರದ ಮೂಲಕ ಪ್ರೀತಿಯ ಬೀಜವನ್ನು ಭಿತ್ತಿ ಪ್ರತಿಯೊಬ್ಬರ ಮೊಗದಲ್ಲೂ ನಗುವನ್ನು ಕಾಣುವುದರಲ್ಲಿ ಬದುಕಿನ ಸಾರ್ಥಕತೆ ಅಡಗಿದೆ ಎಂದು ಫಾ. ಜೋಸೆಫ್ ರೋಡ್ರಿಗಸ್ ಹೇಳಿದರು.

ಶನಿವಾರ ದುರ್ಮಿ ಗದ್ದೆಹಿತ್ಲು ವಠಾರದಲ್ಲಿ ಜರುಗಿದ ತಿರಂಗ ಫ್ರೆಂಡ್ಸ್ ದುರ್ಮಿ ಪಡುವರಿ ಇದರ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಧೈರ್ಯ, ಶಾಂತಿ ಹಾಗೂ ಸಂಮೃದ್ಧತೆಯನ್ನು ಸಾರುವ ಭಾರತದ ಧ್ವಜದ ಬಣ್ಣಗಳಂತೆ ತಿರಂಗ ಫ್ರೆಂಡ್ಸ್‌ನ ಯುವ ಪಡೆ ಏಕತೆಯನ್ನು ಸಾರುತ್ತಾ ಬಂದಿದೆ. ಈ ಭಾಗದಲ್ಲಿ ಭಿನ್ನ ಸಮುದಾಯದವರು ನೆಲೆಸಿದ್ದರೂ ಪರಸ್ಪರ ಒಬ್ಬರನ್ನೊಬ್ಬರು ಅರಿತು ಬಾಳುವ, ಧರ್ಮ ಸಂಪ್ರದಾಯವನ್ನು ಗೌರವಿಸುವ ಗುಣ ಹೊಂದಿದ್ದು, ಸಾಮರಸ್ಯದ ಬದುಕು ಕಂಡುಕೊಂಡಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಪುಪ್ಪರಾಜ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಶಿವರಾಮ ಪೂಜಾರಿ, ಉದ್ಯಮಿ ರೋಶನ್ ರೋಡ್ರಿಗಸ್, ತಿರಂಗ ಫ್ರೆಂಡ್ಸ್ ಮಾಜಿ ಅಧ್ಯಕ್ಷ ಪೀಟರ್ ರೋಡ್ರಿಗಸ್, ಆನಂದ ಪೂಜಾರಿ, ಹಾಲಿ ಅಧ್ಯಕ್ಷ ಪರಮೇಶ್ವರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಿರಂಗ ಫ್ರೆಂಡ್ಸ್ ಗೌರವ ಸಲಹೆಗಾರ ನಾರಾಯಣ ಕೆ. ಬಿಲ್ಲವ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ವೀರಭದ್ರ ಬಿಲ್ಲವ ವಂದಿಸಿದರು. ಶಿಕ್ಷಕ ಅರುಣ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಉದಯ ಮೊಗವೀರ, ಸದಸ್ಯ ಸಂತೋಷ್ ಪೂಜಾರಿ ಮೊದಲಾದವರು ಸಹಕರಿಸಿದರು. ಬಳಿಕ ಚಿನ್ನರ ಚಿಲಿಪಿಲಿ, ದುರ್ಗಾ ಕಲಾ ತಂಡ ಹಾರಾಡಿ ಬ್ರಹ್ಮವರ ಇವರಿಂದ ಕೇಂಬ್ಕ್ ಹೋರ್ ಸುಮಾರ್ ಇತ್ತ್ ನಾಟಕ ಪ್ರದರ್ಶನಗೊಂಡಿತು.

Exit mobile version