Kundapra.com ಕುಂದಾಪ್ರ ಡಾಟ್ ಕಾಂ

ಪತ್ರಕರ್ತ ಶೇಖರ ಅಜೆಕಾರು ಅವರಿಗೆ ತುಳುನಾಡ ಮಾಧ್ಯಮ ಸಿರಿ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಹಿರಿಯ ಪತ್ರಕರ್ತ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರೂವಾರಿ ಶೇಖರ ಅಜೆಕಾರು ಅವರಿಗೆ ಟೈಮ್ಸ್ ಆಫ್ ಕುಡ್ಲ ಪತ್ರಿಕೆ ನೀಡುವ ಪ್ರತಿಷ್ಠಿತ ತುಳುನಾಡ ಮಾಧ್ಯಮ ಸಿರಿ ಪ್ರಶಸ್ತಿಯನ್ನು ಫೆ.೯. ರಂದು ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ಪ್ರದಾನಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಕಳೆದ ಮೂರು ದಶಕಗಳಿಂದ ಪತ್ರಕರ್ತರಾಗಿ, ಮಾಧ್ಯಮ ವಿಷಯದ ತರಬೇತಿದಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಪತ್ರಕರ್ತರ ಸಂಘಟನೆಯ ನೇತಾರರಾಗಿ, ಮಾಧ್ಯಮದ ಬಂಧುಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಹಿರಿಯ ಪತ್ರಕರ್ತ, ಸಾಹಿತಿ ಶೇಖರ ಅಜೆಕಾರು ಅವರ ಮಾಧ್ಯಮ ರಂಗದ ಅನನ್ಯ ಸೇವೆಗಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಚಿವ ಯು.ಟಿ ಖಾದರ್, ಶಾಸಕ ವೇದವ್ಯಾಸ ಕಾಮತ್, ಎ.ಸಿ. ಭಂಡಾರಿ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ವಿವಿಧ ಕ್ಷೇತ್ರಗಳ ೨೪ ಮಂದಿ ಸಾಧಕರಿಗೆ ಪತ್ರಿಕೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ನೀಡಳಾಗುತ್ತಿದೆ ಎಂದು ಪತ್ರಿಕೆಯ ಸಂಪಾದಕ ಎಸ್. ಆರ್. ಬಂಡಿಮಾರ್ ತಿಳಿಸಿದ್ದಾರೆ.

ಶೇಖರ ಅಜೆಕಾರು ಅವರು ಕುಂದಪ್ರಭ ವಾರ ಪತ್ರಿಕೆಯಿಂದ ವೃತ್ತಿ ಜೀವನ ಆರಂಭಿಸಿದರು. ಮುಂಬಯಿಯ ಕರ್ನಾಟಕ ಮಲ್ಲ, ಮಂಗಳೂರಿನ ಜನವಾಹಿನಿ ಪತ್ರಿಕೆಗಳಲ್ಲಿ ಪೂರ್ಣಕಾಲಿಕ ಪತ್ರಕರ್ತರಾಗಿ ಎರಡು ದಶಕಗಳ ಕಾಲ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ದೈಜಿವರ್ಲ್ಡ ಸಮೂಹ ಮಾಧ್ಯಮ, ಕನ್ನಡ ಪ್ರಭ, ಉಷಾ ಕಿರಣ ಪತ್ರಿಕೆಗಳಿಗೆ ವರದಿಗಾರರಾಗಿ ಗ್ರಾಮೀಣ ಪತ್ರಿಕೋದ್ಯದಲ್ಲಿ ಹೊಸ ಹಾದಿ ತುಳಿದಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಯುವ ಸ್ಪಂದನ ಹೆಸರಿನ ಹಸ್ತ ಪತ್ರಿಕೆ, ಮಾಸಿಕ ಮುದ್ರಿತ ಪತ್ರಿಕೆಗಳನ್ನು ಸಂಪಾದಿಸಿ ಪ್ರಕಟಿಸಿದ್ದರು. ಪತ್ರಕರ್ತರ ವೇದಿಕೆ (ರಿ) ಬೆಂಗಳೂರು ಇದರ ಉಡುಪಿ ಜಿಲ್ಲಾಅಧ್ಯಕ್ಷರಾಗಿ ೧೦ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ ನಡೆಸಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅದೇ ಹೆಸರಿನ ಕಾರ್ಯಕ್ರಮಗಳಿಗೆ ಪ್ರೇರಣೆಯಾಗಿದ್ದಾರೆ. ಪತ್ರಕರ್ತ ದಿ. ರಾಜೇಶ ಶಿಬಾಜೆ ಅವರ ಹೆಸರಿನ ಪತ್ರಿಕಾ ಗೌರವವನ್ನು ಆಯೋಜಿಸುತ್ತಾ ಬಂದಿದ್ದಾರೆ. ಕರಾವಳಿ ಮತ್ತು ಮುಂಬಯಿಯಲ್ಲಿ ಪತ್ರಿಕಾ ತರಬೇತಿ ಕಾರ್ಯಕ್ರಮಗಳನ್ನು ರಾಜ್ಯ ಮಟ್ಟದ ಕರ್ನಾಟಕ ಮಿನಿ ಚಲನಚಿತ್ರೋತ್ಸವಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ೨೨ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.

ಮಾಧ್ಯಮ ಸಹಿತ ಬಹುಮುಖಿ ಪ್ರತಿಭೆಗಾಗಿ ೨೦೧೮ ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ ೨೦೧೮ , ಆಮಂತ್ರಣ್ ಆವಾರ್ಡ್ ೨೦೧೯, ಕೃಷಿಕ ಬಂಧು ೨೦೧೯, ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಪ್ರಶ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ೨೦೧೯ ರ ಪ್ರಶಸ್ತಿ, ವಿಶ್ವ ದರ್ಶನ ಸಾಹಿತ್ಯ ಪುರಸ್ಕಾರ ೨೦೧೯ ಸಹಿತ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಮಾಧ್ಯಮ ಸೇವೆಗಾಇ ಅಖಿಲ ಭಾರತ ಅಗ್ನಿ ಶಿಖಾ ಮಂಚ್ ಪ್ರಶಸ್ತಿಯನ್ನು ೧೯೯೫ ರಲ್ಲಿ ಮುಂಬಯಿಯಲ್ಲಿ ಸ್ವೀಕರಿಸಿರುವ ಅವರು ಮುಂಬಯಿ ಸೋಮಯ್ಯ ಕಾಲೇಜ್ ಆಫ್ ಮ್ಯಾನೆಜ್ ಮೆಂಟ್ ಇಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ಮುಂಬಯಿ ವಿಶ್ವವಿದ್ಯಾಲಯದಿಂದ ವರದರಾಜ ಆದ್ಯ ಚಿನ್ನದ ಪದಕದೊಂದಿಗೆ ಎಂ.ಏ ಪದವಿ ಪಡೆದಿರುತ್ತಾರೆ. ಮಾಧ್ಯಮ ರಂಗದಲ್ಲಿ ಮಿಂಚುತ್ತಿರುವ ಅನೇಕ ಶಿಷ್ಯವೃಂದವನ್ನು ಹೊಂದಿದ್ದಾರೆ.

Exit mobile version