Kundapra.com ಕುಂದಾಪ್ರ ಡಾಟ್ ಕಾಂ

ದೋಣಿಮನೆ ಪ್ರವಾಸ: ಗಂಗೋತ್ರಿ ಹಾಲಿಡೇಸ್ ಕ್ರೂಸ್ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ರಾಜ್ಯದ ಕರಾವಳಿಯಲ್ಲಿ ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರಗಳು ಇಲ್ಲಿನ ಎಲ್ಲ ಉದೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡಲಾರವು. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಬಳಸಿಕೊಂಡು ನಡೆಸಬಹುದಾದ ಪ್ರವಾಸೋದ್ಯಮ ಆ ಕೊರತೆಯನ್ನು ಖಂಡಿತ ನೀಗಿಸಬಲ್ಲುದು ಎಂದು ಉಡುಪಿಯ ಕಡಲತೀರ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಎಸ್. ಶೆಟ್ಟಿ ಅಭಿಪ್ರಾಯಪಟ್ಟರು.

ಬುಧವಾರ ಗುಜ್ಜಾಡಿಯ ಹೆಬ್ಬಾರ್‌ಬೈಲು ಎಂಬಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಸಾಂಪ್ರದಾಯಿಕ ದೋಣಿಮನೆ ’ಗಂಗೋತ್ರಿ ಹಾಲಿಡೇಸ್ ಕ್ರೂಸ್’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯ 98 ಕಿಲೋ ಮೀಟರ್ ಉದ್ದದ ಕರಾವಳಿಯನ್ನು ಹೊಂದಿದೆ. ಸುಂದರ ಕಡಲತೀರ ಮತ್ತು ಸಮೃದ್ಧವಾದ ಹಿನ್ನೀರುಗಳಿವೆ. ಇಲ್ಲಿ ಜಲಕ್ರೀಡೆ, ಜಲಯಾನ, ಜಲಸಾಹಸಕ್ಕೆ ವಿಫುಲ ಅವಕಾಶಗಳಿವೆ. ಇವನ್ನು ನಡೆಸಲು ವಿಶೇಷ ಶಿಕ್ಷಣದ ಅಗತ್ಯವಿಲ್ಲ. ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಯಾವುದೇ ತೊಂದರೆ ಆಗುದಿಲ್ಲ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಲು ಮುಂದಾಗುವವರಿಗೆ ಸರ್ಕಾರ ಸಹಾಯಧನ ನೀಡಬೇಕು ಎಂದು ಅವರು ಹೇಳಿದರು.

ರಾಷ್ಟ್ರೀಯ ಕಬ್ಬಡಿ ಆಟಗಾರ ರಿಶಾಂಕ್ ದೇವಾಡಿಗ ಸಾಂಪ್ರದಾಯಿಕ ದೋಣಿಮನೆ ’ಗಂಗೋತ್ರಿ ಹಾಲಿಡೇಸ್ ಕ್ರೂಸ್’ನ್ನು ಉದ್ಘಾಟಿಸಿದರು. ಗುಜ್ಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ ಮಾತನಾಡಿ, ಕರಾವಳಿಯಲ್ಲಿ ಹಿಮಪಾತ ಬಿಟ್ಟು ಪ್ರವಾಸೋದ್ಯಮಕ್ಕೆ ಅಗತ್ಯವಾದ ಉಳಿದೆಲ್ಲ ಪ್ರಾಕೃತಿಕ ಸಂಪತ್ತು ಇದೆ. ಆದರೆ ಉದ್ಯಮ ಆರಂಭಿಸುವವರ ಕೊರತೆ ಇದೆ. ಪೂರಕ ಚಟುವಟಿಕೆಗಳು ಸಾಕಷ್ಟಿಲ್ಲ. ಕುಂದಾಪುರದಲ್ಲಿ ಐದು ನದಿಗಳು ಸೇರಿ ಆಗುವ ಪಂಚಾಗಂಗಾವಳಿ ನದಿ ಮತ್ತು ಅವುಗಳ ದಂಡೆಗಳು ಪ್ರವಾಸೋದ್ಯಮದ ಅಗಾಧ ಸಾಧ್ಯತೆಗಳಿಂದ ಕೂಡಿದ ಪ್ರದೇಶ. ಇಲ್ಲಿ ಪ್ರವಾಸೋದ್ಯಮ ನಡೆಸಲು ಮುಂದಾಗುವವರಿಗೆ ಇಲಾಖೆ ಸಾಧ್ಯವಿರುವ ಎಲ್ಲ ಬೆಂಬಲ ನೀಡಲು ಸಿದ್ಧ ಎಂದ ಅವರು ಇಲಾಖೆ ಈಗಾಗಲೆ ತ್ರಾಸಿ, ಮರವಂತೆ, ಸೋಮೇಶ್ವರ ಕಡಲ ತೀರಗಳಲ್ಲಿ ಜಲಕ್ರೀಡೆ ಸೇರಿದಂತೆ ಕೆಲವು ಸೌಲಭ್ಯಗಳನ್ನು ನೀಡಲು ಯೋಜನೆ ಸಿದ್ಧಪಡಿಸಿದೆ. ಸಾಂಪ್ರದಾಯಿಕ ಆಹಾರೋದ್ಯಮಕ್ಕೆ ಸಹಾಯಧನ ದೊರೆಯುತ್ತದೆ. ಇಲ್ಲಿನ ಸ್ಥಳೀಯರು ಉದ್ಯಮ ನಡೆಸಲು ಮುಂದಾಗುವವರಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು.

ಪ್ರವಾಸೋದ್ಯಮ ಸಂಘಟನೆಯ ಉಪಾಧ್ಯಕ್ಷ ಮರವಂತೆ ನಾಗರಾಜ ಹೆಬ್ಬಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಜಿ. ಪುತ್ರನ್, ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಕೆ. ಗುಜ್ಜಾಡಿ, ತಾಪಂ. ಸದಸ್ಯ ರಾಜು ದೇವಾಡಿಗ, ಕೊಲ್ಲೂರು ಧರ್ಮಪೀಠದ ಮೈತ್ರಿ ಸಮಾಖ್ಯಾತ: ಮಹಸ್ಥಿತ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಕುಂದಾಪುರ ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ನಂದನ್ ಪಿ., ಪೂರ್ಣಿಮಾ ವಾಸುದೇವ ದೇವಾಡಿಗ ಇದ್ದರು.

ಟಿ. ವಾಸುದೇವ ದೇವಾಡಿಗ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯಶವಂತ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version