Kundapra.com ಕುಂದಾಪ್ರ ಡಾಟ್ ಕಾಂ

ಹಟ್ಟಿಯಂಗಡಿಯ ದೇವಳದ ಆಡಳಿತ ಧರ್ಮದರ್ಶಿ ಎಚ್‌.ರಾಮಚಂದ್ರ ಭಟ್‌ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದ ಹಟ್ಟಿಯಂಗಡಿಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿಯಾಗಿದ್ದ ಎಚ್‌.ರಾಮಚಂದ್ರ ಭಟ್‌ (72) ಅಲ್ಪ ಕಾಲದ ಅಸೌಖ್ಯದಿಂದಾಗಿ ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ನಾಡಿನ ಹಲವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಯ ಪದಾಧಿಕಾರಿಯಾಗಿ ದುಡಿದಿದ್ದ ಅವರ ಅಧಿಕಾರವಧಿಯಲ್ಲಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕಂಡಿತ್ತು. ತಂದೆ ಗಣಪಯ್ಯ ಭಟ್ಟರ ಕಾಲಾನಂತರ ದೇವಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಅವರು ದೇಶಾದ್ಯಾಂತ ಭಕ್ತರನ್ನು ಕ್ಷೇತ್ರಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದರು.

ಶ್ರೀ ಸಿದ್ಧಿವಿನಾಯಕ ಶೈಕ್ಷಣಿಕ ಪ್ರತಿಷ್ಠಾನದ ಅಡಿಯಲ್ಲಿ ಐಸಿಎಸ್‌ಇ ಮಾನ್ಯತೆ ಹೊಂದಿರುವ ಆಂಗ್ಲ ಮಾಧ್ಯಮ ವಸತಿ ಶಾಲೆ. ಪ್ರಾಥಮಿಕ ಶಾಲೆ ಹಾಗೂ ಗೋ ಶಾಲೆಯನ್ನು ನಡೆಸುತ್ತಿದ್ದಾರೆ. ಅಪರೂಪದ ಗಿಡಮೂಲಿಕೆಗಳ ರಕ್ಷಣೆಗಾಗಿ ಮೂಲಿಕಾ ವನವನ್ನು ಸ್ಥಾಪಿಸಿದ್ದರು. ಗ್ರಾಮೀಣ ಭಾಗದ ಜನರಿಗಾಗಿ ಸುಸಜ್ಜಿತ ಆಯುರ್ವೇದ ಆಸ್ಪತ್ರೆ ಹಾಗೂ ವೃತ್ತಿ ಪರ ತರಬೇತಿ ಕೋರ್ಸ್‌ಗಳನ್ನು ಆರಂಭಿಸಬೇಕು ಎನ್ನುವ ಯೋಜನೆಗಳನ್ನು ಹೊಂದಿದ್ದರು.

ಶುಕ್ರವಾರ ತಡ ರಾತ್ರಿ ಅವರ ಪಾರ್ಥಿವ ಶರೀರವನ್ನು ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಗೆ ತಂದು ಶನಿವಾರ ಬೆಳಿಗ್ಗೆ 8 ರವರೆಗೂ ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಬಳಿಕ ಹಟ್ಟಿಯಂಗಡಿಯ ಮನೆಗೆ ತೆಗೆದುಕೊಂಡು ಹೋಗಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮೃತರಿಗೆ ಪತ್ನಿ, 2 ಗಂಡು ಹಾಗೂ 2 ಹೆಣ್ಣು ಮಕ್ಕಳು ಇದ್ದಾರೆ.

Exit mobile version