Kundapra.com ಕುಂದಾಪ್ರ ಡಾಟ್ ಕಾಂ

ಮಲ್ಯರಮಠ ಶ್ರೀ ವೆಂಕಟರಮಣನಿಂದ ಭಕ್ತರ ಇಷ್ಟಾರ್ಥ ಸಿದ್ಧಿ: ಗೋಕರ್ಣ ಪರ್ತಗಾಳಿ ಶ್ರೀ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗೌಡ ಸಾರಸ್ವತ ಸಮಾಜ ಸಾರವಂತವಾಗಬೇಕು. ಸಮಾಜ ಅಭಿವೃದ್ಧಿಯಾಗಬೇಕು ಎನ್ನುವ ಉದ್ದೇಶದಿಂದ ಸಮಾಜ ಹಿರಿಯರು ದೇವಾಲಯಗಳನ್ನು ನಿರ್ಮಿಸಿದ್ದಾರೆ. ೩೫೦ ವರ್ಷಗಳ ಹಿಂದೆ ಪಂಚಗಂಗಾವಳಿ ನದಿ ತೀರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಎಲ್ಲರಿಗೂ ಒಳಿತನ್ನು ಮಾಡಿದ್ದಾನೆ. ದೇವಾಲಯದ ಅಭಿವೃದ್ಧಿ ಕೂಡ ಕಾಲ ಕಾಲಕ್ಕೆ ನಡೆದಿದ್ದು, ಗುರುಗಳ ಮಾರ್ಗದರ್ಶನದಂತೆ ದೇವಾಲಯ ಹಾಗೂ ಸಮಾಜದ ಅಭಿವೃದ್ಧಿ ಸಾಧ್ಯವಿದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಐದು ದಿನಗಳ ಮೊಕ್ಕಾಂಗೆ ದೇವಳಕ್ಕೆ ಚಿತ್ತೈಸಿದ ಶ್ರೀಗಳು ಆಶೀರ್ವಚನ ನೀಡಿದರು.

ಸಮಾಜ ಬಾಂಧವರ ಅಪೇಕ್ಷೆಯಂತೆ ದೇವಳದ ವಠಾರದಲ್ಲಿ ಸುಸಜ್ಜಿತವಾದ ಕಲ್ಯಾಣ ಮಂಟಪ ನಿರ್ಮಾಣಗೊಂಡಿದೆ ಅಲ್ಲದೆ ನಾಗದೇವರ ಗುಡಿಯ ಜೀರ್ಣೋದ್ಧಾರ ಕಾರ್ಯ ನಡೆದಿದೆ. ಈ ಕಾರ್ಯಕ್ಕೆ ಅನೇಕ ಸಮಾಜಬಾಂಧವರು ಕೈಜೋಡಿಸಿದ್ದು ಶ್ರೀದೇವರು ಅವರಿಗೆ ಉತ್ತರೋತ್ತರ ಅಭಿವೃದ್ಧಿಯನ್ನು ಕರುಣಿಸಲಿ ಎಂದು ಆಶೀರ್ವದಿಸಿದರು.

ಶ್ರೀಗಳ ಪಟ್ಟ ಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಆಶೀರ್ವದಿಸಿದರು. ದೇವಳದ ಆಡಳಿತ ಮಂಡಳಿ ಸದಸ್ಯರಾದ ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ ಮತ್ತು ಜಿ.ವೆಂಕಟೇಶ ನಾಯಕ್ ಗುರುವರ್ಯರ ಪಾದ್ಯಪೂಜೆ ನೆರವೇರಿಸಿದರು. ದೇವಳಕ್ಕೆ ಆಗಮಿಸಿದ ಶ್ರೀಗಳವರನ್ನು ದೇವಳದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ, ತಾಂತ್ರಿಕ ವೇದಮೂರ್ತಿ ಜಿ.ವಸಂತ ಭಟ್ ಸ್ವಾಗತಿಸಿಕೊಂಡರು. ಪುತ್ತು ಪೈ, ವೈದಿಕರು, ಪುರೋಹಿತರು, ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಸಮಾಜಬಾಂಧವರು ಉಪಸ್ಥಿತರಿದ್ದರು.

ಫೆ.೧೮ ರಂದು ದೇವಳದ ವಠಾರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪವನ್ನು ಗುರುವರ್ಯರು ಉದ್ಘಾಟಿಸಲಿದ್ದು, ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಗುರುವರ್ಯರು ಆಶೀರ್ವಚನ ನೀಡಲಿದ್ದಾರೆ. ಫೆ.೧೯ರಂದು ಶ್ರೀದೇವರ ಪುನ: ಪ್ರತಿಷ್ಢಾ ವರ್ಧಂತಿ ಉತ್ಸವ, ಶ್ರೀ ನಾಗದೇವರ ಹಾಗೂ ಶ್ರೀ ಬ್ರಹ್ಮ ಜಟ್ಟಿಗ ದೈವದ ಪುನ: ಪ್ರತಿಷ್ಠೆ ಕಾರ್ಯಕ್ರಮ ಗುರುವರ್ಯರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ನಡೆಯಲಿದೆ.

Exit mobile version