Kundapra.com ಕುಂದಾಪ್ರ ಡಾಟ್ ಕಾಂ

ಕತಾರಿನಲ್ಲಿ ತುಳುನಾಡಿನ ಅಪ್ಸರೆ ಐಶ್ವರ್ಯ ರೈ ಬಚ್ಚನ್ ಭೇಟಿ

ಸುಬ್ರಹ್ಮಣ್ಯ ಹೆಬ್ಬಾಗಿಲು, ದೋಹಾ – ಕುಂದಾಪ್ರ ಡಾಟ್ ಕಾಂ
ಪದ್ಮಶ್ರೀ ವಿಜೇತೆ, ಸುಪ್ರಸಿದ್ಧ ಚಲನಚಿತ್ರ ತಾರೆ, ಕರ್ನಾಟಕದ ತುಳುನಾಡಿನ ಅಪ್ಸರೆ, ಶ್ರೀಮತಿ ಐಶ್ವರ್ಯ ರೈ ಬಚ್ಚನ್ ಅವರು, ದೋಹಾದಲ್ಲಿ ಏರ್ಪಡಿಸಿದ್ದ 2019ನೇ ಸಾಲಿನ ’ಆಭರಣ ಮತ್ತು ಹಡಿಯಾರಗಳ ಪ್ರದರ್ಶನ’ವನ್ನು ಉದ್ಘಾಟಿಸಲು ಆಗಮಿಸಿದ್ದರು.

ಕನ್ನಡಿಗರ ಪ್ರತಿನಿಧಿಯಾಗಿ ಹಾಗೂ ಭಾರತೀಯ ಸಮುದಾಯದ ಹಿತನಿಧಿ ಸಂಘದ ಸಹ-ಕಾರ್ಯದರ್ಶಿಯಾಗಿ ನಾನು ಶ್ರೀಮತಿ ರೈ ಇವರನ್ನು ಭೇಟಿಯಾಗಿ ಹರ್ಷದಿಂದ ಶುಭಾಶಯ ಕೋರಿದೆ. ಮೂಲತಃ ತುಳು ಕುಟುಂಬದವರಾದ ರೈ ಅವರು ಜನಿಸಿದ್ದು ಮಂಗಳೂರಿನಲ್ಲಿ, ನನ್ನ ಜನ್ಮಸ್ಥಳವಾದ ಕುಂದಾಪುರದಿಂದ ಸಮೀಪ. ಅವರು ಗಿರಿಶಿಖರದಷ್ಟು ಎತ್ತರಕ್ಕೆ ತಮ್ಮ ಜೀವನದಲ್ಲಿ ಏರಿರುವರು, ನಟನೆಯಲ್ಲಿ, ಹೆಸರು ಗಳಿಸುವಲ್ಲಿ ಹಾಗು ಯಶಸ್ಸಿನಲ್ಲಿ. ಅವರಷ್ಟಲ್ಲದಿದ್ದರೂ, ಅಳಿಲು ಸೇವಕನಂತೆ ಕತಾರಿನ ಅನಿವಾಸಿ ಭಾರತೀಯ ಸಮಾಜಕ್ಕೆ ನನ್ನ ಕೈಲಾದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಅವರಿಗೆ ಹೇಳಿದಾಗ, ಅವರು ಸಂತಸಗೊಂಡು ನನಗೆ ಅಭಿನಂದಿಸಿದರು. ಇಂತಹ ವ್ಯಕ್ತಿತ್ವವನ್ನು ಭೇಟಿ ನೀಡಿದುದೆ ನನ್ನ ಸೌಭಾಗ್ಯವೆಂದು ಪರಿಗಣಿಸುತ್ತೇನೆ.

ಐಶ್ವರ್ಯ ರೈ ಬಚ್ಚನ್ ಅವರು 1992ನೇ ಸಾಲಿನಲ್ಲಿ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿ, 5 ಭಾಷೆಗಳಲ್ಲಿ 40ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ತಮ್ಮ ನಟನಾ, ನಾಟ್ಯ ಪ್ರತಿಭೆಗಳೊಂದಿಗೆ, ತಮ್ಮ ಅದ್ವಿತೀಯ ಸೌಂದರ್ಯದೊಂದಿಗೆ ತೆರೆಗೆ ಮೆರಗು ನೀಡಿರುವರು.

Exit mobile version