Kundapra.com ಕುಂದಾಪ್ರ ಡಾಟ್ ಕಾಂ

ಸಹಕಾರಿ ಸಂಸ್ಥೆಗಳು ಗ್ರಾಹಕ ಸ್ನೇಹಿಯಾಗಿ ಬೆಳೆದಿವೆ: ಎಸ್. ಜನಾರ್ದನ ಮರವಂತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಹಕಾರಿ ಸಂಸ್ಥೆಗಳು ತನ್ನ ಸದಸ್ಯರಿಗೆ ಕ್ಲಪ್ತ ಸಮಯದಲ್ಲಿ ಸಾಲ ಸೌಲಭ್ಯ, ಠೇವಣಿಗೆ ಉತ್ತಮ ಬಡ್ಡಿದರ ಹಾಗೂ ಇನ್ನಿತರ ಸೇವೆಗಳನ್ನು ಸಸೂತ್ರವಾಗಿ ನೀಡುತ್ತಿರುವುದರಿಂದ ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕ ಸ್ನೇಹಿಯಾಗಿ ಮಾರ್ಪಟ್ಟಿವೆ ಎಂದು ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಹೇಳಿದರು.

ಅವರು ಸೋಮವಾರ ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಇದರ ನಾವುಂದ ಶಾಖೆ ಒಂದು ವರ್ಷ ಪೂರೈಸಿದ ಅಂಗವಾಗಿ ಶಾಖೆಯ ಆವರಣದಲ್ಲಿ ಆಯೋಜಿಸಲಾದ ಗ್ರಾಹಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವಂತೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಹೆಚ್ಚು ತ್ರಾಸ ಪಡದೇ, ಸರಕಾರಿಗಳ ಸದಸ್ಯರು ಸರಳವಾಗಿ ಸಾಲ ಪಡೆಯುತ್ತಿದ್ದಾರೆ. ಸಹಕಾರಿಗಳ ಅಧ್ಯಕ್ಷ ಹಾಗೂ ನಿರ್ದೇಶಕರುಗಳೂ ಕೂಡ ಸ್ಥಳೀಯರೇ ಆಗುವುದರಿಂದಾಗಿ ಗ್ರಾಹಕರ ಮನೋಧರ್ಮ ಸುಲಭವಾಗಿ ಸಂಸ್ಥೆಗೆ ತಿಳಿಯುವುದಲ್ಲದೇ ಅವರೊಂದಿಗೆ ಉತ್ತಮವಾಗಿ ವ್ಯವಹರಿಸಲು ಸಾಧ್ಯವಾಗುತ್ತಿದೆ ಎಂದವರು ವಿಶ್ಲೇಷಿಸಿದರು.

ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‌ನ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ಥಳೀಯರ ಸಹಕಾರ ಹಾಗೂ ಸಂಸ್ಥೆಯೊಂದಿಗಿನ ಒಡನಾಟದಿಂದ ಒಂದು ವರ್ಷದಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಸಂಘದ ಸದಸ್ಯರು ಕೂಡ ಸಕ್ರಿಯವಾಗಿ ಕೈಜೊಡಿಸಿದರೆ ಸಂಸ್ಥೆಯ ಏಳಿಗೆ ಕಷ್ಟಸಾಧ್ಯವಲ್ಲ ಎಂದರು.

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿಯ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಜಗದೀಶ್ ಅವಭೃತ್, ಸಾಗರ್ ಕ್ರೆಡಿಟ್ ಕೋ ಆಪರೇಟಿವ್‌ನ ನಿರ್ದೇಶಕ ಪುಟ್ಟಯ್ಯ ಪೂಜಾರಿ, ನಾವುಂದ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ, ಉದ್ಯಮಿ ತೌಫಿಕ್ ಸಾಹೇಬ್, ಆಂತರಿಕ ಲೆಕ್ಕ ಪರಿಶೋಧಕರ ಸೀತಾರಾಮ ಮಡಿವಾಳ, ಸಹಕಾರಿಯ ನಿರ್ದೇಶಕರುಗಳಾದ ಮಂಜು ಪೂಜಾರಿ, ರಾಮಕೃಷ್ಣ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಪಿ. ಯಡ್ತರೆ ಸ್ವಾಗತಿಸಿ, ನಾವುಂದ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಪೂಜಾರಿ ವಂದಿಸಿದರು. ನಿರ್ದೇಶಕ ಶಿವರಾಮ ಪೂಜಾರಿ ಯಡ್ತರೆ ಸಹಕರಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

 

Exit mobile version