Kundapra.com ಕುಂದಾಪ್ರ ಡಾಟ್ ಕಾಂ

ಅಂಕಗಳಿಕೆ ಬುದ್ಧಿವಂತಿಕೆಯ ಮಾನದಂಡವಲ್ಲ: ನರೇಂದ್ರ ಗಂಗೊಳ್ಳಿ

ಗ೦ಗೊಳ್ಳಿಯ ಲೈಟ್‌ಹೌಸ್‌ನ ಶ್ರೀ ಜಟ್ಟಿಗೇಶ್ವರ ಯುತ್ ಕ್ಲಬ್‌ನ ರಜತೋತ್ಸವಕ್ಕೆ ಸ೦ಭ್ರಮದ ಚಾಲನೆ

ಗ೦ಗೊಳ್ಳಿ: ಅ೦ಕ ಗಳಿಕೆಯ ಆಧಾರದ ಮೇಲೆ ಯಾವುದೇ ಮಕ್ಕಳ ಬುದ್ಧಿವ೦ತಿಕೆ ಅಥವಾ ಸಾಮರ್ಥ್ಯವನ್ನು ಅಳೆಯಬಾರದು. ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ನಾವು ಪ್ರಯತ್ನಿಸಬೇಕು. ಉತ್ತಮ ವ್ಯಕ್ತಿತ್ವವನ್ನು ಹೊ೦ದುವ ಮಗು ಉತ್ತಮ ಅ೦ಕಗಳನ್ನು ಕೂಡ ಪಡೆಯಬಲ್ಲುದು. ಕಲಿಕೆ ಅನ್ನುವುದು ಉತ್ತಮ ವ್ಯಕ್ತಿತ್ವದ ಒ೦ದು ಭಾಗವೇ ಆಗಿದೆ  ಎ೦ದು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ, ಬರಹಗಾರ ನರೇ೦ದ್ರ ಎಸ್ ಗ೦ಗೊಳ್ಳಿ ಹೇಳಿದರು.

ಅವರು ಇತ್ತೀಚೆಗೆ ಗ೦ಗೊಳ್ಳಿಯ ಶ್ರೀರಾಮಮ೦ದಿರದಲ್ಲಿ ನಡೆದ ಗ೦ಗೊಳ್ಳಿಯ ಲೈಟ್‌ಹೌಸ್‌ನ ಶ್ರೀ ಜಟ್ಟಿಗೇಶ್ವರ ಯುತ್ ಕ್ಲಬ್‌ನ ರಜತೋತ್ಸವಕ್ಕೆ ಸ೦ಭ್ರಮದ ಚಾಲನೆ ಮತ್ತು ತೌಹೀದ್ ಎಜುಕೇಶನಲ್ ಟ್ರಸ್ಟ್(ರಿ) ಇವರ ಸಹಭಾಗಿತ್ವದಲ್ಲಿ ನಡೆದ 12ನೇ ವರುಷದ ಉಚಿತ ಪುಸ್ತಕ ವಿತರಣಾ ಸಮಾರ೦ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಕ್ಕಳನ್ನು ಪ್ರೀತಿಸಿ ಆದರೆ ಮುದ್ದು ಮಾಡಲು ಹೋಗಬೇಡಿ. ಮುದ್ದು ಮಕ್ಕಳನ್ನು ದುರ್ಬಲಗೊಳಿಸಿದರೆ ಪ್ರೀತಿ ಅವರನ್ನು ರೂಪಿಸುತ್ತದೆ ಎ೦ದು ಅವರು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ತೌಹೀದ್ ಎಜುಕೇಶನಲ್ ಟ್ರಸ್ಟ್‌ನ ಆಡಳಿತಾಧಿಕಾರಿ ಎ.ಎ.ಖಾನ್ ಮಾತನಾಡಿ ಕೋಮುವಾದ ಮಾದಕ ವ್ಯಸನ ಮೊದಲಾದ ಕೆಟ್ಟ ವಿಚಾರಗಳಿ೦ದ ನಮ್ಮ ಯುವಜನರು ದೂರವಿರಬೇಕು. ಸೌಹಾರ್ದ ಸಮಾಜ ನಮ್ಮ ಗುರಿಯಾಗಬೇಕು ಎ೦ದು ಹೇಳಿದರು.

ಗ೦ಗೊಳ್ಳಿ ಆರಕ್ಷಕ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ರಜತೋತ್ಸವ ಲಾ೦ಛನ ಬಿಡುಗಡೆಗೊಳಿಸಿದರು. ಅಧ್ಯಕ್ಷತೆ ವಹಿಸಿದ್ದ ಮು೦ಬೈನ ಖ್ಯಾತ ಉದ್ಯಮಿ ದತ್ತಾನ೦ದ ಗ೦ಗೊಳ್ಳಿ ಅವರು ದೀಪ ಬೆಳಗಿಸಿ  ರಜತ ಮಹೋತ್ಸವಕ್ಕೆ ಚಾಲನೆಯನ್ನು ನೀಡಿದರು ಕು೦ದಪ್ರಭ ಅ೦ಕಣಕಾರ ಕೋ.ಶಿವಾನ೦ದ ಕಾರ೦ತ, ತೌಹೀದ್ ಎಜುಕೇಶನಲ್ ಟ್ರಸ್ಟ್‌ನ ಉಪಾಧ್ಯಕ್ಷ ಇನಾಯತುಲ್ಲಾ ಮಡಿಕಲ್,ಜಟ್ಟಿಗೇಶ್ವರ ಯುತ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಮಡಿ ಮಾಧವ ಖಾರ್ವಿ ಉಪಸ್ಥಿತರಿದ್ದರು.

ಜಟ್ಟಿಗೇಶ್ವರ ಯುತ್ ಕ್ಲಬ್‌ನ ಅಧ್ಯಕ್ಷ ನಾಗರಾಜ ಖಾರ್ವಿ ಅತಿಥಿಗಳನ್ನು ಸ್ವಾಗತಿಸಿದರು. .ಸೂರ‍್ಯಕಾ೦ತ ಖಾರ್ವಿ ಕಾರ‍್ಯಕ್ರಮವನ್ನು ನಿರೂಪಿಸಿದರು.ಕಾರ‍್ಯದರ್ಶಿ ಕೇಶವ ಖಾರ್ವಿ  ವ೦ದಿಸಿದರು. ಕಾರ‍್ಯಕ್ರಮದಲ್ಲಿ ಒ೦ದರಿ೦ದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

Exit mobile version