Kundapra.com ಕುಂದಾಪ್ರ ಡಾಟ್ ಕಾಂ

ಯಡಿಯೂರಪ್ಪ, ರಾಘವೇಂದ್ರ, ಶೋಭಾರದ್ದು ಕುಟುಂಬ ರಾಜಕಾರಣವಲ್ಲವೇ: ಎಂಎಲ್‌ಸಿ ಭೋಜೆಗೌಡ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶೋಭಾ ಕರಂದ್ಲಾಜೆ ಯಡಿಯೂರಪ್ಪನವರ ಜೊತೆಗೆ ಕೇರಳದ ದೇವಸ್ಥಾನಕ್ಕೆ ಹೋಗಿ ತಾಳಿ ಕಟ್ಟಿಸಿಕೊಂಡು ಬಂದಿದ್ದಾರೆಂದು ಜನರು ಆಡಿಕೊಳ್ಳುತ್ತಿದ್ದಾರೆ. ಆಗಾಗ್ಗೆ ಯಡಿಯೂರಪ್ಪನವರ ಒಟ್ಟಿಗೆ ಪೂಜೆ ಪುನಸ್ಕಾರಗಳಿಗೆ ತೆರಳುತ್ತಾರೆ. ಆದರೆ ಅವರು ಮಾತ್ರ ತಾನು ಮಗಳು ಎನ್ನುತ್ತಿದ್ದಾರೆ. ಮಗಳಾದರೂ, ಮಡದಿಯಾದರೂ ಅವರದ್ದೂ ವಂಶಪಾರಂಪರ್ಯ ರಾಜಕಾರಣ ಆಗಲಿಲ್ಲವೇ? ಯಡಿಯೂರಪ್ಪನವರ ಕುಟುಂಬದವರಾಗಿದ್ದೂ ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ ಉಡುಪಿಯಲ್ಲಿ ಶೋಭಾ ಚುನಾವಣೆಗೆ ನಿಲ್ಲಬಹುದೇ ಎಂದು ಎಂಎಲ್‌ಸಿ ಭೋಜೆಗೌಡ ಅವರು ಖಾರವಾಗಿ ತಿವಿದಿದ್ದಾರೆ.

ಶೋಭಾ ಕರಂದ್ಲಾಜೆ ಅವರ ಕುಟುಂಬ ರಾಜಕಾರಣ ಹೇಳಿಕೆಗೆ ಬೈಂದೂರಿನಲ್ಲಿ ಪ್ರತಿಕ್ರಿಯಿಸಿದ ಎಂಎಲ್‌ಸಿ ಹಾಗೂ ಜೆಡಿಎಸ್ ವಕ್ತಾರ ಭೋಜೆಗೌಡ ಪ್ರತಿಕ್ರಿಯಿಸಿ ನಿಖಿಲ್ ಹಾಗೂ ಪ್ರಜ್ವಲ್ ದೇವೇಗೌಡರ ಮೊಮ್ಮಕ್ಕಳಾಗಿದ್ದೇ ತಪ್ಪಾಯಿತೆ. ಅವರು ದೇವೆಗೌಡರ ಮೊಮ್ಮಕ್ಕಳಾದರೂ ರಾಜ್ಯಸಭಾ ಸೀಟು ಕೇಳಿಲ್ಲ, ಎಂಎಲ್‌ಸಿ ಸೀಟ್ ತೆಗೆದುಕೊಂಡಿಲ್ಲ, ಕಾರ್ಯಕರ್ತನಿಗೆ ಸಿಗುವ ಸೀಟನ್ನು ತಮಗೆ ಬೇಕೆಂದು ಕೇಳಿಲ್ಲ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಜನರ ಮುಂದೆ ಹೋಗಿ ಮತ ಕೇಳುತ್ತಿದ್ದಾರೆ. ಜನ ಇಷ್ಟವಾದರೆ ಮತ ಹಾಕುತ್ತಾರೆ. ಇಲ್ಲದಿದ್ದರೆ ತಿರಸ್ಕಾರ ಮಾಡುತ್ತಾರೆ. ಅಷ್ಟೂ ಅಲ್ಲದೇ ವಂಶ ಪಾರಂಪರ‍್ಯದ ಆಡಳಿತ ಮಾಡುತ್ತಾರೆಂದು ಜೆಡಿಎಸ್ ಪಾರ್ಟಿಯವರಾರೂ ಹೇಳಿಲ್ಲ. ಹಾಗಿದ್ದ ಮೇಲೆ ಇದನ್ನು ಪ್ರಶ್ನಿಸಲು ಶೋಭಾ ಕರಂದ್ಲಾಜೆ ಯಾರು. ಬಿಜೆಪಿಯಲ್ಲಿನ ವಂಶ ಪಾರಂಪರ್ಯ ಅವರಿಗೆ ಕಾಣುತ್ತಿಲ್ಲವೇ ಎಂದರು.

ಮೇ.೨೩ರ ನಂತರ ಸರಕಾರ ಉರುಳುತ್ತೇ ಎಂಬ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಯಡಿಯೂರಪ್ಪನವರು ಒಂಬತ್ತು ತಿಂಗಳಿನಿಂದ ಸರಕಾರ ಉರುಳಿಸುತ್ತೇನೆ ಎಂದು ಹೇಳಿತ್ತಲೇ ಬರುತ್ತಿದ್ದಾರೆ. ಆದರೆ ಅವರು ಹಗಲು ಕನಸು ಕಾಣುತ್ತಿದ್ದಾರೆ. ಪ್ರತಿ ಹಬ್ಬಕ್ಕೂ ಸರಕಾರ ಉರುಳುತ್ತೆ ಎಂದು ಹೇಳುತ್ತಾರೆ. ಈ ಯುಗಾದಿಗೊಂದು ಸರಕಾರ ಉರುಳುವ ಮಾತನಾಡಲಿಲ್ಲ ಎಂದು ಲೇವಡಿ ಮಾಡಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು ದೇವೇಗೌಡದ ಮೊಮ್ಮೊಕ್ಕಳು ಗೆಲ್ಲುವುದು ಎಷ್ಟು ಸತ್ಯವೋ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಗೆಲ್ಲುವುದು ಅಷ್ಟೇ ಸತ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡರಾದ ನಿತೀನ್ ಶೆಟ್ಟಿ, ರವಿ ಶೆಟ್ಟಿ, ಹುಸೇನ್ ಹೈಕಾಡಿ, ಮನ್ಸೂರ್ ಮರವಂತೆ, ಜಯಶೀಲ ಶೆಟ್ಟಿ, ಸುಬ್ರಹ್ಮಣ್ಯ ಬಿಜೂರು ಮೊದಲಾದವರು ಇದ್ದರು.

Exit mobile version