Kundapra.com ಕುಂದಾಪ್ರ ಡಾಟ್ ಕಾಂ

ದ್ರಾವಿಡ ಬ್ರಾಹ್ಮಣ ಪರಿಷತ್ ವತಿಯಿಂದ ರಾಮನವಮಿ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:  ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು, ಉಪ್ಪುಂದ ವಲಯದ ವತಿಯಿಂದ ಶ್ರೀ ರಾಮ ನವಮಿ ಆಚರಣೆಯನ್ನು ಮಹಿಳಾ ವೇದಿಕೆಯಿಂದ ಲಲಿತ ಸಹಸ್ರನಾಮ ಪಠಣ, ಪ್ರವಚನ, ಭಜನೆ ಸಹಿತ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ದೇವಸ್ಥಾನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ವಿಷ್ಣುವಿನ ಅವತಾರವಾದ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ಸಾಮಾನ್ಯ ಮನುಷ್ಯನಂತೆ ಬದುಕಿನ ಕಷ್ಟಕಾರ್ಪಣ್ಯಗಳನ್ನು ಎದುರಿಸಿ, ಜೀವನ ಮೌಲ್ಯಗಳ ಆದರ್ಶ ಪರಂಪರೆಯನ್ನು ಸ್ಥಾಪಿಸಿ ಜಗದ್ವಂದ್ಯನಾಗಿದ್ದಾನೆ. ಪ್ರಭು ಶ್ರೀ ರಾಮಚಂದ್ರನ ಪಿತೃವಾಕ್ಯ ಪರಿಪಾಲನೆ, ರಾಜಧರ್ಮ ಪಾಲನೆ,ಪ್ರಜಾ ವಾತ್ಸಲ್ಯ,ಸತ್ಯ ನಿಷ್ಠತೆಯೇ ಮೊದಲಾದ ಅನುಕರಣೀಯ ನಡೆ-ನುಡಿಗಳು ಯುಗ-ಯುಗಗಳವರೆಗೆ ಮನುಕುಲಕ್ಕೆ ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತಿರುತ್ತದೆ ಎಂದು ಧಾರ್ಮಿಕ ಪ್ರವಚನ ಮಾಡಿದ ಭಟ್ಕಳದ ಶ್ರೀ ಸುಬ್ರಹ್ಮಣ್ಯ ಭಟ್ಟರು ನುಡಿದರು.

ಕಾರ್ಯಕ್ರಮದ ಪ್ರಾಯೋಜಕತ್ವವನ್ನು ನಿರ್ವಹಿಸಿದ ವೇದಮೂರ್ತಿ ಶ್ರೀ ಕೃಷ್ಣಮೂರ್ತಿ ನಾವಡ ದಂಪತಿಗಳನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು. ಶಾಂತಿ ಮಂತ್ರ ಪಠಣ, ಮಂಗಳಾರತಿ ಮತ್ತು ಲಘು ಉಪಹಾರದೊಂದಿಗೆ ಸಮಾಪ್ತಗೊಂಡ ಸಮಾರಂಭ ವಲಯಾಧ್ಯಕ್ಷ ಶ್ರೀ ವಿಶ್ವೇಶರ ಅಡಿಗರ ಮಾರ್ಗದರ್ಶನದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿ ರತ್ನಾಕರ ಉಡುಪ, ಪ್ರಭಾಕರ ಮೆರ್ಟ,ಸಂದೇಶ ಭಟ್, ಡೀಟಿ ಸೀತಾರಾಮ ಮಯ್ಯ ಮೊದಲಾದವರು ಉಪಸ್ಥಿತರಿದ್ದರು.

Exit mobile version