ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಾಲಾಂತರದಲ್ಲಿ ನಮ್ಮ ಸಮಾಜದಲ್ಲಿ ಅಗಾಧವಾದ ಬದಲಾವಣೆಗಳು ಆಗಿವೆ. ಹೊಸ ವಿಚಾರಗಳು ಅದರಲ್ಲಿ ಪ್ರವೇಶ ಪಡೆದಿವೆ. ಇಂದು ರಚಿಸುವ ಸಾಹಿತ್ಯ ಅದನ್ನು ಪ್ರತಿಬಿಂಬಿಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಪರಿಷತ್ತಿನ ಆಶ್ರಯದಲ್ಲಿ ಖಂಬದಕೋಣೆಯ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಓ. ಆರ್. ಪ್ರಕಾಶ್ ಅವರು ರಚಿಸಿರುವ ’ಪ್ರಾಪ್ತಿ’ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಆಧುನಿಕ ಬದುಕಿನ ಶೈಲಿಯಿಂದ ಬಂಜೆತನ ಹೆಚ್ಚುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಬಂಜೆತನ, ಪ್ರಣಾಳ ಸಂತಾನ ಮತ್ತು ಮಕ್ಕಳ ದತ್ತು ಸ್ವೀಕಾರದ ಸುತ್ತ ಹೆಣೆದಿರುವ ಪ್ರಕಾಶ್ ಅವರ ಕಾದಂಬರಿ ಹೊಸ ವಸ್ತುವನ್ನು ಓದುಗರ ಮುಂದಿರಿಸುತ್ತದೆ. ಅದರ ಕುರಿತಾದ ನೈತಿಕ, ಸಾಮಾಜಿಕ ಪ್ರಶ್ನೆಗಳ ಚರ್ಚೆಯನ್ನು ಹುಟ್ಟುಹಾಕುತ್ತದೆ. ಸರಳ ಭಾಷೆ, ಆಕರ್ಷಕ ಶೈಲಿ, ಕಣ್ಣಿಗೆ ಕಟ್ಟುವಂತಹ ಸನ್ನಿವೇಶಗಳ ಚಿತ್ರಣ ಓದುಗರನ್ನು ಸೆಳೆಯುತ್ತವೆ. ಪ್ರಕಾಶ್ ಅವರಿಂದ ಇನ್ನಷ್ಟು ಮೌಲಿಕ ಕೃತಿಗಳು ಹೊರಬರಲಿ ಎಂದು ಅವರು ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು, ಬೆಳವಣಿಗೆಯನ್ನು ಸ್ಮರಿಸಿಕೊಂಡ ಅಡಿಗ ಅದು ನಾಡು, ನುಡಿ, ಸಂಸ್ಕೃತಿ ಮತ್ತು ಜನಪದಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿದರು.
ಲೇಖಕ ಪ್ರಕಾಶ್ ಮತ್ತು ಪ್ರಕಾಶಕ ಗಣೇಶ ಕೊಡೂರು ಅವರನ್ನು ಗೌರವಿಸಲಾಯಿತು. ರವೀಂದ್ರ ಪಿ. ಪ್ರಾರ್ಥನೆ ಹಾಡಿದರು. ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರ ಎಚ್. ಸ್ವಾಗತಿಸಿದರು. ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಭಟ್ ಕೃತಿಯನ್ನು ಪರಿಚಯಿಸಿದರು. ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಓ. ಆರ್. ಪ್ರಕಾಶ್ ಅವರನ್ನು ಪರಿಚಯಿಸಿದರು. ಪರಿಷತ್ತಿನ ಕುಂದಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಕಿಶೋರ್ಕುಮಾರ ಶೆಟ್ಟಿ ಪ್ರಕಾಶ್ ಅವರು ಮೊದಲು ಬರೆದಿದ್ದ ’ಅಂಡಮಾನ್ ಆಳ ಅಗದಷ್ಟೂ ಕರಾಳ’ ಕೃತಿಯ ಕುರಿತು ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಇದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕರುಣಾಕರ ಶೆಟ್ಟಿ ವಂದಿಸಿದರು. ಪರಿಷತ್ತಿನ ಬೈಂದೂರು ಘಟಕದ ಗೌರವ ಕಾರ್ಯದರ್ಶಿ ಗಣಪತಿ ಹೋಬಳಿದಾರ್ ನಿರೂಪಿಸಿದರು.

