Kundapra.com ಕುಂದಾಪ್ರ ಡಾಟ್ ಕಾಂ

ವ್ಯಕ್ತಿ ಬದಲಾದರೆ, ದೇಶದಲ್ಲಿ ಪರಿವರ್ತನೆ: ಡಾ. ಡಿ. ವೀರೇಂದ್ರ ಹೆಗ್ಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವ್ಯಕ್ತಿಯ ಪರಿವರ್ತನೆ ಆದರೆ ಊರು, ದೇಶದ ಪರಿವರ್ತನೆ ಆಗುತ್ತದೆ. ವ್ಯಕ್ತಿ ನಡೆಸುವ ಧಾರ್ಮಿಕ ಕಾರ್ಯಗಳು ಅವನ ಅಹಂಕಾರವನ್ನು ಅಳಿಸಿ ಅವನ ಪರಿವರ್ತನೆಗೆ ಕಾರಣವಾಗುತ್ತವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ನಾವುಂದ ಸಪರಿವಾರ ಶ್ರೀ ಪದ್ಮಾವತಿ ಅಮ್ಮನವರ ನೂತನ ಶಿಲಾ ದೇಗುಲ ಸಮರ್ಪಣೆ, ನೂತನ ಮೂರ್ತಿ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶಾಭಿಷೇಕದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ನಾಲ್ಕು ದಶಕಗಳಿಂದ ನಾವುಂದ ಪರಿಸರದ ಜನರ ಸ್ಥಿತಿಗತಿಯ ನಿಕಟ ಪರಿಚಯ ತಮಗಿದೆ ಎಂದ ವೀರೇಂದ್ರ ಹೆಗ್ಗಡೆ ಆಗ ಇಲ್ಲಿ ಆರ್ಥಿಕ, ಶೈಕ್ಷಣಿಕ ಬಡತನ ಇತ್ತು. ೩೦ ವರ್ಷಗಳಿಂದೀಚೆಗೆ ಇಲ್ಲಿ ಅದ್ಭುತ ಪ್ರಗತಿ ಆಗಿದೆ. ಜನರ ಜೀವನ ಶೈಲಿ, ಆಹಾರ, ವಿಹಾರ, ಸಂಸ್ಕಾರಗಳಲ್ಲಿ ಧನಾತ್ಮಕ ಬದಲಾವಣೆ ಆಗಿದೆ. ಅದು ಮತ್ಸ್ಯಾವತಾರದ ಮತ್ಸ್ಯದ ಬೆಳವಣಿಗೆಯಂತೆ ಭಾಸವಾಗುತ್ತಿದೆ. ಇಲ್ಲಿಯ ಜನ ಹಳ್ಳಿಯಿಂದ ನಗರಗಳಿಗೆ ಹೋಗಿ ದುಡಿದು, ಊರಿನ ಕಾರ್ಯಗಳಿಗೆ ನೆರವಾಗುವ ಮೂಲಕ ಸಮಾಜದ ಋಣ ತೀರಿಸುತ್ತಿದ್ದಾರೆ ಎಂದು ಹೇಳಿ ತಮ್ಮ ಮಾತನ್ನು ಸಮರ್ಥಿಸಿಕೊಂಡರು.

ಜೈನ ಪುರಾಣಗಳ ಪ್ರಕಾರ ತಪಸ್ಸು ನಿರತ ಪಾರ್ಶ್ವನಾಥರನ್ನು ಕಾಡಿದ ಉಪಸರ್ಗಗಳಿಂದ ರಕ್ಷಣೆ ನೀಡಿದವರು ಪದ್ಮಾವತಿ ಮತ್ತು ಧರ್ಮೇಂದ್ರ. ಹಾಗಾಗಿ ಪದ್ಮಾವತಿ ಭಕ್ತರ ದೋಷಸಂಗ್ರಹದ ಮೂಲಕ ಅವರಿಗೆ ಒಳಿತನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ನಾವುಂದದಲ್ಲಿ ಪ್ರತಿಷ್ಠಳಾಗಿರುವ ಪದ್ಮಾವತಿಯ ಬಳಿ ಜನರು ತಮ್ಮ ಕಷ್ಟ, ಸಂಕಟ, ಸಮಸ್ಯೆಗಳನ್ನು ನಿವೇದಿಸಿಕೊಂಡು ಪರಿಹಾರ ಪಡೆಯಬೇಕು. ದೇವಸ್ಥಾನಗಳು ಬದುಕಿನ ಪಥದಲ್ಲಿ ಬೆಳಕು ನೀಡುವ ದೀಪಸ್ಥಂಭವಿದ್ದಂತೆ. ಅದರ ಬೆಳಕಿನಲ್ಲಿ ಸಾಗಿ ಉನ್ನತಿ, ಶಾಂತಿ ಸಾಧಿಸಬೇಕು ಎಂದು ಅವರು ಹೇಳಿದರು.

ಆಶಿರ್ವಚನಗೈದ ಮಾಣಿಲ ಮಹಾಲಕ್ಷ್ಮೀಕ್ಷೇತ್ರ ’ಶ್ರೀಧಾಮ’ದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಧಾರ್ಮಿಕ ಕ್ಷೇತ್ರದಲ್ಲಿ ಶುಚಿತ್ವ, ಭಕ್ತಿ, ಭಾವುಕತೆ ನೆಲೆಯಾಗಬೇಕು. ಆಚಾರ, ಪಾವಿತ್ರ್ಯ, ಕಟ್ಟುಪಾಡುಗಳನ್ನು ಅನುಸರಿಸಬೇಕು. ಸಮರ್ಪಣಾ ಭಾವದಿಂದ ದೇವಸ್ಥಾನವನ್ನು ಪ್ರವೇಶಿಸಬೇಕು. ಇಲ್ಲಿ ಕಂಡ ಧಾರ್ಮಿಕ ಸಾಮರಸ್ಯ ಅನುಕರಣೀಯ, ಅಂತಹ ಸಾಮರಸ್ಯ, ಮಾನವೀಯ ಮೌಲ್ಯ, ಸದ್ಗುಣ, ಭಾವೈಕ್ಯತೆ ದೇಶವ್ಯಾಪಿಯಾಗಬೇಕು ಎಂದು ಆಶಿಸಿದರು.

ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುಣ್ಯಶ್ರೀ ಜೈನ್, ಅವನಿ ಅರವಿಂದ ಶೆಟ್ಟಿ ಪ್ರಾರ್ಥನೆ ಹಾಡಿದರು. ಜೀಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕಕುಮಾರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಬಿ. ಅಪ್ಪಣ್ಣ ಹೆಗ್ಡೆ, ಕೆ. ಗೋಪಾಲ ಪೂಜಾರಿ, ಮೀನುಗಾರ ಸಮುದಾಯದ ಧುರೀಣ ರಾಮಚಂದ್ರ ಬೈಕಂಪಾಡಿ, ಸಮಾಜ ಸೇವಕ ಲೀಲಾಧರ ಬೈಕಂಪಾಡಿ, ಮರವಂತೆ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬ್ ಮಹಮದ್ ಇಕ್ರಮುಲ್ಲಾ ಸಖಾಫಿ, ಎಸ್. ರಾಜು ಪೂಜಾರಿ ಮಾತನಾಡಿದರು. ದಾನಿಗಳಾದ ಗೋವಿಂದ ಬಾಬು ಪೂಜಾರಿ, ಮಹಾಬಲ ಎಸ್. ಕುಂದರ್, ಅಂದೂಕಾ ಸಾಹೇಬ್, ಸುರೇಶ ಕಾಂಚನ್, ಮೋಹನ ಖಾರ್ವಿ, ಇತರರು ಇದ್ದರು. ಆನಂದ ತೋಳಾರ್ ವಂದಿಸಿದರು. ಪಾಂಡುರಂಗ, ಶಶಿಧರ ಶೆಟ್ಟಿ ನಿರೂಪಿಸಿದರು. 

ದೇವಾಲಯ ನಿರ್ಮಾಣಕ್ಕೆ ನೆರವಿತ್ತವರನ್ನು ಸನ್ಮಾನಿಸಲಾಯಿತು. ಡಾ. ಹೆಗ್ಗಡೆ ಮತ್ತು ಸ್ವಾಮೀಜಿ ಅವರನ್ನು ನಾವುಂದ ಪೇಟೆಯ ಬಳಿ ಸ್ವಾಗತಿಸಿ, ಅದ್ದೂರಿಯ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಗಿತ್ತು. ಸಭೆಯ ಬಳಿಕ ಮಹಾಅನ್ನಸಂತರ್ಪಣೆ ನಡೆಯಿತು.

Exit mobile version