Kundapra.com ಕುಂದಾಪ್ರ ಡಾಟ್ ಕಾಂ

ಅಪಘಾತದಿಂದ ಅರೆಕೋಮಾವಸ್ಥೆಯಲ್ಲಿರುವ ಸುರೇಶ್ ಪೂಜಾರಿಗೆ ಬೇಕಿದೆ ಮಾನವೀಯ ನೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೆಲ ತಿಂಗಳುಗಳ ಹಿಂದೆ ನಾಗೂರು ಬಸ್ ನಿಲ್ದಾಣದ ಬಳಿ ಘಟಿಸಿದ ರಸ್ತೆ ಅಪಘಾತದಿಂದಾಗಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿ ತಲುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೈಂದೂರು ತಾಲೂಕಿನ ಉಪ್ರಳ್ಳಿ ಮೂಡುಮಠ ನಿವಾಸಿ ಸುರೇಶ್ ಪೂಜಾರಿ ಅವರ ಚಿಕಿತ್ಸೆಗೆ ಸಹೃದಯಿಗಳ ಮಾನವೀಯ ನೆರವಿನ ಅಗತ್ಯವಿದೆ.

ಗಾರೆ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಸುರೇಶ್ ಪೂಜಾರಿ ಅವರು ಕೆಲವು ತಿಂಗಳುಗಳ ಹಿಂದೆ ನಾಗೂರು ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭ ಲಾರಿಯೊಂದು ಅವರ ಮೇಲೆ ಹಾದು ಹೋಗಿದ್ದರಿಂದ ತಲೆಗೆ ಗಂಭೀರ ಗಾಯವಾಗಿ ಅರೆಕೋಮಾವಸ್ಥೆ ತಲುಪಿದ್ದರು. ಕೂಡಲೇ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತಾದರೂ ಅವರು ಗುಣಮುಖರಾಗಿರಲಿಲ್ಲ. ಬಳಿಕ ಕುಂದಾಪುರದ ಮಾತಾ ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ಹಾಗೂ ಕಳೆದ ಮೂರು ತಿಂಗಳಿಂದ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೊಳಪಡಿಸಿರುವ ವೈದ್ಯರು ಅವರು ಗುಣಮುಖರಾಗುವ ಬಗ್ಗೆ ಭರವಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸುಮಾರು 10 ಲಕ್ಷ ರೂ. ಖರ್ಚಾಗಬಹುದೆಂದು ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸುರೇಶ್ ಪೂಜಾರಿ ಹಾಗೂ ನಾಗರತ್ನ ದಂಪತಿ ತಮ್ಮ ಮಗುವಿನೊಂದಿಗೆ

ಕೂಲಿ ಕೆಲಸ ಮಾಡಿಕೊಂಡಿದ್ದ ಸುರೇಶ್ ಪೂಜಾರಿ ಅವರಿಗಾದ ಅಫಘಾತದಿಂದ ಅವರ ಕುಟುಂಬ ತತ್ತರಿಸಿಹೋಗಿದೆ. ಸುರೇಶ್ ಪೂಜಾರಿ ಅವರ ಪತ್ನಿ ನಾಗರತ್ನ ಹಾಗೂ ಪುಟ್ಟ ಕಂದಮ್ಮ ಅವರ ಗುಣಮುಖರಾಗುವ ನಿರೀಕ್ಷೆಯಲ್ಲಿದ್ದಾರೆ. ಅವರ ಪತ್ನಿ ಈಗಾಗಲೇ ಚಿಕಿತ್ಸೆಗಾಗಿ ಸುಮಾರು ರೂ. 5 ಲಕ್ಷದ ತನಕ ವೆಚ್ಚ ಮಾಡಿದ್ದು, ಈಗ ಹೆಚ್ಚಿನ ಚಿಕಿತ್ಸೆಗೆ ಭರಿಸಲು ಅಗತ್ಯವಾದ ಹಣದ ಅವಶ್ಯಕತೆ ಎದುರಾಗಿದೆ.

ಬಡತನದ ಅನಿವಾರ್ಯತೆಗಳ ನಡುವೆ ಪತಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಿಕೊಳ್ಳಬೇಕು ಎಂಬ ಸುರೇಶ್ ಪೂಜಾರಿ ಅವರ ಮಡದಿ ನಾಗರತ್ನ ಅವರಿಗೆ ನಾಗರಿಕ ಬಂಧುಗಳು ಸಹೃಯತೆಯಿಂದ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆಯಬೇಕಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
7338233197, 9980752940

ಹಣ ವರ್ಗಾವಣೆಗೆ ಅಕೌಂಟ್ ನಂಬರ್:
ಕರ್ಣಾಟಕ ಬ್ಯಾಂಕ್ ಕಿರಿಮಂಜೇಶ್ವರ ಶಾಖೆ
A/c No: 4222500100853501
IFSC Code: KARB0000422

 

Exit mobile version