Kundapra.com ಕುಂದಾಪ್ರ ಡಾಟ್ ಕಾಂ

ಕೃಷಿ ವೈದ್ಯ ರೊಬೊಟ್: ಮೂಡ್ಲಕಟ್ಟೆಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮೂಡ್ಲಕಟ್ಟೆ ಇಂಜಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಮಂಜುನಾಥ, ಗುರುಚರಣ್, ಸಂದೇಶ ಹೆಗ್ಡೆ ಮತ್ತು ಶ್ವೇತಾ ರವರು ವಿಭಾಗದ ಮುಖ್ಯಸ್ಥ ಪ್ರೋಫೆಸರ್ ಮೆಲ್ವಿನ್ ಡಿ’ಸೋಜ್‌ರವರ ಮಾರ್ಗದರ್ಶನದಲ್ಲಿ ಅಗ್ರಿಕಲ್ಚರ್ ಡಾಕ್ಟರ್ ಎನ್ನುವ ರೊಬೊಟ್ ತಯಾರಿಸಿದ್ದಾರೆ.

ಅಗ್ರಿಕಲ್ಚರ್ ಡಾಕ್ಟರ್ ರೊಬೊಟ್ ಸ್ವಯಂಚಾಲಿತವಾಗಿದ್ದು, ಹೊಲದಲ್ಲಿರುವ ಪೈರಿನ ರೋಗ ರುಜಿನಗಳನ್ನು ಪತ್ತೆಹಚ್ಚಿ ಅದಕ್ಕೆ ಬೇಕಾಗುವ ಕ್ರಿಮಿನಾಶಕ ಮತ್ತುಇತರೆ ಔಷಧಗಳನ್ನು ಸಿಂಪಡಿಸುತ್ತದೆ. ಯಾವುದೇ ಮಾನವನ ಸಹಾಯವಿಲ್ಲದೆ ಕಾರ್ಯನಿರ್ವಹಿಸಲಿದ್ದು, ಅನೇಕ ಉಪಯೋಗಕಾರಿ ಲಕ್ಷಣಗಳನ್ನು ಹೊಂದಿದೆ ಹಾಗೂ ಮಣ್ಣಿನ ಫಲವತ್ತತೆ ಮತ್ತು ನೀರಿನಾಂಶವನ್ನು ಕೂಡ ಪತ್ತೆ ಹಚ್ಚುವ ಮಾಹಿತಿಯನ್ನು ನೀಡುತ್ತದೆ. ವೈದ್ಯನ ತರಹ ಕೆಲಸಮಾಡಲಿದ್ದು, ರೈತನು ತಮ್ಮ ಬೆಳೆಗಳಲ್ಲಿ ಕಂಡುಬರುವ ರೋಗಗಳನ್ನು ನಿವಾರಣೆ ಹೇಗೆ ಮಾಡುವುದು ಎಂಬ ವ್ಯಥೆಯನ್ನು ದೂರ ಮಾಡಲಿದೆ. ಈ ರೊಬೊಟ್ ಕಾರ್ಯನಿರ್ವಹಿಸಲು ಬೇಕಾಗುವ ವಿದ್ಯುತ್‌ನ್ನು ಸೌರಶಕ್ತಿಯ ಮೂಲಗಳಿಂದ ಪಡೆಯವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೇ ರೊಬೊಟ್ ಮೇಲೆ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರಬಂಧ ಮಂಡಿಸಿದ್ದು, ಬಹುಮಾನಗಳು ಬಂದಿರುತ್ತದೆ. ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಕಾನ್ಫರೆನ್ಸ್‌ನಲ್ಲಿ ಕೂಡ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದ್ದು, ಅತ್ಯುತ್ತಮ ಸಂಶೋಧನ ಪ್ರಬಂಧ ಎಂದು ಪ್ರಮಾಣ ಪತ್ರ ನೀಡಲಾಗಿದೆ. ಬೈಟ್ಸ್ ಸಂಸ್ಥೆ ನಡೆಸುವ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ, ಪೈನಲ್‌ಹಂತಕ್ಕೆ ತಲುಪಿದ್ದು, ಸದ್ಯದಲ್ಲೇ ಪೈನಲ್ ಸ್ಪರ್ಧೆ ನಡೆಯಲಿದೆ.

ಪ್ರಾಜೆಕ್ಟ್ ನ ರೊಬೊಟ್ ಮೇಲ್ಮೈ ಮತ್ತುಅಂಗಾಂಗಳ ತಯಾರಿಕೆಗೆ, ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕರಾದ ಪ್ರೋ. ಪ್ರಶಾಂತರವರು ಸಹಕರಿಸಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ | ಕಟಯ್ಯ ಜಿ. ಎಸ್ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿದ್ದಾರ್ಥ್ ಜೆ. ಶೆಟ್ಟಿ ಯವರ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ

Exit mobile version