Kundapra.com ಕುಂದಾಪ್ರ ಡಾಟ್ ಕಾಂ

ನಾಡದೋಣಿ ಮೀನುಗಾರರಿಂದ ಸಮುದ್ರ ಪೂಜೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಮತ್ತು ಬೈಂದೂರು ತಾಲ್ಲೂಕು ನಾಡದೋಣಿ ಮೀನುಗಾರರ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ಮರವಂತೆ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಬಳಿ ಸಾಮೂಹಿಕ ಸಮುದ್ರ ಪೂಜೆ ನಡೆಯಿತು. ಮರವಂತೆ ನಾಗೇಂದ್ರ ಭಟ್ ಪೂಜಾವಿಧಿಗಳನ್ನು ನಡೆಸಿಕೊಟ್ಟರು. ಪೂಜೆಯ ಬಳಿಕ ಮೀನುಗಾರ ಪ್ರಮುಖರು ನೀರಿಗಿಳಿದು ಸಮುದ್ರ ದೇವರಿಗೆ ಹೂವು, ಹಣ್ಣು, ಹಾಲು ಸಮರ್ಪಿಸಿದರು. ಉಪಸ್ಥಿತರಿದ್ದ ಮೀನುಗಾರರು ಪ್ರಸಾದ ಸ್ವೀಕರಿಸಿದರು. ಅದರ ಪೂರ್ವದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು.

ಎರಡೂ ಕಡೆ ಶೀಘ್ರದಲ್ಲಿ ಆರಂಭವಾಗುವ ಹೊಸ ಮೀನುಗಾರಿಕಾ ಋತುವಿನಲ್ಲಿ ಸುರಕ್ಷಿತ ಹಾಗೂ ಸಮೃದ್ಧ ಮೀನುಗಾರಿಕೆ ಕರುಣಿಸುವಂತೆ ಕೋರಿ ಪ್ರಾರ್ಥನೆ ಸಲ್ಲಿಸಲಾಯಿತು.

ಬೈಂದೂರು ತಾಲ್ಲೂಕು ಸಂಘಟನೆಯ ಅಧ್ಯಕ್ಷ ಆನಂದ ಖಾರ್ವಿ, ಕಾರ್ಯದರ್ಶಿ ಪುರುಷೋತ್ತಮ ಖಾರ್ವಿ, ಅಣ್ಣಯ್ಯ ಖಾರ್ವಿ, ಮಾಜಿ ಅಧ್ಯಕ್ಷ ಸೋಮಶೇಖರ ಖಾರ್ವಿ, ಕುಂದಾಪುರ ಸಂಘಟನೆಯ ಅಧ್ಯಕ್ಷ ಮಂಜು ಬಿಲ್ಲವ, ಮರವಂತೆ ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ಎಂ. ಮೋಹನ ಖಾರ್ವಿ, ಉಭಯ ಸಂಘಟನೆಗಳ ಪ್ರಮುಖರು ಹಾಗೂ ಸದಸ್ಯರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕುರು ನಾರಾಯಣ ಹೆಬ್ಬಾರ್ ಇದ್ದರು.

Exit mobile version