Kundapra.com ಕುಂದಾಪ್ರ ಡಾಟ್ ಕಾಂ

ವಿದೇಶಿ ನೆಲದಲ್ಲೂ ಭಾರತೀಯತೆ ಮರೆತಿಲ್ಲ: ಯೋಗೀಂದ್ರ ಮರವಂತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಲಂಡನ್ ನಗರ ಕೆಲವು ದಶಕಗಳ ಹಿಂದಿದ್ದಂತೆ ಈಗಿಲ್ಲ. ತನ್ನ ಪರಂಪರೆಯ ಎಲ್ಲವನ್ನು ಉಳಿಸಿಕೊಳ್ಳುವುದರ ಜತೆಗೆ ಜಗತ್ತಿನ ಅತ್ಯಂತ ದಟ್ಟ ಚಟುವಟಿಕೆಗಳ ನಗರಗಳಲ್ಲಿ ಒಂದಾಗಿ ಬದಲಾಗಿದೆ. ಭಾರತೀಯರ ದೃಷ್ಟಿಯಿಂದ ಹೇಳುವುದಾದರೆ ಇಂಗ್ಲೆಂಡ್‌ನ ಎಲ್ಲ ಪ್ರಮುಖ ನಗರಗಳು ಈಗ ಮಿನಿ ಭಾರತದಂತೆ ಭಾಸವಾಗುತ್ತವೆ ಎಂದು ಯೋಗೀಂದ್ರ ಮರವಂತೆ ಹೇಳಿದರು.

ವಿ. ಕೃ. ಗೋಕಾಕರು ಮೂವತ್ತರ ದಶಕದಲ್ಲಿ ಬರೆದಿರುವ ’ಲಂಡನ್ ನಗರ’ ಬರಹ 10ನೆ ತರಗತಿಯ ಪಠ್ಯ ಪುಸ್ತಕದಲ್ಲಿದೆ. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅದರ ಕುರಿತು ಪೂರಕ ಮಾಹಿತಿ ಒದಗಿಸುವ ಉದ್ದೇಶದಿಂದ ಇಂಗ್ಲಂಡ್‌ನಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ, ಇತ್ತೀಚಿಗಷ್ಟೆ ’ಲಂಡನ್ ಡೈರಿ’ ಹೆಸರಿನ ತಮ್ಮ ಪುಸ್ತಕ ಹೊರತಂದಿರುವ ಯೋಗೀಂದ್ರ ಮರವಂತೆ ಅವರೊಡನೆ ಬುಧವಾರ ಶಾಲೆಯ ಸಾಹಿತ್ಯ ಸಂಘದ ಆಶ್ರಯದಲ್ಲಿ ಮಾತುಕತೆ ಏರ್ಪಡಿಸಲಾಗಿತ್ತು.

ಲಂಡನ್ ಸೇರಿದಂತೆ ಇಂಗ್ಲೆಂಡ್‌ನ ಎಲ್ಲ ಪ್ರಮುಖ ನಗರಗಳಲ್ಲಿ ಗಣನೀಯ ಸಂಖ್ಯೆಯ ಭಾರತೀಯರು ಉದ್ಯೋಗ ನಿರತರಾಗಿದ್ದಾರೆ. ಅಲ್ಲೆಲ್ಲ ಅವರು ರಾಜ್ಯ, ಭಾಷೆ, ಜಾತಿ ನೆಲೆಯಲ್ಲಿ ಸಂಘಟಿತರಾಗಿದ್ದಾರೆ. ಅವುಗಳ ಆಶ್ರಯದಲ್ಲಿ ಭಾರತೀಯ ಹಬ್ಬಗಳನ್ನು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ತಮ್ಮ ಮಕ್ಕಳಿಗೆ ಅಲ್ಲಿ ದೊರೆಯುವ ಶಿಕ್ಷಣದ ಜೊತೆಗೆ ಮಾತೃಭಾಷೆ, ಭಾರತೀಯ ಕಲೆಗಳನ್ನು ಕಲಿಸುತ್ತಿದ್ದಾರೆ. ಅವುಗಳ ಪ್ರದರ್ಶನ ಏರ್ಪಡಿಸುತ್ತಾರೆ. ಭಾರತೀಯ ಅಂಗಡಿಗಳಲ್ಲಿ ಊರಿನಲ್ಲಿ ಸಿಗುವ ಎಲ್ಲ ವಸ್ತುಗಳು ಸಿಗುತ್ತವೆ. ಅಲ್ಲಿ ನೆಲೆಸಿರುವ ಭಾರತೀಯರು ತಮ್ಮವರೊಡನೆ ತಮ್ಮ ಭಾಷೆಯಲ್ಲಿ ಮಾತನಾಡುತ್ತಾರೆ. ಮನೆಗಳಲ್ಲಿ ಭಾರತೀಯ ಅಡುಗೆ ಮಾಡಿ ಉಣ್ಣುತ್ತಾರೆ. ವಿದೇಶೀ ನೆಲ, ಸುತ್ತ ವಿದೇಶೀ ಜನ ಎನ್ನುವುದನ್ನು ಬಿಟ್ಟರೆ ಅವರೆಲ್ಲರ ಜೀವನ ಶೈಲಿ, ಚಿಂತನೆ ಭಾರತೀಯವೇ ಆಗಿರುತ್ತದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು, ಶಿಕ್ಷಕರು ಅವರೊಂದಿಗೆ ಸಂವಾದ ನಡೆಸಿ ಇಂಗ್ಲಂಡ್ ದೇಶದ ಶಿಕ್ಷಣ ಹಾಗೂ ಜನಜೀವನದ ಕುರಿತಾದ ಕುತೂಹಲ ತಣಿಸಿಕೊಂಡರು.

ಮುಖ್ಯೋಪಾಧ್ಯಾಯ ಕೆ. ವಿಘ್ನೇಶ್ವರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಸರ್ವೋತ್ತಮ ಭಟ್ ಸ್ವಾಗತಿಸಿದರು. ಡಾ. ಯಶೋದಾ ಕರನಿಂಗ ವಂದಿಸಿದರು.

Exit mobile version