Kundapra.com ಕುಂದಾಪ್ರ ಡಾಟ್ ಕಾಂ

ಸಾಹಸ ಪ್ರವೃತ್ತಿ ಮೈಗೂಡಿಸಿಕೊಂಡವರು ಯಶ ಕಾಣುತ್ತಾರೆ: ಲಲಿತಾ ಅಂಬಾಗಿಲು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ವಾಭಿಮಾನ, ಸ್ವಾತಂತ್ರ್ಯ ಪ್ರಿಯತೆ ಮತ್ತು ಸಾಹಸ ಪ್ರವೃತ್ತಿಯನ್ನು ಮೂಲದ್ರವ್ಯವನ್ನಾಗಿರಿಸಿಕೊಂಡವರು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಉತ್ತಮ ಶಿಕ್ಷಕರು ವೃತ್ತಿಪರತೆ ಮತ್ತು ವ್ಯಕ್ತಿ ವಿಶಿಷ್ಟತೆಯನ್ನು ಹೊಂದಿದಲ್ಲಿ ಯುವ ಸಮಾಜವನ್ನು ರೂಪಿಸುವಲ್ಲಿ ಸಾರ್ಥಕಭಾವ ಕಾಣುತ್ತಾರೆ. ತೆರೆಮರೆಯಲ್ಲಿ ಶ್ರದ್ಧೆ ಮತ್ತು ಶಿಸ್ತಿನಿಂದ ಕಾಯಕಗೈಯುವ ಶಿಕ್ಷಕರು ವಿಶೇಷ ಗೌರವಾರ್ಹರು ರಾಜ್ಯ ಪ್ರಶಸ್ತಿ ಪುರಸ್ಕೃತ ಲಲಿತಾ ಅಂಬಾಗಿಲು ನುಡಿದರು.

ಉಪ್ಪುಂದ ಮಹಿಳಾ ವಿವಿದೋದ್ಧೇಶ ಸಹಕಾರಿ ಸಂಘದ ಇಪ್ಪತ್ತೈದನೆ ಮಹಿಳಾ ಸ್ನೇಹ ಸಮ್ಮಿಲನ-೨೦೧೯ರಲ್ಲಿ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಉಪ್ಪುಂದ ಮಹಿಳಾ ವಿವಿದೋದ್ಧೇಶ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷೆ ಯು. ವರಮಹಾಲಕ್ಷ್ಮೀ ಹೊಳ್ಳ ಮಾತನಾಡಿ ಸಂಘದ ಸಿದ್ಧಿ-ಸಾಧನೆ ಮತ್ತು ವಿಶಿಷ್ಟ ಸೇವೆಗಳ ವಿವರ ನೀಡಿ ಹೊಸತಲೆಮಾರಿನವರು ಮುಂದೆ ಎಂದು ನಿಸ್ವಾರ್ಥ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು.

ವೀಣಾ ಶ್ಯಾನುಭೋಗ್ ಮತ್ತು ರಮಾ ಆಚಾರ್ಯ ಪ್ರಾರ್ಥಿಸಿದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಯು. ಗಣೇಶ ಪ್ರಸನ್ನ ಮಯ್ಯ ಸ್ವಾಗತಿಸಿದರು. ಯು. ವರಮಹಾಲಕ್ಷ್ಮೀ ಹೊಳ್ಳರು ಸನ್ಮಾನಿಸಿದರು. ಮುಖ್ಯ ಅತಿಥಿ ಲಲಿತಾ ಜಿ. ವಿವಿಧ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾದವರಿಗೆ ಬಹುಮಾನ ವಿತರಿಸಿದರು. ಯು. ಚಂದ್ರಶೇಖರ ಹೊಳ್ಳ ಅವರು ಉಪಸ್ಥಿತರಿದ್ದರು. ಕಾವೇರಿ ವಸ್ತ್ರವಿನ್ಯಾಸ ಕೇಂದ್ರ ಪ್ರಶಿಕ್ಷುಗಳಿಗೆ ಪ್ರಮಾಣಪತ್ರವನ್ನು ತರಬೇತಿ ಶಿಕ್ಷಕಿ ಸುಮಿತ್ರಾರವರ ಸಲಹೆಯಂತೆ ವಿತರಿಸಲಾಯ್ತು. ಪ್ರಶಾಂತ ಮಯ್ಯ ವಂದಿಸಿದರು. ಸಾವಿತ್ರಿ ಉಪಾಧ್ಯ ಕಾರ್ಯಕ್ರಮ ನಿರ್ವಹಿಸಿದರು. ಸುನೀತಾ ಶೇಟ್ ಅತಿಥಿಗಳ ಪರಿಚಯ ಮಾಡಿದರು.

Exit mobile version