Site icon Kundapra.com ಕುಂದಾಪ್ರ ಡಾಟ್ ಕಾಂ

ಅಕ್ಷತಾ ಪ್ರಕರಣ ಶೀಘ್ರ ಭೇದಿಸಿದ ಪೊಲೀಸ್ ಇಲಾಖೆ ಅಭಿನಂದನಾರ್ಹ: ಶಾಸಕ ಗೊಪಾಲ ಪೂಜಾರಿ

ಬೈಂದೂರು: ಇಲ್ಲಿನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಘಟನೆ ನಡೆದ ಮೂರು ದಿನಗಳಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸ್ ಇಲಾಖೆ ಅಭಿನಂದನಾರ್ಹ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು..

ಅವರು ಇಲ್ಲಿನ ಶಾಸಕರ ಕಛೇರಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಬೈಂದೂರು ಜನತೆಯನ್ನು ದಿಗ್ಬ್ರಮೆಗೊಳಿಸಿದ ಈ ಘಟನೆಯಿಂದ ಎಲ್ಲರೂ ಆತಂಕಕ್ಕೊಳಗಾಗಿದ್ದರು. ಈಗ ಪ್ರಕರಣಕ್ಕೊಂದು ಅಂತ್ಯ ದೊರೆತಿದೆ ಎಂದರು.

ಅಕ್ಷತಾಳ ಕುಟುಂಬಕ್ಕೆ 5 ಲಕ್ಷಗಳ ಪರಿಹಾರವನ್ನು ಸರ್ಕಾರದ ವತಿಯಿಂದ ಕೂಡಲೆ ತರಿಸಿಕೊಡಲಾಗುವುದು. ಪೊಲೀಸ್ ಇಲಾಖೆಯ ವರದಿಗಳಲ್ಲಿ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಮುಖವಾಗಿರುವುದರಿಂದ ವರದಿಗಳ ಬಂದ ತಕ್ಷಣ ಪರಿಹಾರ ದೊರಕಿಸಿಕೊಡಲಾಗುವುದು. ತಕ್ಷಣ ಪ್ರಕರಣವನ್ನು ಬೇಧಿಸುವಲ್ಲಿ ಇಲಾಖೆ ಶ್ರಮಿಸಿದ್ದು, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಬಗ್ಗೆ ಗೌರವ ಮೂಡಿಸುವ ಕೆಲಸ ಮಾಡಿದೆ ಎಂದರು.

ಈಗಾಗಲೇ ಮೃತ ಅಕ್ಷತಾ ಮನೆಗೆ ಶಿಕ್ಷಣ ಸಚಿವರು ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳ ಬೇಡಿಕೆಯಂತೆ ವಾಹನ ವ್ಯವಸ್ಥೆಯ ಭರವಸೆ ನೀಡಿದ್ದಾರೆ. ಬೈಂದೂರು ಕಾಲೇಜಿನಲ್ಲಿ ಬಾಲಕರ ಶೌಚಾಲಯಕ್ಕೆ 10 ಲಕ್ಷ, ಬಾಲಕಿಯರ ಶೌಚಾಲಯಕ್ಕೆ 20 ಲಕ್ಷ ಮಂಜೂರು ಮಾಡುವ ಆಶ್ವಾಸನೆ ನೀಡಿದ್ದಾರೆ. ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷರು ನವೋದಯ ಟ್ರಸ್ಟ್‌ನಿಂದ ರೂ.1ಲಕ್ಷ ಆರ್ಥಿಕ ನೆರವು ನೀಡಿದ್ದಾರೆ. ಮೂರು ತಿಂಗಳು ವಾಹನದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಇನ್ನೂ ಈ ಭಾಗದ ಬಹು ಬೇಡಿಕೆ ಲೇಡಿಸ್ ಹಾಸ್ಟೆಲ್. ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚರ್ಚಿಸಿ, ಬೈಂದೂರಿಗೆ ಲೇಡಿಸ್ ಹಾಸ್ಟೆಲ್ ಖಂಡಿತ ಮಾಡುತ್ತೇನೆ ಎಂದರು.

ಹೆನ್ಬೇರು ಭಾಗದ ಜನರ ಬೇಡಿಕೆ ರಾಘವೇಂದ್ರ ಮಠದ ಹತ್ತಿರ ಬಸ್ ತಂಗುದಾಣಕ್ಕೆ ಈಗಾಗಲೇ ಸಚಿವರು ಆದೇಶ ಮಾಡಿದ್ದಾರೆ. ಹಳ್ಳಿಗಳಿಗೆ ಹೊಸ ಬಸ್ ಪರವಾನಿಗೆ ನೀಡುವ ಕೆಲಸ ಆರಂಭವಾಗಲಿದೆ. ಒಟ್ಟಾರೆಯಾಗಿ ಗ್ರಾಮೀಣ ಭಾಗದ ಜನರ ನೋವಿಗೆ ನಾವು ತಕ್ಷಣ ಸ್ಪಂದಿಸುತ್ತೇವೆ. ಇಂಥಹ ಘಟನೆಗಳು ಭವಿಷುದಲ್ಲಿ ಪುನಾರವರ್ತನೆ ಆಗದಂತೆ ಮುಂಜಾರುಕತೆ ವಹಿಸುವ ಕೆಲಸ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ರಾಜು ಪೂಜಾರಿ, ರಮೇಶ ಗಾಣಿಗ, ರಾಮ ಶೇರುಗಾರ್, ಮಾಜಿ ಸದಸ್ಯರಾದ ವಿಜಯಕುಮಾರ್ ಶೆಟ್ಟಿ, ಕೆ.ಪಿ.ಸಿ.ಸಿ ಸದಸ್ಯರಾದ ರಘುರಾಮ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಮದನ್ ಕುಮಾರ್, ಬಾಬು ಶೆಟ್ಟಿ, ಅಶೋಕ ಶೆಟ್ಟಿ, ಚಂದ್ರ ಪೂಜಾರಿ, ಸುರೇಶ, ನಾಗರಾಜ ಗಾಣಿಗ ಉಪಸ್ಥಿತರಿದ್ದರು.

Exit mobile version