ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಸಾಗರ್ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯು ಕಳೆದ ವರ್ಷ ರೂ 154 ಕೋಟಿ ವ್ಯವಹಾರ ನಡೆಸಿ ರೂ 79.5 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 13 ಲಾಭಾಂಶ ನೀಡಲಾಗುವುದು ಎಂದು ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು.
ಬುಧವಾರ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು 17 ವರ್ಷ ಪೂರೈಸಿದೆ. ಐದು ಕಡೆ ಶಾಖೆಗಳನ್ನು ಹೊಂದಿದೆ. ಶಿರೂರು, ಗುಲ್ವಾಡಿ, ತೆಕ್ಕಟ್ಟೆಯಲ್ಲಿ ನೂತನ ಶಾಖೆಗಳನ್ನು ತೆರೆಯಲಿದೆ. ಕುಂದಾಪುರ ಶಾಖೆ ಸ್ವಂತ ನಿವೇಶನ, ಕಟ್ಟಡ ಹೊಂದಿದೆ. ಬೈಂದೂರಿನ ಪ್ರಧಾನ ಕಚೇರಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ. ಸದ್ಯ ರೂ 36.4 ಕೋಟಿ ಠೇವಣಿ ಸಂಗ್ರಹ ಹೊಂದಿದ್ದು, ಮುಂದಿನ ವರ್ಷ ಅದಕ್ಕೆ ರೂ 10 ಕೋಟಿ ಸೇರಿಸಲು ನಿರ್ಧರಿಸಲಾಗಿದೆ. ಆಡಳಿತ ಮಂಡಳಿ, ಸಿಬ್ಬಂದಿ ಸಹಕಾರದಿಂದ ಸೊಸೈಟಿ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಹೇಳಿದರು.
ನಿರ್ದೇಶಕರಾದ ಕೆ. ಶಂಕರ ಪೂಜಾರಿ, ಕೆ. ಶ್ರೀನಿವಾಸ ಪೂಜಾರಿ, ಚಿಕ್ಕು ಪೂಜಾರಿ, ಎನ್. ಅಣ್ಣಪ್ಪ ಬಿಲ್ಲವ, ಜಯಸೂರ್ಯ ಪೂಜಾರಿ, ಕಲ್ಪನಾ ಬಿ. ಪೂಜಾರಿ, ಎಂ. ಪುಟ್ಟ ಬಿಲ್ಲವ, ಶೇಖರ ಪೂಜಾರಿ, ಯು. ಕೇಶವ ಪೂಜಾರಿ, ಉದಯ ಜಿ. ಪೂಜಾರಿ ಇದ್ದರು.