Kundapra.com ಕುಂದಾಪ್ರ ಡಾಟ್ ಕಾಂ

ಜೇಸಿಐ ಉಪ್ಪುಂದ: ಸಮರ್ಜಿತ್ ಸಾಂಸ್ಕೃತಿಕ ಚಿಲುಮೆ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಮ್ಮ ಸಂಸ್ಕೃತಿ ಹಾಗೂ ಕಲೆಯನ್ನು ಬೆಳೆಸುವಲ್ಲಿ ಸಂಘ-ಸಂಸ್ಥೆಗಳ ಪಾತ್ರ ಅತೀ ಮಹತ್ವದಾಗಿದ್ದು, ಸಮಾಜಮುಖಿ ಚಿಂತನೆಯೊಂದಿಗೆ ಹುಟ್ಟಿಕೊಂಡ ಜೇಸಿ ಸಂಸ್ಥೆ ವ್ಯಕ್ತಿತ್ವವನ್ನು ಬೆಳೆಸುವುದರ ಮೂಲಕ ಸಮಾಜದ ಪರಿವರ್ತನೆಗೆ ಸಹಕಾರಿಯಾಗಿದೆ ಎಂದು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು.

ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಸ್ಥಳೀಯ ಜೇಸಿಐ ಘಟಕದ ೧೫ನೇ ಜೇಸಿ ಸಪ್ತಾಹ ’ಸಮರ್ಜಿತ್ ಸಾಂಸ್ಕೃತಿಕ ಚಿಲುಮೆ’ ಉದ್ಘಾಟಿಸಿ ಮಾತನಾಡಿದರು. ಬದುಕಿನಲ್ಲಿ ಅವಕಾಶ ದೊರೆಯುವುದು ವಿರಳ. ಆದರೆ ದೊರೆತ ಅವಕಾಶಗಳನ್ನು ಸಾರ್ಥಕ ಸದುಪಯೋಗ ಪಡಿಸಿಕೊಳ್ಳಬೇಕಾಗಿರುವುದು ಯುವಜನತೆಯ ಜವಬ್ದಾರಿಯಾಗಿದೆ. ಈ ನೆಲೆಯಲ್ಲಿ ಜೇಸಿ ಸಂಸ್ಥೆಯ ಯುವ ಸಮುದಾಯದ ಸಂಘಟನಾ ಪ್ರಯತ್ನ ಶ್ಲಾಘನೀಯ. ಈ ಸಪ್ತಾಹದಲ್ಲಿ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳು ಉತ್ತಮವಾಗಿದೆ. ಪ್ರೇಕ್ಷಕರಲ್ಲಿ ಹೊಸ ಅಭಿರುಚಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಹೆಚ್ಚುಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದರು.

ಜೇಸಿಐ ಅಧ್ಯಕ್ಷ ಪುರಂದರ ಖಾರ್ವಿ ಅಧ್ಯಕ್ಷತೆವಹಿಸಿದ್ದರು. ಬೆಂಗಳೂರು ಉದ್ಯಮಿ ಗೋವಿಂದ ಬಾಬು ಪೂಜಾರಿ ಇವರಿಗೆ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ’ಉದ್ಯಮರತ್ನ ಸಾಧನಾಶ್ರೀ’ ಪ್ರಶಸ್ತಿ ಪ್ರದಾನಿಸಿದರು. ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಮತ್ತು ಡಾ. ವೈ. ಭರತ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.

ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಯು. ಪ್ರಕಾಶ್ ಭಟ್, ಕುಂದಾಪುರ ಕೋಷ್ಟಲ್ ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ ಶೆಟ್ಟಿ, ಉದ್ಯಮಿಗಳಾದ ಪ್ರಕಾಶ ಐತಾಳ್ ನಾಗೂರು, ಗೋಪಾಲಕೃಷ್ಣ ಕೆ. ಶಿರೂರು, ಡಾ. ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿ, ಕಾರ್ಯದರ್ಶಿ ದೇವರಾಯ ವಂದಿಸಿದರು. ನಂತರ ಮನು ಹಂದಾಡಿ ಮತ್ತು ತಂಡದವರಿಂದ ನಗೆಹಬ್ಬ, ಕುಂದಗನ್ನಡೋತ್ಸವ ನಡೆಯಿತು

Exit mobile version