ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕುಂಭಾಸಿ ಆನೆಗುಡ್ಡೆ ದೇವಸ್ಥಾನದ ಮುಖಮಂಟಪದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದ ಸಂದರ್ಭ ಗಾಯಗೊಂಡ ಮಹಿಳೆಯೊಬ್ಬರನ್ನು ಉಪಚರಿಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಲ್ಲದೇ ಅಸ್ತವ್ಯಸ್ತಗೊಂಡಿದ್ದ ವಾಹನ ಸಂಚಾರವನ್ನು ಸುಗಮಗೊಳಿಸುವ ಮೂಲಕ ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಮಾನವೀಯತೆ ಮೆರೆದ ಘಟನೆ ಶನಿವಾರ ನಡೆದಿದೆ.
ಆರೋಗ್ಯ ಸಚಿವ ಶ್ರೀರಾಮುಲು ಉಡುಪಿಯಿಂದ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉದ್ಘಾಟನೆಗಾಗಿ ಕಾಯುತ್ತಿದ್ದ ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನಿಂದ ನಿರ್ಮಿಸಲಾದ ನೂತನ ಹೆರಿಗೆ ಆಸ್ಪತ್ರೆಯನ್ನು ಉದ್ಘಾಟಿಸಲು ಆಗಮಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಬರುತ್ತಿದ್ದ ವೇಳೆ ಕುಂಭಾಸಿ ಶ್ರೀ ಆನೆಗುಡ್ಡೆ ದೇವಸ್ಥಾನದ ದ್ವಾರಬಾಗಿಲಿನಲ್ಲಿ ಲಾರಿ ಬೈಕ್ ಹಾಗೂ ರಿಕ್ಷಾಗಳ ನಡುವೆ ಸಚಿವರ ಕಣ್ಣೆದುರೆ ಅಪಘಾತ ನಡೆದಿದೆ. ಕುಂಭಾಶಿ ರಸ್ತೆಯಲ್ಲಿ ಬೈಕ್ ಸವಾರರೋರ್ವರು ಲಾರಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದರು. ಇದೇ ಸಮಯದಲ್ಲಿ ಹಿಂದಿನಿಂದ ಬರುತ್ತಿದ್ದ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ಪಲ್ಟಿಯಾಯಿತು. ಆಗ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಗಾಯಗೊಂಡಿದ್ದರು. ಹೆದ್ದಾರಿಯ ನಡುವೆ ಅಪಘಾತ ಸಂಭವಿಸಿದ್ದರಿಂದ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು.
ತಕ್ಷಣ ಕಾರಿನಿಂದ ಇಳಿದ ಸಚಿವ ಶ್ರೀರಾಮುಲು ಗಾಯಗೊಂಡ ಮಹಿಳೆಯನ್ನು ಉಪಚರಿಸಿ ಉಡುಪಿ ಶಾಸಕ ರಘುಪತಿ ಭಟ್ ಅವರ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಬಳಿಕ ಸಂಚಾರ ಸುಗಮಗೊಳಿಸುವಲ್ಲಿ ಸಹಕರಿಸಿದ್ದರು. ಸಚಿವ ಈ ಜನಪರ ಕಾಳಜಿ ಇದೀಗ ಕುಂದಾಪುರದೆಲ್ಲೆಡೆ ಪ್ರಶಂಸೆಗೆ ಕಾರಣವಾಗಿದೆ.

