Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಶಾಸ್ತ್ರಿ ಸರ್ಕಲ್‌ ಫ್ಲೈಓವರ್‌ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್‌ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಫ್ಲೈಓವರ್‌ ಹಾಗೂ ಇತರ ಕಾಮಗಾರಿಗಳ ವಿಳಂಬ ಧೋರಣೆ ವಿರೋಧಿಸಿ ಕುಂದಾಪುರ ತಾಲ್ಲೂಕು ಪತ್ರಕರ್ತರ ಸಂಘ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಪ್ರತಿಭಟನಾ ಸಭೆ ನಡೆಯಿತು.

ಕೇಮಾರು ಸಾಂದೀಪನಿ ಮಠದ ಈಶ ವಿಠ್ಠಲದಾಸ ಸ್ವಾಮೀಜಿ  ಮಾತನಾಡಿ ಹಿಂದೆ ರಾಜರ ಆಡಳಿತ ಇದ್ದಾಗ ಆತನಿಗೆ ಮಾತ್ರ ನಮಸ್ಕಾರ ಹಾಕಿದರೆ ಬೇಡಿಕೆಗಳು ಈಡೇರುತ್ತಿದ್ದವು. ಆದರೆ, ಈಗ ಶ್ರೀಸಾಮಾನ್ಯ ತನ್ನ ಬೇಡಿಕೆ ಹಾಗೂ ಹಕ್ಕುಗಳನ್ನು ಪಡೆದುಕೊಳ್ಳಲು ಹಳ್ಳಿಯಿಂದ ದಿಲ್ಲಿವರೆಗೂ ಹಲವು ಮಂದಿಯ ಕಾಲುಗಳನ್ನು ಹಿಡಿಯುವ ಸ್ಥಿತಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯ ಬಂದ ನಂತರ ಅಧಿಕಾರಿ ಹಾಗೂ ಜನಪ್ರತಿನಿಧಿ ಎನ್ನುವ ಎರಡು ವರ್ಗಗಳು ಮಾತ್ರ ಉದ್ಧಾರವಾಗಿವೆ, ಜನಸಾಮಾನ್ಯರ ಪರಿಸ್ಥಿತಿ ಹಾಗೆಯೇ ಇದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಜನರ ಸಮಸ್ಯೆಗಳ ಕುರಿತಂತೆ ಅರಿವು ಇಲ್ಲದೇ ಇರುವುದು ನೋವಿನ ವಿಚಾರ. ಯಂತ್ರಿತ ಸೌಲಭ್ಯಗಳನ್ನು ರದ್ದು ಮಾಡಿ ಜನಸಾಮಾನ್ಯರಂತೆ ಬದುಕುವುದನ್ನು ರೂಢಿಸಿಕೊಂಡಾಗ ಮಾತ್ರ ಅವರಿಗೆ ಸಮಸ್ಯೆಗಳ ನೈಜತೆ ಅರಿವಾಗುತ್ತದೆ’ ಎಂದರು.

ಪತ್ರಕರ್ತ ಜಾನ್‌ ಡಿಸೋಜ ಮಾತನಾಡಿ, ‘ನಗರದ ಹೃದಯ ಭಾಗದಲ್ಲಿರುವ ಈ ಸಮಸ್ಯೆ 10 ವರ್ಷಗಳಿಂದ ಎದ್ದು ಕಾಣುತ್ತಿದ್ದರೂ, ಇದಕ್ಕೆ ದೊರಕಬೇಕಾದ ರೀತಿಯಲ್ಲಿ ಸಾರ್ವಜನಿಕ ಸ್ಪಂದನೆ ದೊರಕಿಲ್ಲ. ಹಾಗಾಗಿ, ಸಮಸ್ಯೆ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಮಾಧ್ಯಮಗಳು ಹಾಗೂ ಆಸಕ್ತರು ಸಮಸ್ಯೆ ಪರಿಹಾರಕ್ಕಾಗಿ ಧ್ವನಿ ಎತ್ತಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೋಟೇಶ್ವರದಿಂದ ಬೈಂದೂರುವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹಲವು ಕಡೆಗಳಲ್ಲಿ ಲೋಪಗಳು ಎದ್ದು ಕಾಣುತ್ತಿವೆ. ಜನರ ಪ್ರಾಣವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಎಲ್ಲರ ಸಹಕಾರವೂ ಅಗತ್ಯ’ ಎಂದರು.

 

ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ, ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ್‌ ಕಾವೇರಿ, ರೈಲು ಪ್ರಯಾಣಿಕ ಹಿತರಕ್ಷಣಾ ಸಮಿತಿಯ ಕೆಂಚನೂರು ಸೋಮಶೇಖರ ಶೆಟ್ಟಿ, ಕುಂದಾಪುರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎ. ಭಾಸ್ಕರ ಶೆಟ್ಟಿ, ಸತೀಶ್ ಕುಮಾರ್ ಕೋಟೇಶ್ವರ, ಜೆಡಿಎಸ್‌ ಮುಖಂಡ ಮನ್ಸೂರ್‌ ನಾವುಂದ, ಶ್ರೀನಿವಾಸ ಕುಂದರ್‌ ಕೋಟೇಶ್ವರ, ವಕೀಲ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಕಾಂಗ್ರೆಸ್‌ ಮುಖಂಡ ವಿನೋದ ಕ್ರಾಸ್ತಾ ಹಾಗೂ ರಾಘವೇಂದ್ರ ಮಾತನಾಡಿದರು.

ನೂತನ ಪುರಸಭಾ ಸದಸ್ಯ ಅಬ್ಬು ಮಹಮ್ಮದ್‌, ಮಹಾಬಲ ವಡೇರಹೋಬಳಿ, ಕಿಶೋರ ಕುಂದಾಪುರ (ಬಲ್ಲಾಳ), ರಂಜಿತ ಕುಮಾರ ಶೆಟ್ಟಿ ಕಾಳಾವರ, ಎಸ್‌.ಸತೀಶ್‌ ಕುಮಾರ, ಹರೀಶ್‌ ಕುಂಭಾಸಿ, ರಾಘವೇಂದ್ರ ತೋಡಕಟ್ಟು ಇದ್ದರು.

ವ್ಯವಸ್ಥೆಯ ದುರಂತ ‘ಚುನಾವಣೆ ಸಂದರ್ಭದಲ್ಲಿ ಒಂದು ಮತಕ್ಕಾಗಿ 5– 6 ಕಿ.ಮೀ. ದೂರ ನಡೆಯುವ ಜನಪ್ರತಿನಿಧಿಗಳಿಗೆ ಜನನಿಬಿಡ ಪ್ರದೇಶದಲ್ಲಿ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಮಸ್ಯೆ ಕಾಣಿಸದೆ ಇರುವುದು ವ್ಯವಸ್ಥೆಯ ದುರಂತ’ ಎಂದು ವಕೀಲ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.

 

Exit mobile version