Kundapra.com ಕುಂದಾಪ್ರ ಡಾಟ್ ಕಾಂ

ಯುವಕರೇ ದೇಶದ ಭವಿಷ್ಯ: ಪ್ರೀತಿ ಗೇಹ್ಲೋಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಯುವಕರೇ ಭಾರತ ದೇಶದ ಭವಿಷ್ಯವಾಗಿದ್ದಾರೆ. ಹಾಗಾಗಿ ದೇಶದ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಯುವ ಸಮುದಾಯ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೇಹ್ಲೋಟ್ ಹೇಳಿದರು.

ಅವರು ನೆಹರು ಯುವ ಕೇಂದ್ರ ಸಂಘಟನಾ ಬೆಂಗಳೂರು ಹಾಗೂ ನೆಹರು ಯುವ ಕೇಂದ್ರ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ೧೫ ದಿನಗಳ ಯುವ ಸ್ವಯಂಸೇವಕರುಕರ ಪ್ರವೇಶ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ದೇಶದಲ್ಲಿನ ಭ್ರಷ್ಟಾಚಾರ, ಸಾಮಾಜಿಕ ಅಸಮತೋಲನ, ನೆರೆ, ಬರ, ವಾತಾವರಣ ಬದಲಾವಣೆ ಮೊದಲಾದವುಗಳ ಬಗ್ಗೆ ನಾವು ಟೀಕೆ ಮಾಡುತ್ತೆವೆ ಆದರೆ ಅವುಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು ಎಂಬುದನ್ನು ಮರೆತಿದ್ದೇವೆ. ಈ ಎಲ್ಲಾ ಸಮಸ್ಯೆಗಳಿಗೆ ಯುವಕರಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.

ನೆಹರು ಯುವ ಕೇಂದ್ರದಿಂದ ಪಡೆದ ತರಬೇತಿಯಿಂದ ಸಾಕಷ್ಟು ಅನುಭವ ದೊರೆತಿದೆ. ಅದನ್ನು ತಮ್ಮ ತಮ್ಮ ಊರುಗಳಲ್ಲಿ ಯುವ ಜನರೊಂದಿಗೆ ಕೆಲಸ ಮಾಡುವಾಗ ಪ್ರಯೋಗಿಸಬೇಕು. ಸ್ವ-ಉದ್ಯೋಗ, ಸಾಮಾಜಿಕ ಜಾಗೃತಿ ಮೊದಲಾದ ಕಾರ್ಯಗಳ ಬಗೆಗೆ ಸಮಾಜದಲ್ಲಿ ಸೂಕ್ತ ಅರಿವು ಮೂಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ವಹಿಸಿದ್ದರು. ಎಸ್‌ಕೆಡಿಆರ್‌ಡಿಪಿ ಬಿಸಿ ಟ್ರಸ್ಟ್ ರಿ. ಇದರ ಕರಾವಳಿ ಪ್ರಾಂತೀಯ ನಿರ್ದೇಶಕ ಮಹಾವೀರ ಆಜ್ರಿ, ಉಡುಪಿ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಎನ್‌ಐಎಸ್‌ಟಿ ಎಸ್‌ಕೆಡಿಆರ್‌ಡಿಪಿ ಬಿಸಿ ಟ್ರಸ್ಟ್‌ನ ಪ್ರಾಂಶುಪಾಲರಾದ ಅಶೋಕ್ ಕೆ ವೇದಿಕೆಯಲ್ಲಿದ್ದರು.

ತರಬೇತಿಯಲ್ಲಿ ಭಾಗವಹಿಸಿದ್ದ ಕಾರವಾರ, ಮಂಗಳೂರು, ಚಿಕ್ಕಮಗಳೂರು, ಕೊಡಗು, ಮಂಡ್ಯ, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳ ಸ್ವಯಂಸೇವಕರುಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಜಿಲ್ಲೆಯ ಹನ್ನೆರಡು ಯುವ ಮಂಡಲಗಳಿಗೆ ಕ್ರೀಡಾ ಸಾಮಾಗ್ರಿ ವಿತರಿಸಲಾಯಿತು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್‌ಫ್ರೆಡ್ ಡಿಸೋಜಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು. ಎನ್‌ವೈವಿ ಸುನಿಲ್ ಹೆಚ್. ಜಿ ಸ್ವಾಗತಿಸಿದರು. ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ವಿಷ್ಣುಮೂರ್ತಿ ವಂದಿಸಿದರು. ಶ್ರೇಯಸ್ ಜಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Exit mobile version