Kundapra.com ಕುಂದಾಪ್ರ ಡಾಟ್ ಕಾಂ

ಅಪಾಯಕಾರಿ ತ್ಯಾಜ್ಯ ನಿರ್ವಹಣೆ: ವಂಡ್ಸೆ ಪಂಚಾಯತ್‌ಗೆ ಪೈಲೆಟ್ ಪ್ರಾಜೆಕ್ಟ್ – ಸಿಇಓ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಸ್.ಎಲ್.ಆರ್.ಎಂನ ಯಶಸ್ವಿ ಅನುಷ್ಠಾನದಿಂದ ವಂಡ್ಸೆ ಗ್ರಾಮ ಪಂಚಾಯತ್ ಗಮನ ಸಳೆದಿದೆ. ಈ ತನಕ ಹಸಿ ಕಸ ಮತ್ತು ಒಣ ಕಸ ಎಂದು ಎರಡು ವಿಭಾಗಗಳಲ್ಲಿ ತ್ಯಾಜ್ಯ ಸಂಗ್ರಹಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅಪಾಯಕಾರಿ ಕಸ ನಿರ್ವಹಣೆಗೆ ಜಿಲ್ಲಾಡಳಿತ ಮುಂದಾಗಿದ್ದು ಉಡುಪಿ ಜಿಲ್ಲೆಯ ಮೂರು ಗ್ರಾಮ ಪಂಚಾಯತ್‌ಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಟಾನ ಮಾಡುತ್ತಿದ್ದು, ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಹೇಳಿದರು.

ಅವರು ಅ.೨೨ರಂದು ವಂಡ್ಸೆ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಮಾತನಾಡಿದರು. ಅಪಾಯಕಾರಿ ಕಸವಾದ ಸ್ಯಾನಿಟರ್ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯಗಳನ್ನು ಪ್ರತ್ಯೇಕವಾಗಿಯೇ ಮನೆಗಳಿಂದ ಸಂಗ್ರಹಿಸಬೇಕು. ಅದಕ್ಕೆ ಕೆಂಪು ಬಣ್ಣದ ಬಕೇಟನ್ನು ನೀಡಬೇಕು. ಅಪಾಯಕಾರಿ ಕಸವನ್ನು ಈ ಬಕೆಟಿಗೇ ಹಾಕಬೇಕು. ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಈ ರೀತಿ ಮಾಡುವುದರಿಂದ ಎಸ್.ಎಲ್.ಆರ್.ಎಂನಲ್ಲಿ ಕಸ ವಿಂಗಡಣೆಯೂ ಸುಲಭವಾಗುತ್ತದೆ ಎಂದರು.

ವಂಡ್ಸೆಯ ಎಸ್.ಎಲ್.ಆರ್.ಎಂ ಘಟಕ ಅಧ್ಯಯನಕ್ಕೆ ಬೇರೆ ಬೇರೆ ಕಡೆಗಳಿಂದ ಅಧ್ಯಯನಕ್ಕೆ ಬರುವುದರಿಂದ ಸ್ಥಳಾಂತರ ಪ್ರಕ್ರಿಯೆಯನ್ನು ವೇಗವಾಗಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ವ್ಯವಸ್ಥಿತವಾಗಿ, ದೂರದೃಷ್ಟಿ ಇಟ್ಟುಕೊಂಡು ಯೋಜನೆ ರೂಪಿಸುವಂತೆ ಸೂಚಿಸಿದರು.

ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಮಾತನಾಡಿ, ಎಸ್.ಎಲ್.ಆರ್.ಎಂ ವಂಡ್ಸೆಯಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ. ವಂಡ್ಸೆ ಮಾದರಿಯೆಂದೇ ಪ್ರಸಿದ್ಧವಾಗುತ್ತಿದೆ. ಈಗಾಗಲೇ ಪ್ರತಿ ಮನೆ, ಅಂಗಡಿಗೆ ಎರಡು ಬಕೆಟ್‌ಗಳನ್ನು ನೀಡಿ ಕಸವನ್ನು ಸಂಗ್ರಹಿಸಿ, ವಿಂಗಡಿಸಿ, ವಿಕ್ರಯಿಸಿ ಲಾಭದಾಯಕವಾಗಿ ನಡೆಸಲಾಗುತ್ತಿರುವುದು ಶ್ಲಾಘನಾರ್ಹ ವಿಚಾರ. ಹಾಗೆಯೇ ಅಪಾಯಕಾರಿ ಕಸ ಸಂಗ್ರಹಣೆಯಲ್ಲಿಯೂ ಮಾದರಿಯಾಗಿ ಮೂಡಿ ಬರಲಿ ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ ಶೆಟ್ಟಿ ಮಾತನಾಡಿ, ಈಗಾಗಲೇ ವಂಡ್ಸೆ ಗ್ರಾಮದ ಎಲ್ಲ ಮನೆ, ಅಂಗಡಿ ಮುಂಗಟ್ಟುಗಳಿಂದ ಕಸ ಸಂಗ್ರಹಣೆ ಮಾಡುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಕಚ್ಚಾ ವಸ್ತುಗಳಿಗೆ ಮಾರುಕಟ್ಟೆ ಕುಸಿದಿರುವುದರಿಂದ ಅದಾಯ ಕಡಿಮೆ ಬರುತ್ತಿದೆ. ಪ್ಲಾಸ್ಟಿಕ್ ಮೊದಲಾದ ಪದಾರ್ಥಗಳನ್ನು ಯಂತ್ರೋಪಕರಣಗಳ ಮೂಲಕ ಸರಳೀಕರಿಸಿ ಮಾರಾಟ ಮಾಡಿದರೆ ಒಳ್ಳೆಯ ಬೆಲೆ ಸಿಗುತ್ತದೆ. ಇನ್ನಷ್ಟು ಸರಳೀಕರಣಗೊಳಿಸಕೊಳ್ಳಲು ಮೂರು ಪ್ರಮುಖ ಯಂತ್ರಗಳ ಬಳಕೆ ಮಾಡಬೇಕಾಗುತ್ತದೆ. ಇದರಿಂದ ಇನ್ನಷ್ಟು ವ್ಯವಸ್ಥಿತವಾಗಿ ಕಸ ವಿಂಗಡಣೆ, ಲಾಭದಾಯಕವಾಗಿ ಮಾಡಬಹುದಾಗಿದೆ ಎಂದರು.

ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ನಾಗಭೂಷಣ ಉಡುಪ, ಗ್ರಾ.ಪಂ.ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಸದಸ್ಯೆ ಸಿಂಗಾರಿ, ಮಾಜಿ ಅಧ್ಯಕ್ಷರಾದ ಶಿವರಾಮ ಶೆಟ್ಟಿ ವಿ.ಕೆ., ಶ್ರೀನಿವಾಸ ಪೂಜಾರಿ ಕಲ್ಮಾಡಿ, ಜಿಲ್ಲಾ ಮಟ್ಟದ ಅಧಿಕಾರಿಗಳಾದ ಜೇಮ್ಸ್ ಡಿಸಿಲ್ವಾ, ಸುಧೀರ್, ಮೂರ್ತಿ, ಇಂಜಿನಿಯರ್ ಕೇಶವ ಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ತ್ಯಾಂಪಣ ಶೆಟ್ಟಿ, ಎಸ್.ಎಲ್.ಆರ್.ಎಂ ಮೇಲ್ವಿಚಾರಕಿ ವಿಜಯಲಕ್ಷ್ಮೀ, ಪಂಚಾಯತ್ ಕಾರ್ಯದರ್ಶಿ ಶಂಕರ ಆಚಾರ್ಯ, ಸ್ಥಳೀಯ ಗಣ್ಯರು, ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

ಸ್ಥಳೀಯರಿಂದ ಅಪಾಯಕಾರಿ ಕಸ ಸಂಗ್ರಹಣೆ ಮತ್ತು ಇನ್ನಷ್ಟು ವ್ಯವಸ್ಥಿತವಾಗಿ ಎಸ್.ಎಲ್.ಆರ್.ಎಂ ಘಟಕ ನಿರ್ವಹಣೆಯ ಬಗ್ಗೆ ಚರ್ಚೆ ನಡೆಸಿದರು. ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ರೂಪ ಗೋಪಿ ಸ್ವಾಗತಿಸಿ, ವಂದಿಸಿದರು. ನಂತರ ಎಸ್.ಎಲ್.ಆರ್.ಎಂಗೆ ಭೇಟಿ ನೀಡಿದರು.

Exit mobile version