Kundapra.com ಕುಂದಾಪ್ರ ಡಾಟ್ ಕಾಂ

ಪೊಲೀಸ್ ಇಲಾಖೆಯನ್ನು ಸಮಾಜಮುಖಿಯಾಗಿಸುವತ್ತ ಸರ್ಕಾರ: ಬಸವರಾಜ ಬೊಮ್ಮಾಯಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪೊಲೀಸರಿಗೆ ಅಪರಾಧ ನಿಯಂತ್ರಣದ ಹೊಣೆಯ ಜತೆಗೆ ಸಾಮಾಜಿಕ ಜವಾಬ್ದಾರಿಯೂ ಇದೆ. ಆ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಸಮಾಜಮುಖಿಯಾಗಿ ಮಾಡುವತ್ತ ಸರ್ಕಾರ ಗಮನ ಹರಿಸಲಿದೆ ಎಂದು ರಾಜ್ಯ ಗೃಹ ಹಾಗೂ ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಶುಕ್ರವಾರ ರೂ. 41 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಬೈಂದೂರು ಪೊಲೀಸ್ ವೃತ್ತ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಮಾತನಾಡಿ ಸಮಾಜದಲ್ಲಿ ಕೆಲವೇ ಜನರು ಅಪರಾಧ ಪ್ರವೃತ್ತಿಯ ಜನರು ಇರುತ್ತಾರೆ. ಪೊಲೀಸರು ನಾಗರಿಕರ ಜತೆ ನಿಕಟ ಸಂಪರ್ಕ, ಸಂಬಂಧ ಸಾಧಿಸಿದರೆ ಅಪರಾಧ ನಿಯಂತ್ರಣ ಮತ್ತು ಪತ್ತೆ ಸುಲಭವಾಗುತ್ತದೆ. ಇದರ ಇನ್ನೊಂದು ಮುಖವಾಗಿ ಸರ್ಕಾರವು ಪೊಲೀಸ್ ಸಿಬ್ಬಂದಿಯ ಸೇವಾ ಸ್ಥಿತಿ, ಕರ್ತವ್ಯದ ಸ್ಥಳ, ಅಗತ್ಯ ಸೌಲಭ್ಯಗಳ ಸುಧಾರಣೆಯನ್ನೂ ಮಾಡಲಿದೆ ಎಂದರು.

ಯಾಂತ್ರಿಕ ಉಪಕರಣಗಳ ಬಳಕೆಯ ಹೆಚ್ಚಳದ ಪರಿಣಾಮವಾಗಿ ಅವುಗಳಿಗೆ ಸಂಬಂಧಿಸಿದ ಅಪರಾಧ ಹೆಚ್ಚಿದೆ. ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲಾಗುತ್ತಿದೆ. ಬ್ಯಾಂಕ್ ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅವರ ನಡುವೆ ಸಮನ್ವಯ ಸಾಧಿಸಲಾಗುವುದು. ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯಲು ಸೈಬರ್ ಪೊಲೀಸ್ ವ್ಯವಸ್ಥೆಗೆ ಶಕ್ತಿ ತುಂಬಲಾಗುತ್ತಿದೆ, ಕರಾವಳಿಯ ಮೂಲಕ ನಡೆಯುವ ಅಪರಾಧ ನಿಯಂತ್ರಿಸಲು ಕರಾವಳಿ ಕಾವಲು ಪಡೆಯನ್ನು ಗಟ್ಟಿಗೊಳಿಸಲಾಗುವುದು. ಅದಕ್ಕೆ ಅಗತ್ಯವಿರುವ ಸ್ಪೀಡ್ ಬೋಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಮುಂದಿನ ರಾಜ್ಯ ಬಜೆಟ್‌ನಲ್ಲಿ ಇವೆಲ್ಲವುಗಳಿಗೆ ಹಣ ಮೀಸಲಿಡುವುದರ ಜತೆಗೆ ಕೇಂದ್ರದಿಂದಲೂ ಅನುದಾನ ಪಡೆಯಲು ಯತ್ನಿಸಲಾಗುವುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮತನಾಡಿ, ಸಂಪೂರ್ಣ ಗ್ರಾಮೀಣ ಪ್ರದೇಶ ಆಗಿರುವ ಬೈಂದೂರು ಕ್ಷೇತ್ರದಲ್ಲಿ ೭ ಪೊಲೀಸ್ ಠಾಣೆಗಳಿವೆ. ಜನರು ಶಾಂತಿಪ್ರಿಯರು. ಪೊಲೀಸರು ಅವರಿಗೆ ಸದಾ ಸ್ಪಂದಿಸಬೇಕು. ಒಂದು ಪ್ರಕರಣ ದಾಖಲಾದ ಬಳಿಕ ಪ್ರತಿದೂರು ಸ್ವೀಕರಿಸುವ ಮುನ್ನ ಸತ್ಯಾಸತ್ಯತೆ ಅರಿಯಬೇಕು. ಹಾಗೆ ಮಾಡದಿದ್ದರೆ ಎರಡೂ ಕಡೆಯವರು ಠಾಣೆಗೆ ಮತ್ತು ನ್ಯಾಯಾಲಯಕ್ಕೆ ಅಲೆಯುವಂತಾಗುತ್ತದೆ ಎಂದು ಹೇಳಿದರು.

ಉಡುಪಿ ಶಾಸಕ ರಘುಪತಿ ಭಟ್, ಭಟ್ಕಳ ಶಾಸಕ ಸುನಿಲ್ ನಾಯ್ಕ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಾಂಬು ದೇವಾಡಿಗ, ಎಸ್‌ಪಿ ನಿಶಾ ಜೇಮ್ಸ್, ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ, ಎಎಸ್‌ಪಿ ಪಿ. ಕೃಷ್ಣಕಾಂತ್, ಡಿವೈಎಸ್‌ಪಿ ಹರಿರಾಮ್ ಶಂಕರ್, ಸಿಪಿಐ ಸುರೇಶ ನಾಯ್ಕ್, ಎಸ್‌ಐ ತಿಮ್ಮೇಶ್ ಬಿ. ಎನ್. ವಕೀಲ ಮಟ್ಟಾರು ರತ್ನಾಕರ ಶೆಟ್ಟಿ ಇದ್ದರು. ಶಿಕ್ಷಕ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು. ಕಟ್ಟಡದ ಗುತ್ತಿಗೆದಾರ ಪ್ರಮೋದ್ ಶೆಟ್ಟಿ ಮಂದರ್ತಿ ಅವರನ್ನು ಸನ್ಮಾನಿಸಲಾಯಿತು.

ಕುಂದಾಪುರಕ್ಕೆ ಮಹಿಳಾ ಠಾಣೆ ಭರವಸೆ : ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಕುಂದಾಪುರದಿಂದ ಉಡುಪಿ ಜಿಲ್ಲಾ ಕೇಂದ್ರಕ್ಕೆ ವರ್ಗಾವಣೆಯಾದ ಮಹಿಳಾ ಪೊಲೀಸ್ ಠಾಣೆಯ ಬದಲಿಗೆ ಎಸ್‌ಪಿ ಅವರಿಂದ ಪ್ರಸ್ತಾವನೆ ಪಡೆದು ಕುಂದಾಪುರದಲ್ಲಿ ಮಹಿಳಾ ಠಾಣೆ ತೆರೆಯಲಾಗುವುದು. ಎರಡೂವರೆ ವರ್ಷಗಳಿಂದ ಸಿಬ್ಬಂದಿ ನೇಮಕ ಆಗದಿರುವುದರಿಂದ ಉಂಟಾದ ಕೊರತೆಯನ್ನು ತಕ್ಷಣ 6000  ಜನರ ನೇಮಕದ ಮೂಲಕ ಕೆಲಮಟ್ಟಿಗೆ ಪರಿಹರಿಸಲಾಗುವುದು. ಇನ್ನಷ್ಟು ಪೊಲೀಸರ ನೇಮಕಕ್ಕೆ ಚಾಲನೆ ನೀಡಲಾಗುವುದು. ಸದ್ಯ 113ವಾಹನಗನ್ನು ಖರೀದಿಸಲಿದ್ದು, ಇನ್ನೂ 500ವಾಹನಗಳ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು. ಇಲಾಖೆ ಆಧುನೀಕರಣಕ್ಕೂ ಚಾಲನೆ ನೀಡಲಾಗುವುದು. ಪೊಲೀಸ್ ವೇತನ ಕುರಿತಾದ ಔರಾದ್‌ಕರ್ ವರದಿಯ ಅನುಷ್ಠಾನದ ಸಂದರ್ಭ ದೋಷಗಳಾಗಿದ್ದರೆ ಸರಿಪಡಿಸಲಾಗುವುದು ಎಂದರು.

 

Exit mobile version