Site icon Kundapra.com ಕುಂದಾಪ್ರ ಡಾಟ್ ಕಾಂ

ಡಾ. ಎಂ. ಮೋಹನ್ ಆಳ್ವರಿಗೆ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಂಟರಯಾನೆ ನಾಡವರ ಸಂಘ (ರಿ.) ಬಂದೂರು ಹಾಗೂ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಕುಂದಾಪುರ ಇದರ ಸಹಯೋಗದಲ್ಲಿ ಯಡ್ತರೆ ಮಂಜಯ್ಯ ಶೆಟ್ಟಿ ೧೦೬ನೇ ಜಯಂತಿ ಉತ್ಸವ ಹಾಗೂ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ಯಡ್ತರೆ ಮಂಜಯ್ಯ ಶೆಟ್ಟಿ ಸಂಕೀರ್ಣದ ಬಿ. ಜಗನ್ನಾಥ ಶೆಟ್ಟಿ ಸಭಾವನದಲ್ಲಿ ನಡೆಯಿತು.

ಮೂಡಬಿದಿರೆಯ ಆಳ್ವಾಸ್ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರವರಿಗೆ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ| ಎಂ. ಮೋಹನ ಆಳ್ವ ಅವರು ಬದುಕಿನಲ್ಲಿ ಆದರ್ಶವಿದ್ದಾಗ ಗೌರವ ದೊರೆಯುತ್ತದೆ. ಹೊಗಳಿಕೆ ಹಾಗೂ ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಸತ್ಯ ಮರೆಮಾಚಿ ಸುಳ್ಳು ವೈಭವೀಕರಿಸುವ ಇಂದಿನ ಕಾಲ ಘಟ್ಟದಲ್ಲಿ ಭಾವನಾತ್ಮಕ ಸಂಬಂಧಗಳು ದೂರಾಗುತ್ತಿದೆ. ಮೌಲ್ಯಾಧಾರಿತ ಬದುಕು ಸಾಗಿಸಬೇಕಾದರೆ ನಾವು ಸ್ಥಿತ ಪ್ರಜ್ಞರಾಗಿರಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂದೂರು ಬಂಟರಯಾನೆ ನಾಡವರ ಸಂಘದ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ ಯಡ್ತರೆ ಮಂಜಯ್ಯ ಶೆಟ್ಟಿ ಅಜಾತಶತ್ರು ಮತ್ತು ಆದರ್ಶ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದರು. ಅವರ ಜೀವನ ಶೈಲಿ ಇಂದಿನ ಯುವ ಜನಾಂಗಕ್ಕೆ ಮಾದರಿ. ತಾಲೂಕಿನ ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾಗಿದೆ. ಅವರ ಜಯಂತಿ ಉತ್ಸವದ ಮೂಲಕ ಪ್ರತಿವರ್ಷ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಮಾಜಿ ಶಾಸಕ ಎ.ಜಿ ಕೊಡ್ಗಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಂದೂರು ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ, ಯಡ್ತರೆ ಗ್ರಾ.ಪಂ ಅಧ್ಯಕ್ಷೆ ಮೂಕಾಂಬು ದೇವಾಡಿಗ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು. ಹರೀಶ್ ಕುಮಾರ್ ಶೆಟ್ಟಿ, ಪ್ರೋ ಎಂ. ಸುಬ್ಬಣ್ಣ ಶೆಟ್ಟಿ ಕೋಟೇಶ್ವರ, ನೇತ್ರತಜ್ಞ ಡಾ| ವೈ. ಎಸ್. ಹೆಗ್ಡೆ, ಯು. ಟಿ. ಆಳ್ವ ಮಂಗಳೂರು, ಡಾ| ಎಂ.ಲಕ್ಷ್ಮಿ ನಾರಾಯಣ ಶೆಟ್ಟಿ ಮಂಗಳೂರು, ಡಾ| ಎಂ.ಸುಧಾಕರ ಹೆಗ್ಡೆ ಗೌರವಾಧ್ಯಕ್ಷರು ಬಂದೂರು ಬಂಟರ ಸಂಘ, ನೈಲಾಡಿ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಐ.ಎಫ್.ಎಸ್ ವಿಜಯ ಕುಮಾರ್ ಶೆಟ್ಟಿಯವರಿಗೆ ಬಂಟರ ಸಂಘದ ವತಿಯಿಂದ ಸಾಧಕರ ಸಮ್ಮಾನ ನೀಡಲಾಯಿತು. ಯು.ಸೀತಾರಾಮ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಸ್ವಾಗತಿಸಿದರು. ನಿವೃತ್ತ ಅಧ್ಯಾಪಕ ದಿನಕರ ಆರ್. ಶೆಟ್ಟಿ ಹಾಗೂ ವಾಜುರಾಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ದಿವಾಕರ ಶೆಟ್ಟಿ ವಂದಿಸಿದರು.

Exit mobile version