ಬೈಂದೂರು ಚಂದ್ರಶೇಖರ ನಾವಡ.
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದ ಕುವೆಂಪುರವರ ಸಂದೇಶವನ್ನು ಅಕ್ಷರಶ: ಪಾಲಿಸಿ ಕನ್ನಡ ನಾಡು-ನುಡಿ-ಸಂಸ್ಕೃತಿಯ ಕಂಪನ್ನು ಗಲ್ಫ್ ದೇಶಗಳಲ್ಲಿ ಪಸರಿಸಿದ ಪ್ರೀತಿಯಿಂದ ‘ಬೀಜಿ’ ಎಂದು ಕರೆಯಲ್ಪಡುವ ಬಿ ಜಿ ಮೋಹನ್ ದಾಸ್ ರವರ ಅನುಪಮ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಬೈಂದೂರು ತಾಲೂಕಿನ ಬಿಜೂರಿನಲ್ಲಿ ಜನಿಸಿ ಉದ್ಯೋಗ ನಿಮಿತ್ತ ದೀರ್ಘ ಕಾಲ ತಾಯ್ನಾಡಿನಿಂದ ದೂರದ ದುಬಾಯಿಯಲ್ಲಿ ವಾಸವಾಗಿದ್ದ ಅವರು ಅಲ್ಲಿ ನೆಲೆಸಿದ್ದ ಕನ್ನಡಿಗರಲ್ಲಿ ತಾಯ್ನಾಡಿನಿಂದ ದೂರವಿರುವ ನೋವು ಕಾಡದಂತೆ ಶ್ರಮಿಸಿದರು. ಸಾಹಿತ್ಯ, ಸಿನಿಮಾ, ನಾಟಕ, ಯಕ್ಷಗಾನ, ಕ್ರೀಢೆ ಮೊದಲಾದ ಚವಟುಟಿಕೆಗಳನ್ನು ನಿರಂತರವಾಗಿ ಸಂಘಟಿಸಿದರು. ನಾಡಿನ ಹಿರಿಯ ಕಲಾವಿದರು, ಸಾಹಿತಿಗಳು ಸಾಧಕರನ್ನು ದುಬಾಯಿ ಕನ್ನಡ ಸಂಘದ ಆಶ್ರಯದಲ್ಲಿ ಬರಮಾಡಿಕೊಂಡರು. ಕೊಲ್ಲಿಯಲ್ಲಿ ನೆಲೆಸಿದ ಮಣ್ಣಿನ ಮಕ್ಕಳಲ್ಲಿ ಧರ್ಮ-ಜಾತಿ ಮೀರಿದ ಭ್ರಾತ್ರತ್ವ ಪ್ರೇಮ ಬೆಳೆಸಿ, ಬದುಕಿನ ಕಷ್ಟ-ಸುಖಗಳಲ್ಲಿ ಪರಸ್ಪರ ಸಹಭಾಗಿಗಳಾಗುವಂತೆ ಪ್ರೋತ್ಸಾಹಿಸಿ ಕುವೆಂಪುರವರ ವಿಶ್ವಮಾನವ ಕಲ್ಪನೆಯನ್ನು ಸಾಕಾರಗೊಳಿಸಲು ಶ್ರಮಿಸಿದ ಸಾಧಕರೆನಿಸಿದರು. ಹಾಗಾಗಿಯೇ ಅಬುಧಾಭಿ ಕರ್ನಾಟಕ ಸಂಘದ ಆಶ್ರಯದಲ್ಲಿ 2012ರಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ‘ಕುವೆಂಪು ವಿಶ್ವ ಮಾನವ ಪ್ರಶಸ್ತಿ’ ಸಹಜವಾಗಿಯೇ ಅವರಿಗೆ ಒಲಿದಿತ್ತು.

ಮೂರು ದಶಕಗಳ ಕನ್ನಡ ಸಂಘದ ಒಡನಾಟದಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆಯ ಹಿಡಿತವಿಲ್ಲದೆ ಕೊರಗಬಾರದೆಂದು ಕನ್ನಡ ಭಾಷಾ ತರಬೇತಿ ತರಗತಿಗಳನ್ನು ಏರ್ಪಡಿಸುವ, ವರ್ಷಕ್ಕೊಮ್ಮೆ ವಾರ್ಷಿಕೋತ್ಸವ, ದೀಪಾವಳಿ, ರಾಜ್ಯೋತ್ಸವ ಮೊದಲಾದ ವಿಶೇಷ ದಿನಾಚರಣೆಗಳನ್ನು ಸಂಘಟಿಸುವಲ್ಲಿ ಬೀಜಿ ಸದಾ ಮುಂದಿರುತ್ತಿದ್ದರು. ಮಹಿಳೆಯರಿಗೆ ಪಾಕಶಾಸ್ತ್ರ, ಕೋಮಲ ತ್ವಚೆ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸುವ ಹಾಗೂ ಅರ್ಹ-ಅಶಕ್ತ ಕಲಾವಿದರನ್ನು ಸಮ್ಮಾನಿಸುವ, ಆರ್ಥಿಕ ನೆರವು ನೀಡುವ ಅನೇಕ ಕಾರ್ಯಗಳಿಂದ ‘ಗಲ್ಫ್ ಕನ್ನಡಿಗ ಬೀಜಿ’ ಎಂದು ಕೊಲ್ಲಿ ದೇಶಗಳಲ್ಲೆಲ್ಲಾ ಜನಪ್ರಿಯರಾದರು.
ಗಲ್ಫ್ ಕನ್ನಡಿಗರಲ್ಲಿ ನಾಡಿನ ಘಟನಾಕ್ರಮಗಳ ಕುರಿತು ನಿರಂತರ ಆಸಕ್ತಿ ಹುಟ್ಟಿಸಲು 2000-2001ರಲ್ಲಿ ‘ಗಲ್ಫ್ ವಾರ್ತೆ.ಕಾಮ್’ ಎಂಬ ವೆಬ್ ಸೈಟ್ ಪ್ರಾರಂಭಿಸಿದರು. ಅದಕ್ಕೂ ಮೊದಲು ಅವರು ಕರ್ನಾಟಕ ಸಂಘದ ಅಧಿಕೃತ ವೆಬ್ ಸೈಟ್ www.karnatakasangha.com ನಿರ್ಮಿಸಿ ನಡೆಸಿಕೊಂಡು ಬಂದಿದ್ದರು. ಕೊಲ್ಲಿಯ ಎಲ್ಲಾ ಸುದ್ದಿ ವರದಿಗಳು, ಸಂತಾಪಗಳು,ಶುಭಾಶಯಗಳು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಏಕಕಾಲದಲ್ಲಿ ಹರಿದಾಡುವಂತೆ ಮಾಡಿದರು. ಆಂಗ್ಲ ಭಾಷೆಯಲ್ಲಿದ್ದ ಗಲ್ಫ್ ವಾರ್ತೆ ಡಾಟ್ ಕಾಮ್ ಕನ್ನಡದ ಯುನಿಕೋಡ್ ಬಳಕೆಗೆ ಬಂದ ನಂತರ 2008ರಲ್ಲಿ ಕನ್ನಡದಲ್ಲಿ ‘ಗಲ್ಫ್ ಕನ್ನಡಿಗ ಡಾಟ್ ಕಾಮ್’ ಆಗಿ ಪರಿವರ್ತಿತವಾಯಿತು. ‘ಗಲ್ಫ್ ಕನ್ನಡಿಗ ಡಾಟ್ ಕಾಮ್’ ಈಗ ಗಲ್ಫ್ ಕನ್ನಡಿಗರ ನೆಚ್ಚಿನ ಅಂತರ್ಜಾಲ ಸುದ್ದಿತಾಣವಾಗಿ ಪ್ರಸಿದ್ಧಿ ಹೊಂದಿದೆ. ಕುಂದಾಪ್ರ ಡಾಟ್ ಕಾಂ.
ಪ್ರಸ್ತುತ ಮಣಿಪಾಲದಲ್ಲಿ ವಿಶ್ರಾಂತ ಬದುಕು ನಡೆಸುತ್ತಿರುವ ಬೀಜಿಯವರದು ಇತರರ ಕಷ್ಟಕ್ಕೆ ಮಿಡಿಯುವ ಕರುಣಾಮಯಿ ಹೃದಯ. ಸ್ವದೇಶಕ್ಕೆ ಮರಳಿದ ನಂತರವೂ ವಿಶ್ವದಾದ್ಯಂತ ನೆಲೆಸಿರುವ ಕರಾವಳಿಯ ಕನ್ನಡಿಗರು ಹುಟ್ಟಿದೂರಿನೊಂದಿಗೆ ಬಾಂದವ್ಯ ಬೆಸೆದಿಟ್ಟುಕೊಳ್ಳುವಲ್ಲಿ ನೆರವಾಗಲು ಅವರು ಬೈಂದೂರು ಡಾಟ್ ಕಾಮ್, ದೇವಾಡಿಗ ಡಾಟ್ ಕಾಮ್, ಕೊಲ್ಲೂರು ಡಾಟ್ ಕಾಮ್ ಸುದ್ದಿ ತಾಣಗಳನ್ನು ಮುನ್ನಡೆಸುತ್ತಿದ್ದಾರೆ. ತಡವಾದರೂ ಸರಿ ಕನ್ನಡದ ಮನಸ್ಸುಗಳನ್ನು ಒಟ್ಟುಗೂಡಿಸುವ ಸ್ನೇಹ ಜೀವಿ ಬೀಜಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಅವರ ಅಸಂಖ್ಯ ಅಭಿಮಾನಿಗಳಿಗೆ ಸಂತೋಷ ತಂದಿದೆ. ಕುಂದಾಪ್ರ ಡಾಟ್ ಕಾಂ.
ಲೇಖಕರು ಮಾಜಿ ಸೈನಿಕರು ಹಾಗೂ ಹವ್ಯಾಸಿ ಬರಹಗಾರ