Kundapra.com ಕುಂದಾಪ್ರ ಡಾಟ್ ಕಾಂ

ತುಳುನಾಡ ಸಂಸ್ಕೃತಿಯೊಂದಿಗೆ ಕೋಟಿ ಚೆನ್ನಯ್ಯರ ಹೆಸರು ಚಿರಸ್ಥಾಯಿ: ವಿನಯ ಕುಮಾರ್ ಸೊರಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸತ್ಯ, ನ್ಯಾಯಕ್ಕಾಗಿ ಹೋರಾಟ ಮಾಡಿರುವ ಕೋಟಿ ಚೆನ್ನಯರನ್ನು ದೈವವಾಗಿ ತುಳುನಾಡಿನ ಸಂಸ್ಕೃತಿಯೊಂದಿಗೆ ಆರಾಧಿಸಿಕೊಂಡು ಬರಲಾಗುತ್ತಿದ್ದು, ಅವರ ತತ್ವಾದರ್ಶಗಳಿಂದ ಭಕ್ತರ ಮನದಲ್ಲಿ ನೆಲೆಯಾಗಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾರಂಭದಲ್ಲಿಯೇ ವೀರ ಪುರುಷರಾದ ಕೋಟಿ ಚೆನ್ನಯ್ಯರ ಅದ್ಭುತ ಗರಡಿ ನಿರ್ಮಾಣಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಬುಧವಾರ ಬೈಂದೂರು ನಾಕಟ್ಟೆಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಭೇಟಿ ನೀಡಿ ಮಾತನಾಡಿ ಕೋಟಿ ಚೆನ್ನಯರ ಮೂಲ ಗರಡಿಗಳಲ್ಲಿ ಕಟ್ಟಕಡೆಯದಾದರೂ ಕೂಡ ಉಳಿದೆಲ್ಲಾ ಗರಡಿಗಳನ್ನು ಮೀರಿಸುವಂತೆ ಬೈಂದೂರಿನ ಗರಡಿ ನಿರ್ಮಾಣಗೊಳ್ಳುತ್ತಿದೆ. ಇದು ಇಡಿ ಊರಿಗೆ ಮೆರಗು ನೀಡುತ್ತಿದೆ ಎಂದರು.

ಈ ಸಂದರ್ಭ ಖಂಬದಕೋಣೆ ರೈತರ ಸೇವಾ ಸಹಕಾರಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೋಹನ ಪೂಜಾರಿ, ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ಬಿ. ದೊಟ್ಟಯ್ಯ ಪೂಜಾರಿ, ಯಡ್ತರೆ ಗ್ರಾಪಂ ಉಪಾಧ್ಯಕ್ಷ ನಾಗರಾಜ ಗಾಣಿಗ, ಸದಸ್ಯ ಉಮೇಶ್, ಆನಂದ ಶೆಟ್ಟಿ, ಸ್ಥಳೀಯರಾದ ಎಸ್. ಮದನಕುಮಾರ್ ಉಪ್ಪುಂದ, ಜಗನ್ನಾಥ ಶೆಟ್ಟಿ, ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ವೆಂಕಟ ಪೂಜಾರಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಅರ್ಚಕ ಕುಟುಂಬದ ಮಂಜುನಾಥ ಮೇಲ್ಹಿತ್ಲು ಮೊದಲಾದವರು ಇದ್ದರು.

Exit mobile version