Kundapra.com ಕುಂದಾಪ್ರ ಡಾಟ್ ಕಾಂ

ಏ.26ರಂದು ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯ ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಯಲ್ಲಿನ ೨೩ ಎ ದರ್ಜೆಯ ದೇವಾಲಯಗಳಲ್ಲಿ 2020 ರ ಎಪ್ರ್ರಿಲ್ 26 ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಉಡುಪಿ ಜಿಲ್ಲೆಯ ಎ ವರ್ಗದ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಸುವ ಕುರಿತಂತೆ ವಿವಿಧ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯ ಶ್ರೀ ಮೂಕಾಂಬಿಕಾ ದೇವಾಲಯ ಕೊಲ್ಲೂರು ಬೈಂದೂರು ತಾಲೂಕು,
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯ ಚಿತ್ತೂರು ಗ್ರಾಮ ಕುಂದಾಪುರ ತಾಲೂಕು,
ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯ ಕಮಲಶಿಲೆ ಕುಂದಾಪುರ ತಾಲೂಕು,
ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಾಲಯ ಅಂಬಲಪಾಡಿ ಉಡುಪಿ ತಾಲೂಕು,
ಶ್ರೀ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಾಲಯ ಉಡುಪಿ,
ಶ್ರೀ ಹೊಸಮಾರಿಗುಡಿ ದೇವಾಲಯ ಕಾಪು,
ಶ್ರೀ ಅನಂತಪದ್ಮನಾಭ ದೇವಾಲಯ ಪೆರ್ಡೂರು ಉಡುಪಿ ತಾಲೂಕು,
ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಮಂದಾರ್ತಿ ಬ್ರಹ್ಮಾವರ ತಾಲೂಕು,
ಶ್ರೀ ಮಹಾಲಿಂಗೇಶ್ವರ ದೇವಾಲಯ ಪಡುಬಿದ್ರಿ ಕಾಪು ತಾಲೂಕು,
ಶ್ರೀ ಮಹಿಷಮರ್ದಿನಿ ದೇವಾಲಯ ನೀಲಾವರ ಬ್ರಹ್ಮಾವರ ತಾಲೂಕು,
ಶ್ರೀ ಅಮೃತೇಶ್ವರಿ ದೇವಾಲಯ ಕೋಟ ಬ್ರಹ್ಮಾವರ ತಾಲೂಕು,
ಶ್ರೀ ವೀರಭದ್ರ ದೇವಾಲಯ ಹಿರಿಯಡ್ಕ ಉಡುಪಿ ತಾಲೂಕು,
ಶ್ರೀ ಮಹಿಷಮರ್ದಿನಿ ದೇವಾಲಯ ಕಡಿಯಾಳಿ ಉಡುಪಿ ತಾಲೂಕು,
ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಮುಂಡ್ಕೂರು ಕಾರ್ಕಳ ತಾಲೂಕು,
ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನ ಕನ್ನರ್ಪಾಡಿ ಉಡುಪಿ ತಾಲೂಕು,
ಶ್ರೀ ಜನಾರ್ಧನ ದೇವಸ್ಥಾನ ಕಾಪು,
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನಂದಿಕೂರು ಕಾಪು ತಾಲೂಕು,
ಶ್ರೀ ಸುಬ್ರಮಣ್ಯ ದೇವಸ್ಥಾನ ಗುಡ್ಡೆಮ್ಮಾಡಿ ಸೇನಾಪುರ ಬೈಂದೂರು ತಾಲೂಕು,
ಶ್ರೀ ವಿನಾಯಕ ದೇವಸ್ಥಾನ ಗುಡ್ಡೆಟ್ಟು ಯಡಾಡಿ-ಮತ್ಯಾಡಿ ಕುಂದಾಪುರ ತಾಲೂಕು,
ಶ್ರೀ ಶಂಕರನಾರಾಯಣ ದೇವಸ್ಥಾನ ಶಂಕರನಾರಾಯಣ ಕುಂದಾಪುರ ತಾಲೂಕು,
ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರ ಕುಂದಾಪುರ ತಾಲೂಕು,
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪುಂದ ಬೈಂದೂರು ತಾಲೂಕು,
ಶ್ರೀ ಮಾರಿಯಮ್ಮ ದೇವಸ್ಥಾನ ಕಾರ್ಕಳ, ಈ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.

ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವವರು ದೇವಾಲಯದ ಕಚೇರಿಯಿಂದ ಅರ್ಜಿ ಪಡೆದು, ಮಾರ್ಚ್ 27 ರ ಒಳಗೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ನೊಂದಾಯಿಸಿಕೊಳ್ಳಬೇಕು. 27-03-2020 ವಧು ವರರ ವಿವರಗಳನ್ನು ನೊಂದಾಯಿಸಿಕೊಳ್ಳಲು ಕಡೆಯ ದಿನಾಂಕವಾಗಿದ್ದು, 01-04-2020 ರಂದು ನೊಂದಾಯಿಸಿಕೊಂಡ ವಧು ವರರ ವಿವರಗಳನ್ನು ದೇವಾಲಯಗಳಲ್ಲಿ ಪ್ರಕಟಪಡಿಸಲಾಗುವುದು, 06-04-2020 ವಧು ವರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, 11-04-2020 ರಂದು ಅಂತಿಮ ವಧು ವರರ ಪಟ್ಟಿಯನ್ನು ಪ್ರಕಟಿಸಲಾಗುವುದು, ಸಾಮೂಹಿಕ ವಿವಾಹದಲ್ಲಿ ಅಪ್ರಾಪ್ತ ಹಾಗೂ 2ನೇ ವಿವಾಹ ನಿಷಿದ್ಧವಾಗಿದೆ ಎಂದು ಹೇಳಿದರು.

ವಿವಾಹವಾಗುವ ದಂಪತಿಗಳಿಗೆ ಎಪಿಎಲ್, ಬಿಪಿಎಲ್ ಎಂಬ ಮಾನದಂಡ ಇಲ್ಲ, ವಿವಾಹವಾಗುವ ವರನಿಗೆ ಪೋತ್ಸಾಹಧನವಾಗಿ (ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ) ರೂ.5,000 ಮತ್ತು ವಧುವಿಗೆ (ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ) 10,000ಹಾಗೂ ವಧುವಿಗೆ ಚಿನ್ನದ ತಾಳಿ, ಚಿನ್ನದ ಗುಂಡು (ಅಂದಾಜು 8 ಗ್ರಾಂ ತೂಕ) ಗಾಗಿ 40,000ಗಳನ್ನು ನೀಡಲಾಗುವುದು, ಈ ಮೊತ್ತವನ್ನು ವಿವಾಹವಾದ ದಿನವೇ ಸಂಬಂದಪಟ್ಟ ವಧು ವರರ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಜಮೆ ಮಾಡಲಾಗುವುದು ಹಾಗೂ ವಿವಾಹಕ್ಕೆ ಆಗಮಿಸುವ ವಧು ವರರ ಬಂಧುಗಳಿಗೆ/ಸಾರ್ವಜನಿಕರಿಗೆ ಊಟೋಪಚಾರ ವ್ಯವಸ್ಥೆಯನ್ನು ಹಾಗೂ ಇತರೆ ವ್ಯವಸ್ಥೆಗೆ ತಗಲುವ ವೆಚ್ಚವನ್ನು ದೇವಾಲಯಗಳ ನಿಧಿಯಿಂದ ಭರಿಸಲಾಗುವುದು ಎಂದು ಹೇಳಿದರು.

ಕೊಲ್ಲೂರು ದೇವಸ್ಥಾನದಲ್ಲಿ ಉಡುಪಿ ಜಿಲ್ಲೆಗಿಂತ ಹೊರ ರಾಜ್ಯ (ಕೇರಳ)ದಿಂದ ಬಂದು ಮದುವೆಯಾಗುವ ಸಂಖ್ಯೆ ಹೆಚ್ಚಾಗಿದ್ದು, ಅವರ ಸಂಪ್ರದಾಯಕ್ಕೆ ತಕ್ಕಂತೆ ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಲು ಪ್ರೇರೇಪಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಸೂಚಿಸಿದರು.

ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ನಡೆಸಲು ಅಸಾಧ್ಯವಾದಲ್ಲಿ ಸರಕಾರದ ಅನುಮತಿ ಮೇರೆಗೆ ಸಮೀಪದ ದೇವಸ್ಥಾನದಲ್ಲಿ ನಡೆಸುವಂತಾಗಬೇಕು. ಹಾಗೂ ಮದುವೆ ಖರ್ಚು ಭರಿಸಲು ದೇವಾಲಯ ಮಂಡಳಿ ಅಶಕ್ತವಾಗಿದ್ದಲ್ಲಿ ಸರಕಾರದಿಂದ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಜಿಲ್ಲೆಯ ಸರಕಾರಿ ಇಲಾಖೆ, ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಫಲಕ ಹಾಗೂ ಬ್ಯಾನರ್‌ಗಳನ್ನು ಅಳವಡಿಸುವಂತೆ ಸೂಚಿಸಿದ ಅವರು, ಸರಕಾರಿ ಹಾಗೂ ದೇವಸ್ಥಾನದ ವೆಬ್‌ಸೈಟ್ ಹಾಗೂ ಸೂಚನಾ ಫಲಕಗಳಲ್ಲಿ ವಿಚಾರಗಳನ್ನು ಪ್ರಚಾರ ಪಡಿಸುವಂತೆ ತಿಳಿಸಿದರು.

ಸಾಮೂಹಿಕ ವಿವಾಹ ಏರ್ಪಡಿಸುವ ಕುರಿತಂತೆ ಸಂಬಂದಪಟ್ಟ ದೇವಾಲಯಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಮತ್ತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಪಡೆದು ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸುವಂತೆ ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಜಿಲ್ಲೆಯ ಸಾರ್ವಜನಿಕರು, ಉಡುಪಿ ಜಿಲ್ಲೆಯ ಧಾರ್ಮಿಕ ಧತ್ತಿ ಇಲಾಖೆಯ ಸಹಾಯಕ ಆಯುಕ್ತರ ಕಚೇರಿ ದೂ.ಸಂ.0820- 2575660 ನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ರಾಜ್ಯದ 110 ದೇವಾಲಯಗಳಲ್ಲಿ ವಿವಾಹ:
ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ, ಉತ್ತಮ ಆದಾಯವಿರುವ ರಾಜ್ಯದ 110 ದೇವಾಲಯಗಳಲ್ಲಿ 2020 ರ ಏಪ್ರಿಲ್ 26 ರಂದು ಸಾಮೂಹಿಕ ವಿವಾಹ ನಡೆಸಲು ದಿನಾಂಕ ನಿಗಧಿಪಡಿಸಲಾಗಿದೆ. ಅನಿವಾರ್ಯ ಕಾರಣಗಳಿಂದ ಏಪ್ರಿಲ್ 26 ರಂದು ಸಾಮೂಹಿಕ ವಿವಾಹ ನಡೆಸಲು ಸಾಧ್ಯವಾಗದ ದೇವಾಲಯಗಳಲ್ಲಿ ಮೇ 24 ರಂದು ವಿವಾಹಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಸಾಮೂಹಿಕ ವಿವಾಹದಲ್ಲಿ ಮೊದಲ ಬಾರಿಗೆ ವಿವಾಹವಾಗುವವರಿಗೆ ಮಾತ್ರ ಅವಕಾಶವಿದ್ದು, ಎರಡನೇ ಮದುವೆ ಆಗುವವರಿಗೆ ಅವಕಾಶವಿಲ್ಲ, ವಧು ವರರ ನಿಯಮಾನುಸಾರ ಪ್ರಾಪ್ತ ವಯಸ್ಕರಾಗಿದ್ದು, ಈ ಬಗ್ಗೆ ಸರ್ಕಾರದ ಅಧಿಕೃತ ದಾಖಲೆಗಳನ್ನು ನೀಡಬೇಕು. ವಿವಾಹ ನಡೆಯುವ ಸ್ಥಳದಲ್ಲೇ ವಿವಾಹ ನೊಂದಣಾಧಿಕಾರಿಗಳಿಂದ ವಿವಾಹ ನೊಂದಣಿ ನಡೆಯಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಬಾಂಡ್ ವಿತರಣೆ ಸಹ ನೀಡಲಾಗುವುದು , ರಾಜ್ಯದ ಪ್ರಮುಖ ಖಾಸಗಿ ಸಂಸ್ಥೆಗಳು ತಮ್ಮ ನಿಧಿಯಿಂದ ವಧು ವರರಿಗೆ ಉಚಿತ ಉಡುಗೊರೆ ನೀಡುವುದಾದರೆ ಅದಕ್ಕೆ ಅವಕಾಶ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಸಾಮಾಹಿಕ ವಿವಾಹ ಕಾರ್ಯಕ್ರಮದ ಬಗ್ಗೆ ಶೀಘ್ರದಲ್ಲಿಯೇ ಟೋಲ್ ಫ್ರೀ ಸಂಖ್ಯೆಯನ್ನು ನೀಡಲಿದ್ದು, ಬೆಳಗ್ಗೆ 10 ರಿಂದ 6ಗಂಟೆಯವರೆಗೆ ಸಾರ್ವಜನಿಕರು ಕರೆ ಮಾಡಿ ವಿವಾಹಕ್ಕೆ ನಿಗಧಿಪಡಿಸಿರುವ ಅರ್ಹತೆಗಳು ಮತ್ತಿತರ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಸಚಿವರು ಹೇಳಿದರು.

ಸಾಮೂಹಿಕ ವಿವಾಹ ಏರ್ಪಡಿಸುವ ಕುರಿತಂತೆ ಸಂಬಂದಪಟ್ಟ ದೇವಾಲಯಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಮತ್ತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಪಡೆದು ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸುವಂತೆ ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಭೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ಎಲ್ಲಾ ತಾಲೂಕುಗಳ ತಹಸೀಲ್ದಾರರು ಮತ್ತು ವಿವಿಧ ದೇವಾಲಯಗಳ ಆಡಳಿತ ಮೊಕ್ತೇಸರರು, ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಧಾರ್ಮಿಕ ಧತ್ತಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version