Kundapra.com ಕುಂದಾಪ್ರ ಡಾಟ್ ಕಾಂ

ದೇವಳದ ಶಾಲೆಯಿಂದ ಕುಗ್ರಾಮದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ: ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯಲ್ಲಿ ಶುಕ್ರವಾರ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಸ್ವರ್ಣರೇಖಾ ನೂತನ ರಂಗ ಮಂದಿರವನ್ನು ಶಾಸಕ ಬಿ. ಎಂ.ಸುಕುಮಾರ ಶೆಟ್ಟಿ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ ಕುಗ್ರಾಮದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುವಂತಾಗಬೇಕು ಎಂಬ ಹೆಬ್ಬಯಕೆಯಿಂದ ಅಂದಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಆಡಳಿತ ಧರ್ಮದರ್ಶಿಯಾಗಿದ್ದ ಕೀರ್ತಿಶೇಷ ಯಡ್ತರೆ ಮಂಜಯ್ಯ ಶೆಟ್ಟಿಯವರು ದೇವಳದ ವತಿಯಿಂದ ನಿರ್ಮಾಣ ಮಾಡಿದ ಈ ವಿದ್ಯಾಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಸೇರಿದಂತೆ ಆರ್ಥಿಕವಾಗಿ ಸಧೃಢವಾದ ದೇವಾಲಯಗಳು ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಮೂಲಕ ಅದೆಷ್ಟೋ ಮಕ್ಕಳಿಗೆ ಅನುಕೂಲವಾಗಿದೆ. ಗ್ರಾಮೀಣ ಭಾಗಗಳಲ್ಲಿ ದೇವಳದ ಪ್ರೌಢಶಾಲೆಯನ್ನು ತೆರೆಯುವ ಮೂಲಕ ಈ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೆಣ್ಣೊಬ್ಬಳು ಶಿಕ್ಷಿತಳಾದರೆ ಇಡೀ ಕುಟುಂಬ ಸುಶಿಕ್ಷಿತವಾಗುತ್ತದೆ ಎಂದರು.

ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೇವೆ ಸಲ್ಲಿಸಿದ, ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರಿಗೆ ಹಾಗೂ ಕಳೆದ 50 ವರ್ಷಗಳ 48 ಬ್ಯಾಚ್‌ನ ಎಸ್‌ಎಸ್‌ಎಲ್‌ಸಿ ಪ್ರತೀ ಬ್ಯಾಚಿನ ಪ್ರಥಮ ಸ್ಥಾನಿ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ತಾಪಂ ಅಧ್ಯಕ್ಷೆ ಶ್ಯಾಮಲಾ ಎಸ್. ಕುಂದರ್, ಸದಸ್ಯೆ ಗ್ರೀಷ್ಮಾ ಜಿ. ಬಿಢೆ, ಕೊಲ್ಲೂರು ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ, ಸ್ಥಾಪಕ ಮುಖ್ಯೋಪಾಧ್ಯಾಯ ಗಿಳಿಯಾರು ಮಂಜುನಾಥ ಹೆಗ್ಡೆ, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನರಸಿಂಹ ಹಳಗೇರಿ, ಕೆ. ರಮೇಶ ಗಾಣಿಗ, ವಂಡಬಳ್ಳಿ ಜಯರಾಮ ಶೆಟ್ಟಿ, ಜಯಂತಿ ವಿಜಯಕೃಷ್ಣ, ಕೆ. ವಿ. ಶ್ರೀಧರ ಅಡಿಗ, ಪ್ರಾಂಶುಪಾಲ ಅರುಣ್‌ಪ್ರಕಾಶ್ ಶೆಟ್ಟಿ. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಬಿ., ಡಾ. ಶ್ರೀಧರ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಶೇರುಗಾರ್, ವಿದ್ಯಾರ್ಥಿ ನಾಯಕ ಆದಿತ್ಯ ಕೆ. ಸಿ., ನಾಯಕಿ ದಿವ್ಯಾ ಎಂ. ವೈ. ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ನಾಗರಾಜ ಭಟ್ ಸ್ವಾಗತಿಸಿ, ಅಣ್ಣಪ್ಪ ನಾಯ್ಕ್ ವಂದಿಸಿದರು. ಉದಯ್ ನಾಯ್ಕ್ ಮತ್ತು ಸಚಿನ್‌ಕುಮಾರ್ ಶೆಟ್ಟಿ ನಿರೂಪಿಸಿದರು. ಬೆಳಿಗ್ಗೆ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಅಗ್ನಿಶಾಮಕ ಪ್ರಾತ್ಯಕ್ಷಿಕೆ ನಡೆಯಿತು. ರಾತ್ರಿ ನಾಟಕ ಮತ್ತು ಯಕ್ಷಗಾನ ನಡೆಯಿತು.

Exit mobile version