Kundapra.com ಕುಂದಾಪ್ರ ಡಾಟ್ ಕಾಂ

ಕ್ರೀಡೆಯಿಂದ ಕಷ್ಟಗಳನ್ನು ಎದುರಿಸುವ ಸಾಮರ್ಥ ವೃದ್ಧಿಸುತ್ತೆ: ರಾಜೇಶ್ ಕಾವೇರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಓರ್ವ ಕ್ರೀಡಾಪಟುವಿನ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಕೂಡ ಆತ ಅವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಿ ತನ್ನ ಗುರಿಯನ್ನು ತಲುಪುತ್ತಾನೆ. ಕ್ರೀಡಾಪಟು ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗಿ ಬದುಕಬಲ್ಲ ಎಂದು ರಾಜ್ಯ ಮಟ್ಟದ ಮಾಜಿ ವಾಲಿಬಾಲ್‌ಪಟು ರಾಜೇಶ್ ಕಾವೇರಿ ಹೇಳಿದರು.

ಅವರು ಭಾನುವಾರ ಸಂಜೆ ಹೆಮ್ಮಾಡಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಫ್ರೆಂಡ್ಸ್ ಹೆಮ್ಮಾಡಿಯ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಹೆಮ್ಮಾಡಿ ಪ್ರೀಮಿಯರ್ ಲೀಗ್-2020ರ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಇಂದಿನ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾದ ವಿಚಾರಗಳ ಬಗ್ಗೆ ಕಾಲಹರಣ ಮಾಡುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿ ಎಲ್ಲಾ ಯುವಕರನ್ನು ಕ್ರೀಡೆಯತ್ತ ಸೆಳೆಯಲು ಅವಕಾಶ ಮಾಡಿಕೊಟ್ಟ ಫ್ರೆಂಡ್ಸ್ ಹೆಮ್ಮಾಡಿಯ ವಿಭಿನ್ನ ಪ್ರಯತ್ನ ಶ್ಲಾಘನೀಯ ಎಂದರು.

ಕುಂದಾಪುರ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಹರೀಶ್ ಭಂಡಾರಿ, ಉದಯ್ ಕುಮಾರ್ ಹಟ್ಟಿಯಂಗಡಿ, ಶಿವಾನಂದ ಗಂಗೊಳ್ಳಿ, ರಾಘವೇಂದ್ರ ದೇವಾಡಿಗ ಹೊಸ್ಕಳಿ, ಶ್ರೀಕಾಂತ ಹೆಮ್ಮಾಡಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜಿ.ಪಂ ಸದಸ್ಯೆ ಶೋಭಾ ಜಿ ಪುತ್ರನ್ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಕೆ. ರಾಮ ಶೆಟ್ಟಿ, ನಾಗರಾಜ್ ಪುತ್ರನ್ ಸುಳ್ಸೆ, ಶರ್ಫುದ್ದೀನ್ ಸಂಜೀವಿನಿ, ಫ್ರೆಂಡ್ಸ್ ಹೆಮ್ಮಾಡಿಯ ಅಧ್ಯಕ್ಷ ಯು. ಸತ್ಯನಾರಾಯಣ ರಾವ್ ಉಪಸ್ಥಿತರಿದ್ದರು.

ಫ್ರೆಂಡ್ಸ್ ಹೆಮ್ಮಾಡಿಯ ಕಾರ್ಯದರ್ಶಿ ರಾಘವೇಂದ್ರ ಕುಲಾಲ್ ಸ್ವಾಗತಿಸಿದರು. ರಾಘವೇಂದ್ರ ಮಟಪಾಡಿ ವಿಜೇತರ ಪಟ್ಟಿ ವಾಚಿಸಿದರು, ಗೌರವಾಧ್ಯಕ್ಷ ಸುರೇಶ್ ಪೂಜಾರಿ ವಂದಿಸಿದರು. ವಸಂತ್ ಹೆಮ್ಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.

2020ರ ಹೆಮ್ಮಾಡಿ ಪ್ರೀಮಿಯರ್ ಲೀಗ್ ಚೊಚ್ಚಲ ಪ್ರಶಸ್ತಿ ಬಾಚಿಕೊಂಡ ಶ್ರೀರಾಮ್ ಸ್ಟ್ರೈಕರ್ಸ್ ತಂಡದ ಸದಸ್ಯರು ಬಹಳ ಹಿಂದಿನಿಂದಲೂ ಶ್ರೀರಾಮ್ ತಂಡವನ್ನು ಕಟ್ಟಿ ಬೆಳೆಸಿ ಅಪಘಾತವೊಂದರಲ್ಲಿ ಸಾವನ್ನಪ್ಪಿದ ತಂಡದ ಸ್ಥಾಪಕಾಧ್ಯಕ್ಷ ದಿ. ಸಂಪತ್ ಪೂಜಾರಿಯವರಿಗೆ ಚಾಂಪಿಯನ್ ಟ್ರೋಫಿಯನ್ನು ಅರ್ಪಿಸಿದರು.

ಚಾಂಪಿಯನ್:
ಹೆಮ್ಮಾಡಿ ಹಾಗೂ ಕಟ್‌ಬೇಲ್ತೂರು ಪಂಚಾಯತ್ ವ್ಯಾಪ್ತಿಯ 12 ತಂಡಗಳ ನಡುವೆ ಎರಡು ದಿನಗಳ ಕಾಲ ನಡೆದ ಹಣಾಹಣಿಯಲ್ಲಿ ಗುಂಡು, ಹರೀಶ್ ಭಂಡಾರಿ, ಪಾಂಡು ಮಾಲೀಕತ್ವದ ಸುರೇಶ್ ಪೂಜಾರಿ ನಾಯಕತ್ವದ ಶ್ರೀರಾಮ್ ಸ್ಟ್ರೈಕರ್ಸ್ ಫೈನಲ್‌ಗೆ ಲಗ್ಗೆ ಇಟ್ಟು ಡೈರಿ ಡ್ಯಾಶರ್ಸ್ ವಿರುದ್ದ ರೋಚಕ ಜಯ ದಾಖಲಿಸಿ, ಎಚ್‌ಪಿಎಲ್ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಡೈರಿ ಡ್ಯಾಶರ್ಸ್ ತಂಡ ರನ್ನರ್ಸ್‌ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಪ್ರಥಮ ಸ್ಥಾನ ಪಡೆದ ಶ್ರೀರಾಮ್ ಸ್ಟ್ರೈಕರ್ಸ್‌ಗೆ ೬೦,೦೦೦ ನಗದು ಹಾಗೂ ಶಾಶ್ವತ ಫಲಕ, ದ್ವಿತೀಯ ಸ್ಥಾನ ಪಡೆದ ಡೈರಿ ಡ್ಯಾಶರ್ಸ್‌ಗೆ 30,000 ನಗದು ಹಾಗೂ ಶಾಶ್ವತ ಫಲಕಗಳನ್ನು ನೀಡಿ ಗೌರವಿಸಲಾಯಿತು. ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಹಾಗೂ ಉತ್ತಮ ದಾಂಡಿಗ ಪ್ರಶಸ್ತಿ ಶ್ರೀರಾಮ್‌ನ ಪ್ರಥ್ವಿರಾಜ್, ಉತ್ತಮ ಎಸೆತಗಾರ ಪ್ರಶಸ್ತಿ ಶ್ರೀರಾಮ್‌ನ ಆಯುಶ್, ಸರಣಿಶ್ರೇಷ್ಠ ಪ್ರಶಸ್ತಿ ಡೈರಿ ಡ್ಯಾಶರ್ಸ್‌ನ ಉಮೇಶ್ ದೇವಾಡಿಗ, ಉತ್ತಮ ಗೂಟರಕ್ಷಕ ಪ್ರಶಸ್ತಿ ಡೈರಿ ಡ್ಯಾಶರ್ಸ್‌ನ ನಾಗರಾಜ್ ಆಚಾರ್ಯ ಅವರಿಗೆ ನೀಡಲಾಯಿತು. ಸಾಮಾಜಿಕ ಜಾಲತಾಣದಲ್ಲಿ ನಡೆದ ಓಟಿಂಗ್‌ನಲ್ಲಿ ಪ್ರೇಕ್ಷಕರ ನೆಚ್ಚಿನ ತಂಡವಾಗಿ ಹರೆಗೋಡು ಯೋಧಾಸ್ ಪ್ರಶಸ್ತಿ ಪಡೆದುಕೊಂಡಿತು.

Exit mobile version