Site icon Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ: ಮಾರಸ್ವಾಮಿಯಲ್ಲಿ ಆಭಾರಿ ಸೇವೆ ಸಂಪನ್ನ

ಕುಂದಾಪುರ: ಮರವಂತೆ ಮಹಾರಾಜ ಸ್ವಾಮಿ ವರಾಹ(ಮಾರಸ್ವಾಮಿ) ದೇವಸ್ಥಾನದಲ್ಲಿ ನಡೆವ ವಿಶಿಷ್ಟ ಆಭಾರಿ ಸೇವೆ ಗುರುವಾರ ಸಂಪನ್ನವಾಯಿತು.

ಕೃಷಿಕರು ಉತ್ತಮ ಮಳೆ, ಬೆಳೆಗೆ, ಮೀನುಗಾರರು ಸಮೃದ್ಧ ಮೀನುಗಾರಿಕೆ ನಡೆಯಬೇಕೆಂದು ಆಭಾರಿ ಹರಕೆ ಹೊತ್ತು ಸಾಮೂಹಿಕವಾಗಿ ಅದನ್ನು ಸಲ್ಲಿಸುವ ಪದ್ಧತಿ ಇಲ್ಲಿದೆ. ಅದರಂತೆ ನಾಡ, ಹಡವು ಮತ್ತು ಸೇನಾಪುರ ಗ್ರಾಮಗಳ ಕೃಷಿಕರು ಗುರುವಾರ ಸೇವೆ ಸಲ್ಲಿಸಿದರು. ಮೀನುಗಾರರು ಎಲ್ಲ ಸೇರಿ ಇದನ್ನು ನಡೆಸಿದರೆ, ಕೃಷಿಕರು ದೇಣಿಗೆ ಸಂಗ್ರಹಿಸಿ ಈ ಸೇವೆ ಸಲ್ಲಿಸುತ್ತಾರೆ.

ಆಭಾರಿ ಸೇವೆಯ ಅಂಗವಾಗಿ ವೇದಮೂರ್ತಿ ಹಡನ ಗುಂಡಿ ಗೋಪಾಲಕೃಷ್ಣ ಪುರಾಣಿಕರ ಅಧ್ವರ್ಯದಲ್ಲಿ ಗಂಗಾಧರ ದೇವಸ್ಥಾ ನದಲ್ಲಿ ಈಶ್ವರನಿಗೆ ರುದ್ರಾಭಿಷೇಕ ನಡೆಸಲಾಯಿತು. ವರಾಹ ದೇವಸ್ಥಾನದಲ್ಲಿ ಚಂಡಿಕಾ ಹೋಮ, ವಿಷ್ಣು ಹೋಮ, ಮಹಾಪೂಜೆ ನಡೆದ ಬಳಿಕ ಅನ್ನಸಂತರ್ಪಣೆಗೆ ಸಿದ್ಧವಾದ ಅನ್ನದ ರಾಶಿಗೆ ಪೂಜೆ ಸಂದಿತು. ಬಳಿಕ ಹನ್ನೆರಡು ಹೆಡಿಗೆ ಅನ್ನವನ್ನು ವಾದ್ಯಘೋಷದ ನಡುವೆ ದೇವಸ್ಥಾನದ ಅಂಚಿನಲ್ಲಿರುವ ಸೌಪರ್ಣಿಕಾ ನದಿಗೆ ಒಯ್ದು ಬ್ರಾಹ್ಮಣರ ಮಂತ್ರೋಚ್ಛಾರಣೆ ಮತ್ತು ಭಕ್ತರ ಘೋಷದ ನಡುವೆ ನೀರಿಗೆ ಸುರಿಯಲಾಯಿತು. ಇಲ್ಲಿ ಅನಾದಿಕಾಲದಿಂದ ನೆಗಳ (ಮೊಸಳೆ) ನೆಲಸಿದೆ ಎಂಬ ನಂಬಿಕೆ ಇರುವುದರಿಂದ ಅನ್ನವನ್ನು ಅದಕ್ಕೆ ಸಮರ್ಪಿಸಲಾಗುತ್ತದೆ.

ನಂತರ ಮಹಾ ಅನ್ನಸಂತರ್ಪಣೆ ನಡೆಯಿತು. ಆಭಾರಿ ಸೇವೆಯಂದು ಎಷ್ಟೇ ಜನರು ಅನ್ನಪ್ರಸಾದ ಸ್ವೀಕರಿಸಲು ಬಂದರೂ ಅವರಿಗೆ ಊಟ ಬಡಿಸಲಾಗುತ್ತದೆ. ಅದರಂತೆ ಗುರುವಾರ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ದೇವಳ ಆಡಳಿತ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಬಾರ್, ಸದಸ್ಯರು, ಅರ್ಚಕರು ಮತ್ತು ಉಪಾದಿವಂತರು ಹಾಗೂ ಆಭಾರಿ ಸಮಿತಿ ಅಧ್ಯಕ್ಷ ಪಡುಕೋಣೆ ನರಸಿಂಹ ಪೂಜಾರಿ ಮತ್ತು ಸದಸ್ಯರು ಎಲ್ಲ ವಿಧಿಗಳು ಸಾಂಗವಾಗಿ ನಡೆಯುವಂತೆ ನೋಡಿಕೊಂಡರು.

 

Exit mobile version