Kundapra.com ಕುಂದಾಪ್ರ ಡಾಟ್ ಕಾಂ

ಜ.25ರಂದು ಕೋಟೇಶ್ವರದಲ್ಲಿ ಟ್ರಿಪಲ್ ತಲಾಕ್ ಸಿನೆಮಾ ಪ್ರದರ್ಶನ ಮತ್ತು ಸಂವಾದ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಲಾಕ್ ಕುರಿತಾಗಿ ಸಾರ್ವಜನಿಕ ವಲಯದಲ್ಲಿರುವ ಅಭಿಪ್ರಾಯ, ಕುರಾನ್‌ನಲ್ಲಿ ತಿಳಿಸಲಾಗಿರುವ ಅಂಶ  ಹಾಗೂ ಇತ್ತಿಚಿಗೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿನ ಸುತ್ತ ಹೆಣೆಯಲಾಗಿರುವ ಕಥಾಹಂದರ ‘ಟ್ರಿಪಲ್ ತಲಾಕ್’ ಸಿನೆಮಾದ ಪ್ರಿಮೀಯರ್ ಶೋ ಜ.25ರ ಶನಿವಾರ ಸಂಜೆ 5:45ಕ್ಕೆ ಕೋಟೇಶ್ವರದ ಯುವ ಮೆರೀಡಿಯನ್‌ನಲ್ಲಿ ಜರುಗಲಿದೆ.

ಈ ಬಗ್ಗೆ ಟ್ರಿಪಲ್ ತಲಾಕ್ ಸಿನೆಮಾದ ನಿರ್ದೇಶಕ ಯಾಕುಬ್ ಖಾದರ್ ಗುಲ್ವಾಡಿ ಕುಂದಾಪುರದಲ್ಲಿ ಜರುಗಿದ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿ, ಬ್ಯಾರಿ ಹಾಗೂ ಕನ್ನಡ ಭಾಷೆಯನ್ನು ಒಳಗೊಂಡು ನಿರ್ಮಾಣಗೊಂಡಿರುವ ಸಿನೆಮಾವನ್ನು ಕುಂದಾಪುರದ ಪರಿಸರದಲ್ಲಿಯೇ ಚಿತ್ರೀಕರಿಸಲಾಗಿದ್ದು, ಹಲವು ಸ್ಥಳೀಯ ಪ್ರತಿಭಾನ್ವಿತರು ಹಾಗೂ ಕುಂದಾಪುರದ ಗಣ್ಯರುಗಳು ಚಿತ್ರದಲ್ಲಿ ನಟಿಸಿದ್ದಾರೆ. ಒಂದೂವರೆ ಗಂಟೆಗಳ ಅವಧಿಯ ಸಿನೆಮಾ ಇದಾಗಿದೆ ಎಂದರು.

ಮುಂದವರಿದು ಮಾತನಾಡಿ, ಸಿನೆಮಾ ಎಂಬುದು ನನ್ನ ಕನಸಾಗಿತ್ತು. ಆ ಕಾರಣಕ್ಕಾಗಿ ರಿಸರ್ವೇಶನ್ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದೆ. ಅದು ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟಿತು. ರಿಸರ್ವೇಶನ್ ಹಾಗೂ ಹಿಂದಿನ ಎಲ್ಲಾ ಚಿತ್ರಗಳ ಅನುಭವವನ್ನು ಇರಿಸಿಕೊಂಡು ಟ್ರಿಪಲ್ ತಲಾಕ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದೇನೆ. ಹಲವರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಯಾಕೂಬ್ ಗುಲ್ವಾಡಿ ಬದುಕನ್ನು ಪ್ರೀತಿಸುವ, ಸಮಾಜವನ್ನು ಪ್ರೀತಿಸುವ ಈ ಪರಿಸರದ ಸಾಂಸ್ಕೃತಿಕ ಪ್ರಜ್ಞೆ. ಅವರು ರಿಸರ್ವೇಶನ್ ಸಿನೆಮಾ ನಿರ್ಮಾಣ ಮಾಡಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡವರು. ಈಗ ಹೊಸ ಸಿನೆಮಾವನ್ನು ನಿರ್ದೇಶಿಸಿದ್ದು, ಅದು ಈಗಾಗಲೇ ಲಂಡನ್‌ನ ಬ್ರಿಸ್ಟಲ್ ನಗರದಲ್ಲಿ ತೆರೆಕಂಡಿದ್ದು, ಕರ್ನಾಟಕದಲ್ಲಿ ಮೊದಲ ಭಾರಿಗೆ ಪ್ರೀಮಿಯರ್ ಶೋ ಆಯೋಜಿಸಲಾಗಿದೆ ಎಂದರು.

ಮಾಧ್ಯಮಗೋಷ್ಠಿಯಲ್ಲಿ ಸಿನೆಮಾದ ನಿರ್ಮಾಕರಾದ ನಾರಾಯಣ ಪಿ. ಸುವರ್ಣ ಹಾಗೂ ಪ್ರಭಾ ಎನ್. ಸುವರ್ಣ ಉಪಸ್ಥಿತರಿದ್ದರು.

 

Exit mobile version