ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತಾಲೂಕು ಪಂಚಾಯಿತಿ ಡಾ ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಪಂಚಾಯತ್ 19ನೇ ಸಾಮಾನ್ಯ ಸಭೆ ಆಡಳಿತ ಪಕ್ಷದ ಸದಸ್ಯರು ಹಾಗೂ ಅಧ್ಯಕ್ಷರ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ಗಲಾಟೆ-ಗದ್ದಲದಲ್ಲೇ ಮುಗಿಯಿತು.
ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳ ಅಸಮರ್ಪಕ ಉತ್ತರ, ಕುಂದಾಪುರ ತಾಲೂಕು ಆಸ್ಪತ್ರೆ ಆರೋಗ್ಯಾಧಿಕಾರಿ ವಿರುದ್ಧದ ನಿರ್ಣಯ ಜಿಪಂಗೆ ಕಳುಹಿಸದ್ದಕ್ಕೆ ಅಸಮಾಧಾನ, ತಾಪಂ ಸಾಮಾನ್ಯ ಸಭೆಯ ಕಾರ್ಯಸೂಚಿ ವಿಳಂಬಕ್ಕೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಮೊದಲ್ಗೊಂಡು ಎಲ್ಲವೂ ಅಪೂರ್ಣ ಚರ್ಚೆಯೊಂದಿಗೆ ಕೊನೆಗೊಂಡಿತು.

ತಾಲೂಕು ಪಂಚಾಯತಿಯನ್ನು ಶಾಸಕರಿಗೆ ಅಡವಿಟ್ಟಿದ್ದೀರಾ?
ತಾಪಂ ಅಧ್ಯಕ್ಷೆ ಶ್ಯಾಮಲಾಕುಂದರ್, ಸರ್ಕಾರಿ ಆಸ್ಪತ್ರೆಯ ಬಗ್ಗೆ ನಿರ್ಣಯವನ್ನು ಜಿಪಂ ಹಾಗೂ ಆರೋಗ್ಯ ಸಚಿವರಿಗೆ ಕಳುಹಿಸುವ ಬಗ್ಗೆ ಶಾಸಕರ ಅಭಿಪ್ರಾಯ ಕೇಳಲಾಗಿತ್ತು. ಅವರು ಮೌಖಿಕವಾಗಿ ನಿರ್ಣಯ ಕಳುಹಿಸುವುದು ಬೇಡ ಎಂದಿದ್ದರಿಂದ ಕಳುಹಿಸಿರಲಿಲ್ಲ ಎಂದರು. ಇದರಿಂದ ಆಡಳಿತ ಪಕ್ಷದ ಸದಸ್ಯರೇ ಅಧ್ಯಕ್ಷರ ವಿರುದ್ಧ ತಿರುಗಿಬಿದ್ದರು. ಎಲ್ಲವನ್ನು ಶಾಸಕರನ್ನು ಕೇಳಿಯೇ ನಿರ್ಣಯ ತೆಗೆದುಕೊಳ್ಳುವುದಾದರೇ ತಾಲೂಕು ಪಂಚಾಯತ್ ಸಭೆ ನಡೆಸುವ ಉದ್ದೇಶವೇನಿದೆ. ತಾಪಂ ಅನ್ನು ಶಾಸಕರಿಗೆ ಅಡವಿಟ್ಟಿದ್ದೀರಾ. ಮಂತ್ರಿಗಳಗೆ, ಜಿಪಂ ನಿರ್ಣಯ ಕಳುಹಿಸಲು ಶಾಸಕರನ್ನು ಕೇಳುವುದಾದರೆ, ತಾಪಂ ಘನತೆ ಉಳಿಯುತ್ತಾ ಎಂದು ಆಕ್ರೋಶ ಹೊರಹಾಕಿದರು. ಅಲ್ಲದೇ ವೈದ್ಯಾಧಿಕಾರಿ ಹೆಚ್ಚುವರಿಯಾಗಿ ಪಡೆದ ಹಣ ಹಿಂತಿರುಗಿಸಬೇಕು ಹಾಗೂ ಅವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಹೆಂಗವಳ್ಳಿ ಗ್ರಾಪಂ ಅಧ್ಯಕ್ಷೆಗೆ ಅವಮಾನ:
ಹೆಂಗವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಜ್ಯೋತಿ ನಾಯ್ಕ್ ಮಾತನಾಡಿ ತಾಲೂಕು ಪಂಚಾಯತ್ ಕಾಮಗಾರಿ ಬಗ್ಗೆ ಗ್ರಾಮ ಪಂಚಾಯತಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಮಾಹಿತಿ ನೀಡದಿರುವುದರಿಂದv ಪಂ ಮೀಸಲಿಟ್ಟP ಮಗಾರಿಗೆ ಗ್ರಾಮ ಪಂಚಾಯತಿ ಕೂಡ ಅನುದಾನ ಮೀಸಲಿರಿಸಬೇಕಾದ ಸಂದರ್ಭ ಎದುರಾಗಿದೆ. ಗ್ರಾಪಂ ಮಟ್ಟದಲ್ಲಿ ನಡೆಸುವ ಕಾಮಗಾರಿಗಳ ಬಗ್ಗೆ ತಾಪಂ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯರು ಅವರನ್ನು ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಲ್ಲದೇ, ಅವರ ಪ್ರಶ್ನೆಗೂ ತಾಪಂ ಅಧ್ಯಕ್ಷರು ಸಮರ್ಪಕ ಉತ್ತರ ನೀಡದಿದ್ದರಿಂದ ಅವರು ಸಭಾತ್ಯಾಗಕ್ಕೆ ಮುಂದಾದರು.
ಈ ಸಂದರ್ಭ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿ ನಡೆಯಿತು. ಅಷ್ಟರೊಳಗೆ ಜ್ಯೋತಿ ನಾಯ್ಕ್ತಮ್ಮ ಆಸನ ಬಿಟ್ಟು ಹೊರ ನಡೆದಿದ್ದರು. ಆಗ ಅಧ್ಯಕ್ಷರು ಹಾಗೂ ಅಡಳಿತ ಪಕ್ಷದ ಸದಸ್ಯರು ಜ್ಯೋತಿ ಅವರ ಮನವೊಲಿಸಿ ಮತ್ತೆ ಪ್ರಶ್ನೆ ಕೇಳಲು ಅವಕಾಶ ನೀಡುವ ಭರವಸೆ ನೀಡಿದರು. ಅ ಬಳಿಕ ಜ್ಯೋತಿ ಅವರು ಮತ್ತೆ ಆಸೀನರಾದರು.
ಮುಗಿಯದ ವೈದ್ಯಾಧಿಕಾರಿ ವಿರುದ್ಧದ ಸಮರ:
ತಾಲೂಕು ಆಸ್ಪತ್ರೆ ಆರೋಗ್ಯ ವೈದ್ಯಾಧಿಕಾರಿ ವಿರುದ್ಧ ಹಲವಾರು ಗಂಭೀರ ಆರೋಪಗಳಿವೆ. ಅವರಿಗೆ ಕಣ್ಣು ಕಾಣಿಸುವುದಿಲ್ಲ ಎಂಬ ಕಾರಣ ಮುಂದಿಟ್ಟು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೇ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆ ಆವರಣದಲ್ಲಿನ ದೇವಸ್ಥಾನದಲ್ಲಿ ನಡೆದ ಅವ್ಯಹಾರಗಳ ಬಗ್ಗೆಯೂ ಹಿಂದಿನ ಸಭೆಗಳಲ್ಲಿ ಚರ್ಚೆ ನಡೆದಿತ್ತು. ಉತ್ತರ ನೀಡಲು ಡಿಎಚ್ಓ ಅವರನ್ನು ಕರೆಸಬೇಕೆಂದು ನಿರ್ಣಯ ಮಾಡಲಾಗಿತ್ತು. ಆದರೆ ಈ ಬಗ್ಗೆ ಅವರಿಗೆ ನೋಟೀಸು ಮಾಡದೇ ಸಭೆಯ ದಿಕ್ಕು ತಪ್ಪಿಸಲಾಗುತ್ತಿದೆ. ಆರೋಪಿತರಿಂದಲೇ ಆರೋಪಗಳ ಬಗ್ಗೆ ಸ್ಪಷ್ಟೀಕರಣ ಕೇಳಿದ್ದು ಸಮಂಜಸವಲ್ಲ. ತಾಪಂ ನಿರ್ಣಯವನ್ನು ಸರಕಾರಕ್ಕೆ ಏಕೆ ಕಳುಹಿಸಿಲ್ಲ ಎಂದು ಸದಸ್ಯರಾದ ಪ್ರವೀಣಕುಮಾರ್ ಶೆಟ್ಟಿ ಪ್ರಶ್ನಿಸಿದರು. ಇದಕ್ಕೆ ಸದಸ್ಯರಾದ ಮಹೇಂದ್ರ ಪೂಜಾರಿ, ಕರಣ ಪೂಜಾರಿ ಧ್ವನಿಗೂಡಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ತಹಶೀಲ್ದಾರರ ಸವಾಲು:
ಕಂದಾಯ ಇಲಾಖೆಗೆ ಸಂಬಂಧಿಸಿದ ವಿಷಯಗಳ ಚರ್ಚೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ತಹಶೀಲ್ದಾರರ ನಡುವೆ ನಡೆದ ವಾಗ್ವಾದದಲ್ಲಿ ತಹಶೀಲ್ದಾರರು ಕ್ಷಮಾಪಣೆ ಕೇಳುವಂತೆ ಅಧ್ಯಕ್ಷರು ಸೂಚಿಸಿದರು. ಅದರೆ ತಹಶೀಲ್ದಾರ ತಿಪ್ಪೆಸ್ವಾಮಿ ಅಧ್ಯಕ್ಷರ ಸೂಚನೆ ತಿರಸ್ಕರಿಸಿ ನಿರ್ಣಯ ಕೈಗೊಂಡು ಕ್ರಮಕೈಗೊಳ್ಳಿ. ಅದನ್ನು ಎದುರಿಸಲು ನಾನು ಸದಾ ಸಿದ್ಧ ಎಂದು ಸವಾಲೆಸೆದರು.
ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಬಿ.ಪೈ, ಬೈಂದೂರು ಇಓ ಭಾರತಿ, ಕುಂದಾಪುರ ಇಓ ಕೇಶವ ಶೆಟ್ಟಿಗಾರ್ ಇದ್ದರು.