Site icon Kundapra.com ಕುಂದಾಪ್ರ ಡಾಟ್ ಕಾಂ

ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಸಾಲ ಯೋಜನೆ-ಅರ್ಜಿ ಆಹ್ವಾನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2019-20 ನೇ ಸಾಲಿನಲ್ಲಿ ಸಾಲ ಸೌಲಭ್ಯ ಪಡೆಯಲು ಇಚ್ಛಿಸುವವರು ಆನ್‌ಲೈನ್ ಮುಖಾಂತರ ಅಗತ್ಯ ದಾಖಲೆಗಳೊಂದಿಗೆ www.kacdc.karnataka.gov.in ನಲ್ಲಿ ಮಾರ್ಚ್ 12 ರ ಒಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಮಾತ್ರ ಸ್ವೀಕರಿಸಲಾಗುವುದು.

ನಿಗಮದ ಯೋಜನೆಗಳಿಗೆ ಅವಶ್ಯವಿರುವ ಸಾಮಾನ್ಯ ಅರ್ಹತೆಗಳು: ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿರಬೇಕು, ನಮೂನೆ-ಜಿ ಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು. ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರಬೇಕು.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು: ಈ ಯೋಜನೆಯಲ್ಲಿ ಸಣ್ಣ ವ್ಯಾಪಾರ, ಸ್ವಯಂ ಉದ್ಯೋಗ ಇತ್ಯಾದಿ ವ್ಯಾಪಾರ ಚಟುವಟಿಕೆಗಳಿಗೆ ಸಾಲ ನೀಡಲಾಗುವುದು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ 3 ಲಕ್ಷ ರೂ.ಗಳ ಮಿತಿಯ ಒಳಗಿರಬೇಕು. ಅರ್ಜಿದಾರರು 18 ವರ್ಷ ಮೇಲ್ಪಟ್ಟು 45 ವರ್ಷದ ಒಳಗಿನವರಾಗಿರಬೇಕು.

ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು: ಈ ಯೋಜನೆಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಇತ್ಯಾದಿ ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಸಿ.ಇ.ಟಿ ಮೂಲಕ ಆಯ್ಕೆಯಾಗಿ ಮತ್ತು ವೃತ್ತಿಪರ ಪಿ.ಹೆಚ್.ಡಿ ಕೋರ್ಸ್‌ನಲ್ಲಿ ವ್ಯಾಸಾಂಗ ಮಾಡುವವರಿಗೆ ಅರಿವು ಶೈಕ್ಷಣಿಕ ಸಾಲ ನೀಡಲಾಗುವುದು. ಈ ಯೋಜನೆಗೆ ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ 6 ಲಕ್ಷ ರೂ.ಗಳ ಮಿತಿಯೊಳಗಿರಬೇಕು. ಅರ್ಜಿದಾರರು 18 ವರ್ಷ ಮೇಲ್ಪಟ್ಟು ೩೫ ವರ್ಷದ ಒಳಗಿನವರಾಗಿರಬೇಕು. ಪ್ರಾಂಶುಪಾಲರಿಂದ ಧೃಢೀಕರಿಸಿದ ಪ್ರಸ್ತುತ ವರ್ಷದ ವ್ಯಾಸಾಂಗ ಪ್ರಮಾಣ ಪತ್ರ ಮತ್ತು ನಿಗಧಿತ ಶುಲ್ಕ ನಮೂನೆ ಪತ್ರ ಹೊಂದಿರಬೇಕು.

ಮಹಿಳೆಯರಿಗೆ ಶೇ. 33 ರಷ್ಟು ಮತ್ತು ವಿಶೇಷ ಚೇತನರಿಗೆ ಶೇ. 5 ರಷ್ಟು ಮೀಸಲಾತಿ ಇರುತ್ತದೆ. ಹೆಚ್ಚಿನ ವಿವರಗಳಿಗೆ ನಿಗಮದ ಸಹಾಯವಾಣಿ : 9448451111, ಇ-ಮೇಲ್:  support.kacdc@karnataka.gov.in, ಯೋಜನೆಗಳ ಮಾರ್ಗಸೂಚಿಗಳು ಹಾಗೂ ಸಲ್ಲಿಸಬೇಕಾದ ದಾಖಲೆಗಳ ವಿವರಗಳನ್ನು www.kacdc.karnataka.gov.in ನಲ್ಲಿ ತಿಳಿಯಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರ ಪ್ರಕಟನೆ ತಿಳಿಸಿದೆ.

Exit mobile version