Kundapra.com ಕುಂದಾಪ್ರ ಡಾಟ್ ಕಾಂ

ಮಾಧ್ಯಮಗಳಲ್ಲಿ ಪತ್ರಕರ್ತರಾಗಿ ದುಡಿಯಬೇಕೇ ಹೊರತು ಕಾರ್ಯಕರ್ತರಾಗಲ್ಲ: ಜಯಪ್ರಕಾಶ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡಿಬಿದಿರೆ: ಮಾಧ್ಯಮಗಳು ದೇಶಕ್ಕಾಗಿ ಕಾರ್ಯ ನಿರ್ವಹಿಸಬೇಕು ಹೊರತು ಪಕ್ಷ ಮತ್ತು ಸಿದ್ಧಾಂತಗಳಿಗಲ್ಲ ಎಂದು ಸುವರ್ಣ ನ್ಯೂಸ್ ಸುದ್ದಿ ವಾಹಿನಿಯ ಪ್ರಚಲಿತ ವಿದ್ಯಮಾನಗಳ ಸಂಪಾದಕ ಜಯಪ್ರಕಾಶ್ ಶೆಟ್ಟಿ ಹೇಳಿದರು.

ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಭಾಗ ಮತ್ತು ಪದವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ‘ಮಾಧ್ಯಮ ಮತ್ತು ಹವಮಾನಕ್ರಮ’ ಎಂಬ ವಿಚಾರದ ಕುರಿತು ನಡೆದ ಅಂತರಾಷ್ಟ್ರೀಯ ಸಮ್ಮೇಳನ ಮತ್ತು ‘ಮೀಡಿಯಾ ಬಝ್- 2020’ ಮಾಧ್ಯಮೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಸಕಾರಾತ್ಮಕವಾಗಿ ಸಮಾಜದ ತೊಡಕುಗಳನ್ನು ಹೋಗಲಾಡಿಸಲು ಮಾಧ್ಯಮವನ್ನು ಅಸ್ತ್ರವಾಗಿ ಬಳಸಬೇಕು. ಮಾಧ್ಯಮಗಳಿಗೆ ಯುವಕರು ಪತ್ರಕರ್ತರಾಗಿ ಬರಬೇಕು ಹೊರತಾಗಿ ಕಾರ್ಯಕರ್ತರಾಗಿ ಅಲ್ಲ. ಪತ್ರಕರ್ತರು ಸಮಾಜದ ಬಗೆಗಿನ ಕಳಕಳಿಯನ್ನು ಹೊಂದಿರಬೇಕು. ಆಗ ಮಾಧ್ಯಮದ ಮೂಲಕ ಸಮಾಜವನ್ನು ಪರಿವರ್ತಿಸಬಹುದು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರಿನ ಆಶಾ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾ ಜ್ಯೋತಿ ರೈ, ಮಾಧ್ಯಮಗಳು ಸಮಾಜವನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಉನ್ನತೀಕರಿಸುವ ಕಾರ್ಯವನ್ನು ಮಾಡಬೇಕು. ಪರಿಸರ ಸಂಬಂಧಿ ಕಾರ್ಯಗಳ ಕುರಿತಾದ ಅರಿವನ್ನು ಮೂಡಿಸುವ ಕಾರ್ಯಗಳನ್ನು ಮಾಡಬೇಕು ಆಗ ಮಾತ್ರ ಪರಿಸರದಕುರಿತಾದ ಕಾಳಜಿಯನ್ನು ಜನರ ಮನಸ್ಸಿನಲ್ಲಿ ಮೂಡಿಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಯುಜಿಸಿಯ ಎನ್‌ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಳ್ವಾಸ್ ಸ್ನಾತಕೋತ್ತರ್ರ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿ ನಿವೇದಿತಾ ಭಾಗ್ಯನಾಥನ್ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದವನ್ನು ಎನ್ವಿಗ್ರೀನ್ ಬಯೊಟೆಕ್ ಪ್ರೈವೆಟ್ ಲಿಮಿಟೆಡ್ ಮತ್ತು ಯುಪಿಸಿಎಲ್ ಅದಾನಿ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರಾಗಿದ್ದು, ದಿ ಹಿಂದು ಮಾಧ್ಯಮ ಪ್ರಾಯೋಜಕತ್ವವನ್ನು ವಹಿಸಿತ್ತು.

ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ ಪೆಜತ್ತಾಯ, ಪದವಿ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆರೇಷ್ಮಾಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಆಳ್ವಾಸ್ ಮೀಡಿಯಾ ಬಝ್ ೨೦೨೦ನ ಸಮಗ್ರ ಪ್ರಶಸ್ತಿಯನ್ನು ಕಟೀಲ್‌ಅಶೋಕ್ ಪೈ ಮೆಮೋರಿಯಲ್‌ಕಾಲೇಜು ಪಡೆದುಕೊಂಡಿದ್ದು, ಮಂಗಳೂರಿನ ಶ್ರೀನಿವಾಸ್‌ವಿಶ್ವವಿದ್ಯಾಲಯರನ್ನರ್ ಆಗಿ ಹೊರಹೊಮ್ಮಿತು.

Exit mobile version