Kundapra.com ಕುಂದಾಪ್ರ ಡಾಟ್ ಕಾಂ

ಸಿಎಎ ಬಗ್ಗೆ ರಾಜಕೀಯ ಕಾರಣಕ್ಕಾಗಿ ತಪ್ಪು ಸಂದೇಶ ರವಾನೆ: ವೃಷಾಂಕ್ ಭಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಸತ್ತು ಈಚೆಗೆ ಸ್ವೀಕರಿಸಿದ ಪೌರತ್ವ ತಿದ್ದುಪಡಿ ಕಾಯಿದೆಯ ಕುರಿತು ದೇಶದ ನಿರ್ದಿಷ್ಟ ವರ್ಗದ ಹಿತಾಸಕ್ತಿಯ ರಕ್ಷಣೆಗಾಗಿ ಮತ್ತು ರಾಜಕೀಯ ಕಾರಣಗಳಿಗಾಗಿ ಜನರಲ್ಲಿ ತಪ್ಪು ಕಲ್ಪನೆಯನ್ನು ಬಿತ್ತಲಾಗುತ್ತಿದೆ. ಜನರು ಅದರ ಕುರಿತಾದ ಸತ್ಯವನ್ನು ತಿಳಿದುಕೊಳ್ಳಬೇಕು ಮತ್ತು ಅಂತಹ ಹುನ್ನಾರದ ವಿರುದ್ಧ ಜಾಗೃತರಾಗಬೇಕು ಎಂದು ವಿಕ್ರಮ ಪತ್ರಿಕೆಯ ಸಂಪಾದಕ ವೃಷಾಂಕ್ ಭಟ್ ಹೇಳಿದರು.

ಹಿಂದು ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ನಾವುಂದದಲ್ಲಿ ನಡೆದ ಸಿಎಎ ಮತ್ತು ಎನ್‌ಆರ್‌ಸಿ ಸಮರ್ಥನಾ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಪಾಕಿಸ್ತಾನ, ಬಾಂಗ್ಲಾ, ಅಪಘಾನಿಸ್ತಾನದಲ್ಲಿ ಧಾರ್ಮಿಕ ಕಾರಣಗಳಿಗಾಗಿ ದೌರ್ಜನ್ಯಕ್ಕೊಳಗಾಗಿ 2014ರ ಡಿಸೆಂಬರ್ 21ರ ಮೊದಲು ಭಾರತಕ್ಕೆ ಬಂದಿರುವ ಮುಸ್ಲಿಮೇತರ 6 ಧರ್ಮಗಳ ಅಲ್ಪಸಂಖ್ಯಾತರಿಗೆ ದೇಶದ ಪೌರತ್ವ ನೀಡಲು ಅವಕಾಶ ಕಲ್ಪಿಸುವ ಕಾಯಿದೆ ಇದಾಗಿದೆ. ಅಕ್ರಮವಾಗಿ ಭಾರತಕ್ಕೆ ಬಂದಿರುವ ಅಂತಹ ವಲಸಿಗರಿಗೆ ಮಾತ್ರ ಇದು ಅನ್ವಯವಾಗುವುದೇ ಹೊರತು ಯಾವುದೇ ಕಾರಣಕ್ಕೂ ಭಾರತೀಯ ಪ್ರಜೆಗಳಿಗೆ ಇದು ಅನ್ವಯವಾಗದು ಎಂದು ಅವರು ಹೇಳಿದರು.

ಆ ದೇಶಗಳಲ್ಲಿ ಇಸ್ಲಾಂ ವಿಸ್ತರಣೆಯ ಕಾರಣಕ್ಕಾಗಿ ಅಲ್ಪಸಂಖ್ಯಾತರ ಮೇಲೆ ಅಮಾನುಷ ಕ್ರೌರ್ಯ ನಡೆದಿದೆ. ಅಲ್ಲಿ ನಡೆದ ಬಲಾತ್ಕಾರದ ಮತಾಂತರ, ಕೊಲೆ, ಅತ್ಯಾಚಾರದ ಕಾರಣದಿಂದ ಅವರೆಲ್ಲ ಭಾರತದ ಆಶ್ರಯ ಬಯಸಿ ಬಂದವರು. ಮುಸ್ಲಿಂ ಬಹುಸಂಖ್ಯಾತರಿದ್ದಲ್ಲಿ ಅನ್ಯ ಧರ್ಮೀಯರಿಗೆ ನೆಲೆ ಇರದು. ಹಾಗೆ ಕ್ರೌರ್ಯಕ್ಕೆ ತುತ್ತಾಗಿಯೂ ಬದುಕುಳಿದು ಭಾರಕ್ಕೆ ಬಂದವರ ರಕ್ಷಣೆ ಪ್ರಸಕ್ತ ತಿದ್ದುಪಡಿಯ ಉದ್ದೇಶ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.

ಭಾರತ ಪೌರತ್ವ ಕಾಯ್ದೆ 1955ರಿಂದಲೂ ಅಸ್ತಿತ್ವದಲ್ಲಿದೆ. ದೇಶದಲ್ಲಿ ಯಾರಿದ್ದಾರೆ ಎನ್ನುವುದರ ದಾಖಲೆಯೇ ಇಲ್ಲ. ಹಿನ್ನೆಲೆಯಲ್ಲಿ ಅಕ್ರಮ ವಲಸಿಗರನ್ನು ಹೊರದಬ್ಬಲು ಕ್ರಮ ಕೈಗೊಳ್ಳಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅದಕ್ಕಾಗಿ ಈ ತಿದ್ದುಪಡಿ ತರಲಾಗಿದೆ. ಸಂವಿಧಾನದ ಪಿತೃ ಡಾ. ಬಿ. ಆರ್. ಅಂಬೇಡ್ಕರ್ ತಮ್ಮ ಒಂದು ಪುಸ್ತಕದಲ್ಲಿ ಹಿಂದು ಮತ್ತು ಮುಸ್ಲಿಮರು ಪ್ರತ್ಯೇಕ ದೇಶಗಳಲ್ಲಿ ನೆಲೆಸಬೇಕು ಎಂದು ಪ್ರತಿಪಾದಿಸಿದ್ದರು. ಈಗ ಕಾಯ್ದೆಯನ್ನು ವಿರೋಧಿಸುವವರು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕೊಲೆಗಡುಕರು ಎಂದು ಅವರು ಕಾಯ್ದೆಯ ವಿರೋಧಿಗಳ ವಿರುದ್ಧ ಹರಿಹಾಯ್ದರು.

ಭಾರತದಲ್ಲಿ ಮುಸಲ್ಮಾನರು ಎಲ್ಲ ನಾಗರಿಕರಂತೆಯೇ ಜೀವಿಸುತ್ತಿದ್ದಾರೆ. ಅವರೆಲ್ಲ ನಮ್ಮ ರಕ್ತಸಂಬಂಧಿಗಳು. ಡಿಎನ್‌ಎ ಪರೀಕ್ಷೆ ಮಾಡಿದರೆ ಉಭಯರ ನಡುವೆ ವ್ಯತ್ಯಾಸ ಕಾಣದು. ರಾಜಕೀಯ ಕಾರಣಕ್ಕಾಗಿ ಅವರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ಕೋಟ್ಯಾಂತರ ಅಕ್ರಮ ವಲಸಿಗರಿಗೆ ದೇಶದ ಪೌರತ್ವ ಕೊಡಿಸಿ ಚುನಾವಣೆಗಳಲ್ಲಿ ಅವರ ಮತ ಪಡೆಯಬಹುದೆಂದ ದುರಾಲೋಚನೆ ಹೊಂದಿದ್ದಾರೆ ಎಂದು ಭಟ್ ಹೇಳಿದರು.

ಮರವಂತೆ ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಮೋಹನ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಎಂ. ಕರುಣಾಕರ ಆಚಾರ್ಯ ಸ್ವಾಗತಿಸಿದರು. ಪ್ರ್ರಾಸ್ತಾವಿಕವಾಗಿ ಮಾತನಾಡಿದ ಆರ್‌ಎಸ್‌ಎಸ್ ವಿಭಾಗೀಯ ಕಾರ್ಯವಾಹ ಸುಬ್ರಹ್ಮಣ್ಯ ಹೊಳ್ಳ ಕೆಲವರು ಜನರನ್ನು ತಪ್ಪುದಾರಿಗೆ ಎಳೆಯುತ್ತಿರುವುದನ್ನು ತಡೆದು ವಿರುದ್ಧ ಅವರಿಗೆ ತಿಳುವಳಿಕೆ ನೀಡಲು, ಪರಮೋಚ್ಛ ಸಂವಿಧಾನದ ಉಳಿವಿಗಾಗಿ ಜಾಗೃತಿ ಮೂಡಿಸಲು ಈ ಸಭೆ ನಡೆಯುತ್ತಿದೆ ಎಂದರು. ಸಂದೀಪ್ ಬಡಾಕೆರೆ ವಂದಿಸಿದರು. ಮಹೇಶ್ ಶೇಟ್ ಬಡಾಕೆರೆ ನಿರೂಪಿಸಿದರು. ಸಭೆಗೆ ಸ್ಥಾಳಾಕಾಶ ನೀಡಿದ್ದ ಶೀನ ಪೂಜಾರಿ, ಸ್ಥಳೀಯ ಧುರೀಣ ನಾಣು ಡಿ. ಚಂದನ್ ಇದ್ದರು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಸೇರಿದಂತೆ ಬಿಜೆಪಿಯ ಧುರೀಣರು ಸಭೆಯಲ್ಲಿ ಭಾಗವಹಿಸಿದ್ದರು.

ಕುಂದಾಪುರ ಎಎಸ್‌ಪಿ ಹರಿರಾಮ ಶಂಕರ್, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ ಜಿ. ನಾಯಕ್, ಸಬ್ ಇನ್ಸ್‌ಪೆಕ್ಟರ್ ಸಂಗೀತಾ ನೇತೃತ್ವದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು.

 

 

Exit mobile version