Kundapra.com ಕುಂದಾಪ್ರ ಡಾಟ್ ಕಾಂ

ಪತ್ರಕರ್ತ ಅರುಣ್ ಕುಮಾರ್ ಶಿರೂರು ಅವರ ಅತ್ಯುತ್ತಮ ಗ್ರಾಮಾಂತರ ವರದಿಗೆ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ,
ಕುಂದಾಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಅತ್ಯುತ್ತಮ ಗ್ರಾಮಾಂತರ ವರದಿಗೆ ಕೊಡಮಾಡುವ ಜಿ. ನಾರಾಯಣಸ್ವಾಮಿ ಪ್ರಶಸ್ತಿಗೆ ಪತ್ರಕರ್ತ ಅರುಣ್ ಕುಮಾರ್ ಶಿರೂರು ಅವರು ಭಾಜನರಾಗಿದ್ದಾರೆ.

ಕಾಲೇಜು ದಿನಗಳಲ್ಲಿಯೇ ಸಾಹಿತ್ಯ ಹಾಗೂ ಸಂಘಟನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅರುಣ್ ಕುಮಾರ್ ಶಿರೂರು ಅವರು ಉಷಾಕಿರಣ ಪತ್ರಿಕೆಯ ಮೂಲಕ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. ಮಂದೆ ನಮ್ಮ ಟಿ.ವಿ, ಕರಾವಳಿ ನ್ಯೂಸ್ ಚಾನೆಲ್‌ಗಳಲ್ಲಿ ಸುದ್ದಿ ನಿರೂಪಕರಾಗಿ ಸೇವೆ ಸಲ್ಲಿಸಿದ್ದರು. ಉದಯವಾಣಿ ಪತ್ರಿಕೆಯ ಬೈಂದೂರು ಭಾಗದ ವರದಿಗಾರರಾಗಿ ಕಳೆದ ಹನ್ನೆರಡು ವರ್ಷಗಳಿಂದ ಪತ್ರಿಕಾರಂಗದಲ್ಲಿ ತೊಡಗಿಸಿಕೊಂಡಿರುವ ಅವರು, ಬೈಂದೂರಿನ ಗ್ರಾಮೀಣ ಪ್ರದೇಶಗಳ ವರದಿಗಾರಿಕೆಯಲ್ಲಿ ಆಸಕ್ತಿಯಿಂದಲೇ ತೊಡಗಿಕೊಂಡವರು. ಗೋಳಿಬೇರಿನ ಗೋಳಿನ ಕಥೆ, ದೇವರಗದ್ದೆ ಜನರ ಪರಿಸ್ಥಿತಿ ದೇವರೇ ಕಾಯಬೇಕು, ಹೇನುಬೇರು ಜಾನುವಾರು ಮರಣ ವರದಿ ಸೇರಿದಂತೆ ಅವರು ಹಲವು ವರದಿಗಳು ಆಳುವವರ್ಗದ ಗಮನಸೆಳೆದು ಸಮಸ್ಯೆಗಳಿಗೆ ಪರಿಹಾರ ದೊರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಪತ್ರಿಕೋದ್ಯಮದ ಜೊತೆ ಜೊತೆಗೆ ಸಂಘಟನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅರುಣ್ ಕುಮಾರ್ ಅವರು ಜೆಸಿಐ ತರಬೇತುದಾರರಾಗಿ, ಉತ್ತಮ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಶಿರೂರು ಉತ್ಸವ, ಶಿರೂರು ಟೋಲ್ ಹೋರಾಟ ಸೇರಿದಂತೆ ಹಲವು ಯಶಸ್ವಿ ಕಾರ್ಯಕ್ರಮ, ಹೋರಾಟ ರೂಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಅರುಣ್ ಕುಮಾರ್ ಅವರು ಪ್ರಸ್ತುತ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಮಾರ್ಚ್ 8ರ ಭಾನುವಾರ ಮಂಗಳೂರಿನ ಟೌನ್ ಹಾಲ್‌ನಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 35ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Exit mobile version