Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ‘ವಿಸ್ಠಿ ಆಪ್’ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಶಿಕ್ಷಣದ ದ್ಯೇಯ ಉದ್ದೇಶ ಬಗೆಗಿನ ಅಲ್ಪ ಜ್ಞಾನವೇ ವಿದ್ಯಾರ್ಥಿಗಳನ್ನ ನಿರುತ್ಸಾಹರನ್ನಾಗಿ ಮಾಡುತ್ತದೆಯೆ ಹೊರತು ಶಿಕ್ಷಣವಲ್ಲ ಎಂದು ಆಳ್ವಾಸ್ ಕಾಲೇಜಿನ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಮನೋಜ್, ನವೀನ್ ಮತ್ತು ಸಮರ್ಥ್ ರೂಪಿಸಿದ ವಿಸ್ಠಿ ಆಪ್‌ನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಶಿಕ್ಷಣ ಸಂಸ್ಥೆಗಳು ಕೇವಲ ಒಂದೇ ಉದ್ದೇಶದಿಂದ ಸಂಘಟಿತವಾದವಲ್ಲ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲೆಂದು ವಿವಿಧ ಬಗೆಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತವೆ. ಆ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಾಗ ಮಾತ್ರ ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಒಂದು ಕಂಪನಿಯನ್ನು ಪ್ರಾರಂಭಿಸುವುದು ಸುಲಭದ ಮಾತಲ್ಲ, ಆದರೆ ನಮ್ಮ ವಿದ್ಯಾರ್ಥಿಗಳು ಆದರತ್ತ ಹೆಜ್ಜೆ ಇಟ್ಟಿದ್ದಾರೆ. ಮೊದಲ ಹಂತದಲ್ಲಿ ಸುಲಭವೆನಿಸುವ ವಿಷಯಗಳು ಮುಂದಿನ ದಿನಗಳಲ್ಲಿ ಅನೇಕ ಸವಾಲುಗಳನ್ನ ತಂದೊಡ್ಡುತ್ತವೆ. ಅವೆಲ್ಲವನ್ನು ದಾಟಿ ಮುಂದೆ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿಸ್ಠಿ ಕಂಪನಿ ಪ್ರತಿಯೊಬ್ಬರನ್ನು ತಲುಪಿ, ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಹಾರೈಸಿದರು.

ಕಾರ‍್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಉಪಸ್ಥಿತರಿದ್ದರು. ಸೌಮ್ಯ ಪ್ರಾರ್ಥಿಸಿ, ಪ್ರತೀಕ್ಷ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್ ಐಟಮ್
ದುರಸ್ತಿ ಹೊಂದಿದ ದ್ವಿಚಕ್ರ ವಾಹನವನ್ನು ವಿಸ್ಠಿ ಆಪ್ ಮೂಲಕ ನಾವಿರುವ ಜಾಗದಿಂದಲೇ ರಿಪೇರಿ ಮಾಡಿಸಿಕೊಳ್ಳುವ ಸೇವೆಯನ್ನು ಪಡೆಯಬಹುದಾಗಿದೆ. ಅಲ್ಲದೆ ಬೈಕ್‌ಗಳನ್ನ ವಾಶ್ ಮಾಡಿಸುವುದು, ಪೆಟ್ರೋಲ್ ಮುಗಿದಾಗ ನಾವಿರುವ ಜಾಗಕ್ಕೆ ತಂದುಕೊಡುವ ವ್ಯವಸ್ಥೆಯನ್ನು ಈ ಆಪ್‌ನಿಂದ ಪಡೆಯಬಹುದಾಗಿದೆ.

Exit mobile version