Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ”ಅಂತರಾಷ್ಟ್ರೀಯ ಮಹಿಳಾ ದಿನ”

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಸಮಾನತೆಗಾಗಿ ಮಹಿಳೆಯರು ಹೋರಾಟ ನಡೆಸಿದರೆ ಅದು ಮುರ್ಖತನವಾಗುತ್ತದೆ ಏಕೆಂದರೆ ಮಹಿಳೆಯರು ಎಲ್ಲರಿಂಗಿಂತ ಶ್ರೇಷ್ಠರು, ಅವರ ಸಾಮರ್ಥ್ಯದ ಅರಿವು ಅವರಿಗಿದ್ದರೆ ಯಾವುದೇ ಹೋರಾಟದ ಅಗತ್ಯ ಅವರಿಗಿಲ್ಲ ಎಂದು ಮಂಗಳೂರಿನ ಆಸರೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ| ಆಶಾ ಜ್ಯೋತಿ ರೈ ಹೇಳಿದರು.

ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆಳ್ವಾಸ್ ಕಾಲೇಜಿನ ಮಹಿಳಾ ಅಭಿವೃದ್ಧಿ ಕೋಶ ಮತ್ತು ಸೊಸೈಟಿ ಫಾರ್ ವುಮೆನ್ ರಿರ್ಸೋಸ್ ಡೆವಲಪ್‌ಮೆಂಟ್ ಜತೆಗೂಡಿ ಮಿಜಾರು ಅಡಿಟೋರಿಯಮ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ತಮ್ಮ ಶಕ್ತಿ ಹಾಗೂ ಕರ್ತವ್ಯಗಳ ಕುರಿತು ಚಿಂತಿಸಬೇಕಿದೆ. ತಮಗಿರುವ ಅನೇಕ ಸೌಲಭ್ಯಗಳು ಹಾಗೂ ಸವಲತ್ತುಗಳನ್ನ ಸದುಪಯೋಗ ಪಡಿಸಿಕೊಳ್ಳುವಲ್ಲಿ ಮಹಿಳೆಯರು ತಮ್ಮ ಜವಾಬ್ದಾರಿ ಮೆರೆಯಬೇಕಿದೆ ಎಂದರು.

ಕಳೆದ ಹಲವಾರು ದಶಕಗಳಿಂದ ಮಹಿಳೆಯರ ಉನ್ನತಿ ಸಾಧ್ಯವಾಗಿದ್ದರೂ, ಶೇಕಡಾ ಏಳುರಷ್ಟು ಮಹಿಳೆಯರು ಮಾತ್ರ ಉನ್ನತ ಸ್ಥಾನದಲ್ಲಿದಲ್ಲಿರುವುದು ವಿಷಾದಕರ ಎಂದರು. ಇಂದಿಗೂ ನಮ್ಮ ಸಮಾಜದಲ್ಲಿ ಕೆಲ ವರ್ಗದ ಗಂಡಸರು ಮಹಿಳೆಯರನ್ನು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದು ಅವರನ್ನ ಮನುಷ್ಯರೆಂದು ಒಪ್ಪಿಕೊಳ್ಳಲು ಸಿದ್ದರಿಲ್ಲದೆ, ಅವಳನ್ನು ಒಂದು ವಸ್ತು ಎಂದು ಪರಿಗಣಿಸುತ್ತಿರುವುದು ಬೇಸರದ ಸಂಗತಿ ಎಂದರು. ಹೆಣ್ಣು ಸಮಾಜದಲ್ಲಿ ಅನೇಕ ಶೋಷಣೆಗೆ ಒಳಗಾಗುತ್ತಿದ್ದು, ಅತ್ಯಾಚಾರದಂತಹ ಅಮಾನೀಯ ಕೃತ್ಯಗಳಿಗೆ ಬಲಿಯಾಗಲು ಆಕೆಯ ವಸ್ತ್ರಾಲಂಕಾರಗಳೇ ಕಾರಣ ಎನ್ನುವುದು ಒಪ್ಪಲಾಸದ್ಯವಾದ ಹೇಳಿಕೆಗಳಾಗಿದ್ದು, ಸಮಾಜ ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಯಿಸಬೇಕಿದೆ ಎಂದರು. ಪ್ರತಿಯೊಬ್ಬರು ಹೆಣ್ಣನ್ನ ಒಬ್ಬ ತಾಯಿಯಾಗಿ, ತಂಗಿಯಾಗಿ, ಹೆಂಡತಿಯಾಗಿ ಪ್ರತಿದಿನವು ಸಂಭ್ರಮಿಸುತ್ತಾರೆ. ಆದ್ದರಿಂದ ಮಹಿಳಾ ದಿನಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ವರ್ಷದ 365 ದಿನದ ಪ್ರತಿ ಕ್ಷಣವು ಆಚರಿಸುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ ಮೋಹನ ಆಳ್ವ ಮಾತನಾಡಿ ಪ್ರತಿಯೊಬ್ಬ ಪುರುಷನ ಜೀವನದಲ್ಲಿ ಹೆಣ್ಣು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾಳೆ. ಸುಂದರವಾದ ಹಾಗೂ ನೆಮ್ಮದಿಯ ಜೀವನಕ್ಕೆ ಇವಳ ಪಾತ್ರ ಅತ್ಯಗತ್ಯ. ಆದ್ದರಿಂದ ಹೆಣ್ಣು ಮಕ್ಕಳಿಗೆ ಗೌರವ ಹಾಗು ವಿಶೇಷ ಸ್ಥಾನಮಾನ ನೀಡುವುದು ನಮ್ಮ ಧರ್ಮ ಎಂದರು.

ಹಿಂದೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಅನೇಕ ಸವಾಲುಗಳನ್ನ ಎದುರಿಸುತ್ತಿದ್ದರು. ಅಲ್ಲಿ ಎದುರಾಗುತ್ತಿದ್ದ ಅಡೆತಡೆಗಳಿಂದ ತಮ್ಮ ಪ್ರತಿಭೆಯನ್ನ ಅನಾವರಣಗೊಳಿಸಲಾಗುತ್ತಿರಲಿಲ್ಲ. ಪ್ರಸ್ತುತ ಯುಗದಲ್ಲಿ ಹೆಣ್ಣು ಮಕ್ಕಳು ಅನೇಕ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ತಮ್ಮನ್ನ ತಾವು ತೊಡಗಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ತಮ್ಮ ಜೀವನದಲ್ಲಿನ ಹೆಣ್ಣಿನ ಪಾತ್ರವನ್ನು ವಿವರಿಸಿ, ಮುಂದಿನ ಜನ್ಮವಿದ್ದರೆ ತಾನು ಹೆಣ್ಣಾಗಿ ಹುಟ್ಟಲು ಇಚ್ಛಿಸುತ್ತೆನೆ ಎಂದರು.

ಕಾರ್ಯಕ್ರಮದಲ್ಲಿ ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷೆ ಶಕುಂತಲಾ ನೇಜಾರು ಮತ್ತು ನಾಟಿ ವೈದ್ಯೆ ಪುತ್ತಿಗೆಯ ಪ್ರೇಮರವರನ್ನು ತಮ್ಮ ಸಮಾಜಮುಖಿ ಕಾರ‍್ಯಗಳಿಗಾಗಿ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ| ಅಶೋಕ್ ಆಂಟೋನಿ ಡಿಸೋಜಾ, ಬೆಂಗಳೂರಿನ ಟ್ಯಿಟೋಯೆವ್ರಿಯದ ಮಾನವ ಸಂಪನ್ಮೂಲದ ಸಹಾಯಕ ನಿರ್ದೇಶಕರಾದ ಶಾವರ್ ಬಾನು ಮತ್ತು ಪವನ್, ಮಹಿಳಾ ಅಭಿವೃದ್ಧಿ ಕೋಶದ ಸಂಯೋಜಕಿ ಶಾಜಿಯ ಕಾನುಮ್ ಉಪಸ್ಥಿತರಿದ್ದರು.

ಪತ್ರಿಕೋದ್ಯಮ ವಿದ್ಯಾರ್ಥಿನಿ ಮರಿಯಮ್ ಕಾರ್ಯಕ್ರಮ ನಿರೂಪಿಸಿ, ಬಿಎಸ್‌ಡಬ್ಲ್ಯೂ ವಿಭಾಗದ ಮುಖ್ಯಸ್ಥೆ ಡಾ ಮಧುಮಾಲ ಅತಿಥಿಗಳನ್ನು ಪರಿಚಯಿಸಿ, ಎಂಬಿಎ ವಿಭಾಗದ ಡೀನ್ ಡಾ ಕ್ಲಾರೆಟ್ ಸ್ವಾಗತಿಸಿ, ಸಹಾಯಕ ಪ್ರಾಧ್ಯಪಕಿ ನೂರಜಹಾನ್ ವಂದಿಸಿದರು.

Exit mobile version