ಬೈಂದೂರು: ಇಲ್ಲಿಗೆ ಸಮೀಪದ ಬಂಕೇಶ್ವರ ನಿವಾಸಿ ಸವಿತಾ ಕಾಮತ್ ಎಂಬುವವರು ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಸಂಭವಿಸಿದೆ.
ಮೃತರು ಬೈಂದೂರು ಶ್ರೀಗಣೇಶ್ ಸ್ಟುಡಿಯೋ ಮಾಲಕ ಶಿವಾನಂದ ಕಾಮತ್ ಅವರ ಪತ್ನಿಯಾಗಿದ್ದು, ಎಂದಿನಂತೆ ಗುರುವಾರ ರಾತ್ರಿ ಊಟ ಮುಗಿಸಿ ಮಲಗಿದ್ದರು. ಶುಕ್ರವಾರ ಬೆಳಿಗ್ಗೆ 6:45ರ ವೇಳೆ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಪತಿ, ಮಕ್ಕಳು ಹುಡುಕಾಟ ನಡೆಸುತ್ತಿರುವಾಗ ಮನೆ ಎದುರಿನ ಬಾವಿಯಲ್ಲಿ ಆಕೆಯ ಶವ ತೇಲುವ ಸ್ಥಿತಿಯಲ್ಲಿ ಕಂಡುಬಂದಿತ್ತು.
ತನ್ನ ಪತ್ನಿಯು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇದರಿಂದ ಈ ಘಟನೆ ಸಂಭವಿಸಿರಬಹುದೆಂದು ಸವಿತಾ ಪತಿ ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಮೃತರು ಪತಿ, ಎರಡು ಪುತ್ರ ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ.