Kundapra.com ಕುಂದಾಪ್ರ ಡಾಟ್ ಕಾಂ

ತೋಟಗಾರಿಕಾ ಬೆಳೆಗಳ ಸರಬರಾಜಿಗೆ ಲಾಕ್‌ಡೌನ್‌ನಿಂದ ವಿನಾಯತಿ: ಜಿಲ್ಲಾಧಿಕಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ರೈತರು ತಾವು ಬೆಳೆದ ತೋಟಗಾರಿಕೆ ಉತ್ಪನ್ನಗಳಾದ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜು ಮಾಡಲು ಲಾಕ್ ಡೌನ್ ಆದೇಶದಿಂದ ವಿನಾಯಿತಿ ನೀಡಲಾಗಿದೆ, ಪ್ರಯುಕ್ತ ತೋಟಗಾರಿಕೆ ಬೆಳೆಗಾರರು ತಾವು ಬೆಳೆದ, ದಾಸ್ತಾನು ಮಾಡಿಕೊಂಡಿರುವ ಹಣ್ಣು ಮತ್ತು ತರಕಾರಿಗಳನ್ನು ಆಯಾ ಮಾರುಕಟ್ಟೆಗೆ, ಹೊರ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ಸಾಗಿಸಲು ಅನುಮತಿ ನೀಡಲಾಗಿದೆ.

ಜಿಲ್ಲೆಯ ಅನೇಕ ರೈತರುಗಳು ಮಟ್ಟುಗುಳ್ಳ, ಕಲ್ಲಂಗಡಿ, ಅನಾನಸ್ಸು ಮುಂತಾದ Perishable ಹಣ್ಣು ಮತ್ತು ತರಕಾರಿಗಳನ್ನು ಬೆಳೆದಿದ್ದು, ಸದರಿ ಬೆಳೆಗಳನ್ನು ಮಾರುಕಟ್ಟೆಗೆ ಕಳುಹಿಸಲು ಸಾದ್ಯವಾಗದೆ ಸಂಕ? ಅನುಭವಿಸುತ್ತಿದ್ದು, ಉಡುಪಿ ಜಿಲ್ಲೆಯ ರೈತರು ಬೆಳೆದ ಉತ್ಪನ್ನಗಳನ್ನು ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳ ಮಾರುಕಟ್ಟೆಗೆ ಸಾಗಾಟ ಮಾಡಲು ಅನುವಾಗುವಂತೆ 7 ವಾಹನಗಳಿಗೆ ಅನುಮತಿ ಪತ್ರವನ್ನು ಒದಗಿಸಿಕೊಡಲಾಗಿದೆ.

ಜಿಲ್ಲೆಯಲ್ಲಿ ಪ್ರಸಕ್ತ 25 ಹೆಕ್ಟೇರ್ ಪ್ರದೇಶದಲ್ಲಿ 1000 ಮೆ.ಟನ್ ಕಲ್ಲಂಗಡಿ ಮತ್ತು 150 ಹೆಕ್ಟೇರ್ ಪ್ರದೇಶದಲ್ಲಿ 1732 ಮೆ.ಟನ್ ಅನಾನಸ್ಸು, ಉತ್ಪಾದನೆಯಾಗುವ ಹಾಗೂ ಮಾರುಕಟ್ಟೆಯಾಗದೆ ಇರುವ ಅಂದಾಜಿದೆ.

ಪ್ರಸಕ್ತ ಜಿಲ್ಲೆಯ ರೈತರು ಬೆಳೆದ , 6 ಮೆ.ಟನ್ ಮಟ್ಟು ಗುಳ್ಳ ವನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ, 82 ಮೆ.ಟನ್ ಕಲ್ಲಂಗಡಿಯನ್ನು ಮಂಗಳೂರು, ಉತ್ತರಕನ್ನಡ, ದಾರವಾಡ ಜಿಲ್ಲೆಗೆ, 13 ಮೆ.ಟನ್ ಅನಾನಸ್ ನ್ನು ಶಿವಮೊಗ್ಗ, ಬೆಳ್ತಂಗಡಿ (ದ.ಕ.) ಜಿಲ್ಲೆಗೆ, 20 ಮೆ.ಟನ್ ಬಾಳೆ ಯನ್ನು ಉತ್ತರ ಕನ್ನಡ, ಬೆಳ್ತಂಗಡಿ (ದ.ಕ.) ಜಿಲ್ಲೆಗೆ ಹಾಗೂ 10 ಮೆ.ಟನ್ ಪಪ್ಪಾಯವನ್ನು ಉತ್ತರ ಕನ್ನಡ ಜಿಲ್ಲೆಗೆ ಕಳುಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ

ಅಲ್ಲದೇ ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಹಣ್ಣುಗಳ ಸಗಟು ವ್ಯಾಪಾರಸ್ತರ ಸಭೆ ಕರೆದು ಜಿಲ್ಲೆಯ ವಿವಿದ ರೈತರಿಂದ , 3500 ಮೆ. ಟನ್ ಅನಾನಸ್ಸು, 5000 ಗೊನೆ ಬಾಳೆ, 55 ಮೆ. ಟನ್ ಕಲ್ಲಂಗಡಿಯನ್ನು ಮುಂದಿನ ಎರಡು ದಿನಗಳಲ್ಲಿ ರೈತರಿಂದ ಖರೀದಿಸಿ, ಮಾರಾಟ ಮಾಡಲು ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ ನೀಡಿರುತ್ತಾರೆ.

ಜಿಲ್ಲೆಯ ತೋಟಗಾರಿಕೆ ಬೆಳೆಗಾರರು ಬೆಳೆದ ಉತ್ಪನ್ನಗಳನ್ನು ಸಗಟು ವ್ಯಾಪಾರಿಗಳು ಖರೀದಿಸಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಸಗಟು ವ್ಯಾಪಾರಿಗಳು ತೋಟಗಾರಿಕೆಗೆ ಸಂಬಂಧಿಸಿದ ಕೂಲಿಕಾರರಿಗೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಗಳನ್ನು ಒದಗಿಸಬೇಕು ಮತ್ತು ಕಡ್ಡಾಯವಾಗಿ ಉಪಯೋಗಿಸುವ ಮೂಲಕ ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾರಾಟ ವ್ಯವಹಾರ ನಡೆಸುವಂತೆ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಕಛೇರಿಗಳನ್ನು ಹಾಗೂ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಉಡುಪಿ ಹಾಗೂ ಕಾರ್ಕಳ – 9481440812, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಕುಂದಾಪುರ – 9900565469 ಇವರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ./ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version