Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ನಗರದಲ್ಲಿ ಅನಗತ್ಯ ವಾಹನಗಳ ಸಂಚಾರಕ್ಕೆ ಕಡಿವಾಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕುಂದಾಪುರ ಪೊಲೀಸರು ನಗರದ ಬೀದಿಗಳ ಸಂಪರ್ಕ ಮಾರ್ಗಗಳ ಬಂದ್ ಮಾಡಿದ್ದು, ಮೂರು ಕಡೆಗಳಲ್ಲಿ ಚೆಕ್‌ಪಾಯಿಂಟ್ ನಿರ್ಮಿಸಿ ವಿಚಾರಣೆಯ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ನಗರದ ಶಾಸ್ತ್ರೀ ವೃತ್ತ, ಚರ್ಚ್ ರಸ್ತೆ ಹಾಗೂ ಚಿಕನ್‌ಸಾಲ್ ರಸ್ತೆಯನ್ನು ಹೊರತುಪಡಿಸಿ ಉಳಿದೆಲ್ಲಾ ರಸ್ತೆಗಳ ಬಾಹ್ಯ ಸಂಚಾರವನ್ನು ಸೋಮವಾರ ರಾತ್ರಿಯಿಂದಲೇ ಬಂದ್ ಮಾಡಲಾಗಿತ್ತು. ಪ್ರತಿಯೊಂದು ವಾಹವನ್ನು ನಿಲ್ಲಿಸಿ ವಿಚಾರಿಸಿದ ಬಳಿಕವಷ್ಟೇ ಅವರನ್ನು ನಗರದಿಂದ ಒಳಕ್ಕೆ ಹಾಗೂ ಹೊರಕ್ಕೆ ಬಿಡಲಾಗುತ್ತಿದೆ. ಅಗತ್ಯ ಕೆಲಸಗಳಿಗಾಗಿ ಒಂದಕ್ಕಿಂತ ಹೆಚ್ಚು ಮಂದಿ ಬಂದರೆ ಅವರನ್ನು ವಾಪಾಸ್ ಕಳುಹಿಸಲಾಗುತ್ತಿದೆ. ತಪಾಸಣೆಯ ವೇಳೆ ರಸ್ತೆಯುದ್ದಕ್ಕೂ ವಾಹನದ ಸಾಲು ಕಂಡುಬಂತು.

ಲಾಕ್‌ಡೌನ್ ಜಾರಿಯಲ್ಲಿರುವಾಗಲೇ ಕುಂದಾಪುರ ನಗರದಲ್ಲಿ ಬೆಳಿಗ್ಗೆ ವಾಹನ ದಟ್ಟಣೆಯಾಗುತ್ತಿದೆ ಎಂಬ ದೂರಿನ ಮೇರೆಗೆ ಎಎಸ್‌ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸರು ಸಾರ್ವಜನಿಕರ ಸಂಚಾರಕ್ಕೆ ಕಡಿವಾಣ ಹಾಕಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

Exit mobile version