ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗರದ ಸಂಗಮ್ ಜಂಕ್ಷನ್ ಬಳಿ ಮೀನು ಮಾರಾಟ ಮಾಡುವ ಸಂದರ್ಭ ಸಾರ್ವಜನಿಕರು ಅಂತರ ಕಾಯ್ದುಕೊಳ್ಳದೆ ಗುಂಪಾಗಿ ಸೇರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೋಮವಾರ ತಡರಾತ್ರಿ ಮೀನು ಖರೀದಿ ಮಾಡುವ ಸ್ಥಳದಲ್ಲಿ ವಿಂಗಡನೆಗೆ ಬ್ಯಾಂಡ್ ಹಾಕಿ, ಪ್ರತ್ಯೇಕ ವೃತ್ತ ಬರೆದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.
ಪುರಸಭೆ ಹಿಂಭಾಗದಲ್ಲಿ ಕಾರ್ಯಚರಿಸುತ್ತಿದ್ದ ಮೀನು ಮಾರುಕಟ್ಟೆಯು ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಆ ಬಳಿಕ ತಾತ್ಕಾಲಿಕವಾಗಿ ಸಂಗಮ್ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿಯೇ ಬೆಳಿಗ್ಗೆ ೭ ಗಂಟೆಯಿಂದ ೧೧ ಗಂಟೆಯವರೆಗೆ ಮೀನು ಮಾರಾಟ ಮಾಡಲಾಗುತ್ತಿದೆ. ಕೆಲ ದಿನಗಳಿಂದ ಇಲ್ಲಿ ಜನರು ಗುಂಪುಗುಂಪಾಗಿ ಸೇರುವುದು ಹಾಗೂ ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಎಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ್, ಪುರಸಭೆ ಸದಸ್ಯ ಶ್ರೀಧರ್ ಶೇರುಗಾರ್ ಹಾಗೂ ಪೊಲೀಸ್ ಇಲಾಖಾ ಸಿಬ್ಬಂಧಿಗಳು ಮೀನು ಮಾರಾಟಕ್ಕೆ ಸಂಗಮ್ ಜಂಕ್ಷನ್ ಬಳಿಯೇ ಸೂಕ್ತ ಸ್ಥಳ ನಿಗದಿಪಡಿಸಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಮೀನು ಖರೀದಿಸುವ ವ್ಯವಸ್ಥೆ ಕಲ್ಪಿಸಿದ್ದಾರೆ.