Kundapra.com ಕುಂದಾಪ್ರ ಡಾಟ್ ಕಾಂ

ಸ್ವಚ್ಛ ಗ್ರಾಮಕ್ಕಾಗಿ ಲಾಕ್‌ಡೌನ್‌ನಲ್ಲಿಯೂ ವಂಡ್ಸೆ ಎಸ್.ಎಲ್.ಆರ್.ಎಂ ಘಟಕ ಕಾರ್ಯನಿರ್ವಹಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲಾಕ್‌ಡೌನ್‌ನಿಂದಾಗಿ ಎಲ್ಲವೂ ಸ್ತಬ್ದವಾಗಿದೆ. ನಗರಗಳು, ಪೇಟೆ, ಪಟ್ಟಣಗಳು ಬಿಕೋ ಎನ್ನುತ್ತಿವೆ. ಸ್ವಚ್ಛತೆಯ ಕೊರತೆಯೂ ಕಾಡುತ್ತಿದೆ. ಆದರೆ ವಂಡ್ಸೆ ಗ್ರಾಮ ಲಾಕ್‌ಡೌನ್ ನಲ್ಲಿಯೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತಿದೆ. ಇದಕ್ಕೆ ಕಾರಣ ಎಸ್.ಎಲ್.ಆರ್.ಎಂ ಘಟಕ. ಲಾಕ್‌ಡೌನ್‌ನಿಂದ ಜನ ಹೊರಗೆ ಬರಲು ಹೆದರುತ್ತಿದ್ದಾರೆ. ಈ ನಡುವೆ ನಗರ ನೈರ್ಮಲ್ಯ ಹಾಳಾಗಬಾರದು, ಕಸದ ವಿಲೇವಾರಿಗೆ ತೊಡಕಾಗಬಾರದು ಎಂಬ ಹಿನ್ನೆಲೆಯಲ್ಲಿ ವಂಡ್ಸೆ ಎಸ್.ಎಲ್.ಆರ್.ಎಂನ ಕಾರ್ಯಕರ್ತರು ನಿತ್ಯವೂ ಸಾಮಾಜಿಕ ಅಂತರವಿಟ್ಟುಕೊಂಡು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಎಸ್.ಎಲ್.ಆರ್.ಎಂನ ಎಲ್ಲಾ ಕಾರ್ಯಕರ್ತರು ನಿತ್ಯವೂ ಕಸ ಸಂಗ್ರಹಣೆ, ವಿಲೇವಾರಿ, ವಿಂಗಡಣೆಯಲ್ಲಿ ಶ್ರಮಿಸುತ್ತಿದ್ದಾರೆ. ಕೊರೋನಾ ಸುರಕ್ಷತಾ ವಿಧಾನಗಳನ್ನು ಅನುಸರಿಸಿಕೊಂಡು ಸಾಮಾಜಿಕ ಅಂತರದ ಜೊತೆಯಲ್ಲಿ ಸ್ಯಾನಿಟೈಸರ್ ಬಳಕೆ, ಮುಖಕ್ಕೆ ಮಾಸ್ಕ್, ಕೈಗವಚಗಳನ್ನು ಧರಿಸಿ ಕಸ ವಿಲೇವಾರಿಯಲ್ಲಿ ಶ್ರಮಿಸುತ್ತಿದ್ದಾರೆ. ನಾಗರಕರೆಲ್ಲರ ಕರೋನಾ ಭೀತಿಯಲ್ಲಿ ಮನೆಯೊಳಗೆ ಇದ್ದರೆ ಪುರ ಸ್ವಚ್ಛತೆಯ ಮಹಾತ್ಕಾರ್ಯವನ್ನು ನಿಲ್ಲಿಸದ ಎಸ್.ಎಲ್.ಆರ್.ಎಂ ಕಾರ್ಯಕರ್ತರ ಸೇವೆ ಪ್ರಶಂಸೆಗೆ ಪಾತ್ರವಾಗುತ್ತಿದೆ.

ಕೊರೋನಾದಂತಹ ವೈರಸ್ ವಕ್ಕರಿಸುತ್ತಿರುವ ಸಂದರ್ಭದಲ್ಲಿ ಸ್ವಚ್ಛತೆಯ ಅಗತ್ಯವಿದೆ. ಕಸ ಕಡ್ಡಿ ತ್ಯಾಜ್ಯಗಳು ಎಲ್ಲೆಂದರಲ್ಲಿ ಹರಡಿದರೆ ಬೇರೆ ರೀತಿಯ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆಗಳು ಇದೆ ಎನ್ನುವುದನ್ನು ಮನಗಂಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿಯವರು ಸ್ವತಃ ಎಸ್.ಎಲ್.ಆರ್.ಎಂ ಕಾರ್ಯಕರ್ತರ ಜೊತೆ ನಿಂತು, ಅವರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ಪೇಟೆಯಲ್ಲಿ ಎಂದಿನಂತೆ ಕಸ ಸಂಗ್ರಹಣೆ, ಗ್ರಾಮೀಣ ಪ್ರದೇಶದಲ್ಲಿ ವಾರಕ್ಕೊಂದು ದಿನ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಲಾಕ್‌ಡೌನ್‌ನಿಂದ ಅಗತ್ಯ ವಸ್ತು ಪೂರೈಕೆ ಹೊರತು ಪಡಿಸಿ ಭಾಗಶಃ ಬಂದ್ ಇದ್ದರೂ ಕೂಡಾ ಕಸದ ಪ್ರಮಾಣ ಅಷ್ಟೇ ಇದೆ. ಕೊರೋನಾ ಭೀತಿಯಿಂದ ಹೊರ ಭಾಗದಲ್ಲಿರುವವರು ೯೦% ಊರಿಗೆ ಬಂದಿರುವುದರಿಂದ ಆಹಾರ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಅಂತೆಯೇ ಕಸದ ಪ್ರಮಾಣವೂ ದೊಡ್ಡ ಪ್ರಮಾಣದಲ್ಲಿಯೇ ಉತ್ಪಾದನೆಯಾಗುತ್ತಿದೆ.

ವಂಡ್ಸೆ ಎಸ್.ಎಲ್.ಆರ್.ಎಂ ಘಟಕ ಇವತ್ತು ಮಾದರಿ ಘಟಕವಾಗಿ ದೇಶದಲ್ಲಿಯೇ ಗುರುತಿಸಿಕೊಂಡಿದೆ. ಈ ತುರ್ತು ಸಂದರ್ಭದಲ್ಲಿಯೂ ಕೂಡಾ ಗ್ರಾಮ ಸ್ವಾಸ್ಥ್ಯ ಕಾಪಾಡುವಲ್ಲಿ ಧೈರ್ಯದ ಹೆಜ್ಜೆ ಇಟ್ಟಿದೆ. ಇಲ್ಲಿನ ಎಂಟು ಮಂದಿ ಕಾರ್ಯಕರ್ತರ ಶ್ರಮ ಗ್ರಾಮದ ಸ್ವಚ್ಛತೆಯಲ್ಲಿ ಗಮನಾರ್ಹವಾಗಿದೆ.

 

Exit mobile version