Kundapra.com ಕುಂದಾಪ್ರ ಡಾಟ್ ಕಾಂ

ಅಧ್ಯಯನಶೀಲರು ಒಳ್ಳೆಯ ಪತ್ರಕರ್ತರಾಗುತ್ತಾರೆ: ವಳಲಂಬೆ

ಕುಂದಾಪುರ: ಪತ್ರಿಕಾ ದಿನಾಚರಣೆ ಎನ್ನುವುದು ಆಚರಣೆಗೆ ಮಾತ್ರ ಸೀಮಿತವಾಗದೇ, ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಗಳು ಆತ್ಮಾವಲೋಕನ ಮಾಡಿಕೊಳ್ಳುವಂತಹ ದಿನವಾಗಬೇಕು. ವಿದ್ಯಾರ್ಥಿಗಳು ಎಲ್ಲಿಯವರೆಗೆ ಅಧ್ಯಯನಶೀಲರಾಗುವಿದಿಲ್ಲವೋ ಅಲ್ಲಿಯ ವರೆಗೆ ಒಳ್ಳೆಯ ಪತ್ರಕರ್ತರಾಗಲು ಸಾಧ್ಯವಿಲ್ಲ ಎಂದು ಪ್ರೈಮ್ ಟಿವಿಯ ಕಾರ್ಯಕ್ರಮ ನಿರ್ದೇಶಕ ರವಿರಾಜ್ ವಳಲಂಬೆ ಹೇಳಿದರು.

ಅವರು ಭಂಡಾರ್ಕಾರ್ಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಯೋಜಿಸಿದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಬರವಣಿಗೆ, ಆಸಕ್ತಿ ಮತ್ತು ಹೊಸತನ್ನು ತಿಳಿಯುವ ಉತ್ಸಾಹ ಪತ್ರಿಕೋದ್ಯಮದಲ್ಲಿ ಬೆಳೆಯಲು ಸಹಕಾರಿಯಾದರೇ, ಸಂಶೋಧನಾತ್ಮಕ ದೃಷ್ಠಿಕೋನದಿಂದ ನಮ್ಮೊಳಗಿನ ವಿಚಾರಗಳು ಹೆಚ್ಚಾಗುತ್ತಾ ಹೋಗುತ್ತವೆ. ಒಂದು ಘಟನೆಯನ್ನು ಕೇವಲ ಸುದ್ದಿಯಾಗಿ ಮಾತ್ರವೇ ನೋಡದೆ ಅದರ ಒಳಹೊರವನ್ನು ಅರಿಯುವ ಮತ್ತು ಅದಕ್ಕೆ ಸ್ಪಂದಿಸುವ ಗುಣವನ್ನು ಪತ್ರಕರ್ತರಾಗುವವರು ಬೆಳೆಸಿಕೊಳ್ಳಬೇಕಿದೆ ಎಂದವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ನಾರಾಯಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ರವಿರಾಜ್ ವಳಲಂಬೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪತ್ರಿಕೋದ್ಯಮ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಪ್ರಬಂಧ ಸ್ವರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಪಾರ್ವತಿ ಜಿ. ಐತಾಳ್, ಕನ್ನಡ ವಿಭಾಗದ ಮುಖ್ಯಸ್ಥೆ ರೇಖಾ ವಿ. ಬನ್ನಾಡಿ ಉಪಸ್ಥಿತರಿದ್ದರು.

ಉಪನ್ಯಾಸಕಿ ರೋಹಿಣಿ ಶರಣ್ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸವಿತಾ ಜೋಗಿ ಧನ್ಯವಾದಗೈದರು. ವಿದ್ಯಾರ್ಥಿನಿ ಜ್ಯೋತಿ ಪ್ರಾರ್ಥಿಸಿದರು. ಅಮೃತಾ ಕಾರ್ಯಕ್ರಮ ನಿರೂಪಿಸಿದರು.

Exit mobile version