Site icon Kundapra.com ಕುಂದಾಪ್ರ ಡಾಟ್ ಕಾಂ

ಮುಂಬೈನಿಂದ-ಕುಂದಾಪುರಕ್ಕೆ ಬರುತ್ತಿದ್ದ ಟಿಟಿಗೆ ಬೆಂಕಿ, ಕುಟುಂಬಿಕರು ಪಾರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಮೂಲದ ಕುಟುಂಬವೊಂದು ಟೆಂಪೋ ಟ್ರಾವೆಲ್ಲರ್(ಟಿಟಿ) ಮೂಲಕ ಮುಂಬೈನಿಂದ ಊರಿಗೆ ಮರಳುತ್ತಿರುವ ಸಂದರ್ಭ, ಆಕಸ್ಮಿಕ ಬೆಂಕಿಗಾಹುತಿಯಾದ ಘಟನೆ ಸೋಮವಾರ ಸಂಜೆ ನಡೆದಿದ್ದು, ಟಿಟಿಯಲ್ಲಿ ಪ್ರಯಾಣಿಸುತ್ತಿದ್ದ ಹನ್ನೊಂದು ಮಂದಿಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೋಮವಾರ ಮುಂಬೈನ ಭಾಂಡುಪ್‌ನಿಂದ ಊರಿಗೆ ಪ್ರಯಾಣ ಬೆಳಿಸಿದ್ದ ಆಲೂರು ಸಮೀಪ ಹುಯ್ಯಾಣದ ಹನ್ನೊಂದು ಮಂದಿಯಿದ್ದ ಟೆಂಪೋ ಟ್ರಾವೆಲ್ಲರ್ ಲೋನಾವಾಲಾ ಸಮೀಪಿಸುತ್ತಿದ್ದಂತೆಯೇ ಸ್ಟೇರಿಂಗ್ ಸಮೀಪದಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಇಡೀ ವಾಹನಕ್ಕೆ ವ್ಯಾಪಿಸಿತ್ತು. ಚಾಲಕನ ಸಮಯಪ್ರಜ್ಞೆಯಿಂದಾಗಿ ಟಿಟಿ ಒಳಗಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ.

ನೆರವಾದ ಸಚಿವ ಕೋಟ ಶ್ರೀನಿವಾಸ ಪೂಜಾರಿ:
ದಾರಿ ಮಧ್ಯೆಯೇ ವಾಹನ ಸುಟ್ಟು ಹೋಗಿದ್ದರಿಂದ ಅತಂತ್ರರಾದ ಕುಟುಂಬ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಂಪರ್ಕಿಸಿದ್ದು, ತಕ್ಷಣವೇ ಸ್ಪಂದಿಸಿದ ಅವರು ಸ್ಥಳೀಯ ಸಂಘಟನೆಗಳ ಮುಖಂಡರಿಗೆ ಕರೆ ಮಾಡಿ ನೆರವಾಗುವಂತೆ ಕೋರಿಕೊಂಡರು. ಅಲ್ಲಿನ ಪೊಲೀಸರ ಸಹಕಾರದಿಂದ ಕುಟುಂಬಿಕರನ್ನು ನಿಪ್ಪಾಣಿಯವರೆಗೆ ಬಿಡಲಾಯಿತು. ಅಲ್ಲಿಂದ ಊರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ವ್ಯವಸ್ಥೆ ಮಾಡಿದ್ದ ವಾಹನದಲ್ಲಿ ಊರಿಗೆ ಪ್ರಯಾಣ ಮುಂದುವರಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version